ಡ್ರಗ್ಸ್ ಮಾಫಿಯಾ: ವೀರೇನ್ ಖನ್ನಾ ಸಹಚರ ಸೇರಿ ಇಬ್ಬರ ಬಂಧನ
ಮಂಗಳೂರಿನ ಪ್ರತೀಕ್ ಶೆಟ್ಟಿ, ಹರ್ಯಾಣದ ಆದಿತ್ಯ ಅಗರವಾಲ್ ಅರೆಸ್ಟ್| 1 ಲಕ್ಷ ರು. ವೇತನದ ಕೆಲಸ ಬಿಟ್ಟು ಡ್ರಗ್ಸ್ ಮಾರುತ್ತಿದ್ದ ಟೆಕ್ಕಿ ಪ್ರತೀಕ್ ಶೆಟ್ಟಿ|ವೀರೇನ್ ಖನ್ನಾನ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಆದಿತ್ಯ ಅಗರವಾಲ್| ರಾಗಿಣಿಗೆ ನಿರಂತರ ಸಂಪರ್ಕ|
ಬೆಂಗಳೂರು(ಸೆ.12): ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣದ ತನಿಖೆ ತೀವ್ರಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವೀರೇನ್ ಖನ್ನಾ ಸಹಚರ ಸೇರಿ ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ. ಮಂಗಳೂರಿನ ಪ್ರತೀಕ್ ಶೆಟ್ಟಿ ಹಾಗೂ ಹರಿಯಾಣ ಮೂಲದ ಆದಿತ್ಯ ಅಗರವಾಲ್ ಬಂಧಿತರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
"
ಎಂಜಿನಿಯರಿಂಗ್ ಪದವೀಧರನಾಗಿರುವ ಪ್ರತೀಕ್ ಮೂಲತಃ ಮಂಗಳೂರಿನವನಾಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ ಆರೋಪಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮಾದಕ ವಸ್ತು ಸೇವನೆ ಚಟಕ್ಕೆ ಬಿದ್ದಿದ್ದ ಆರೋಪಿಗೆ ಆಫ್ರಿಕನ್ ಪ್ರಜೆಗಳು ನೇರವಾಗಿ ಸಂಪರ್ಕಕ್ಕೆ ಬಂದಿದ್ದರು. ಮಾಸಿಕ ಒಂದು ಲಕ್ಷ ರು. ವೇತನ ಬಿಟ್ಟು ಆರೋಪಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತಾನೇ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದ. ತನ್ನ ಜಾಲದ ನಂಟನ್ನು ದೊಡ್ಡದಾಗಿಸಿಕೊಂಡಿದ್ದ. ಕೊಕೇನ್, ಅಫೀಮು, ಗಾಂಜಾ, ಎಂಡಿಎಂ ಸೇರಿದಂತೆ ಎಲ್ಲ ರೀತಿಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. 2018ರಲ್ಲಿ ಬೆಂಗಳೂರಿನ ಬಾಣಸವಾಡಿ ಪೊಲೀಸರಿಂದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ಆರೋಪಿ ತನ್ನ ದಂಧೆ ನಿಲ್ಲಿಸಿರಲಿಲ್ಲ.
ಕೇವಲ ನಟಿಯರು ಅರೆಸ್ಟ್: ಪ್ರಕರಣದ A1 ಆರೋಪಿಯೇ ಇನ್ನೂ ಬಂಧನವಾಗಿಲ್ಲ..!
ರಾಗಿಣಿಗೆ ನಿರಂತರ ಸಂಪರ್ಕ:
ಪೇಜ್ ತ್ರಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ರಾಗಿಣಿಗೆ ಪ್ರತೀಕ್ ಶೆಟ್ಟಿ ಸಂಪರ್ಕಕ್ಕೆ ಬಂದಿದ್ದ. ಆರೋಪಿ ರವಿಶಂಕರ್ ಹಾಗೂ ರಾಗಿಣಿಗೆ ಆಪ್ತನಾಗಿದ್ದ. ಯಾವುದೇ ಪಾರ್ಟಿ ಆಯೋಜನೆಯಾದರೂ ಪ್ರತೀಕ್ ಶೆಟ್ಟಿಮಾದಕ ವಸ್ತು ಪೂರೈಕೆ ಮಾಡುತ್ತಿದ್ದ. ಸೆಲೆಬ್ರೆಟಿಗಳು, ಉದ್ಯಮಿಗಳು ಹಾಗೂ ಶ್ರೀಮಂತರ ಮಕ್ಕಳಿಗೆ ಡ್ರಗ್ಸ್ ಪೂರೈಸುತ್ತಿದ್ದ. ವೀರೇನ್ ಖನ್ನಾನ ಜತೆಗೂ ಹೆಚ್ಚಿನ ನಂಟು ಹೊಂದಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ಡ್ರಗ್ಸ್ ಪಾರ್ಟಿ ಆಯೋಜನೆಯ ಕಿಂಗ್ಪಿನ್ ವೀರೇನ್ ಖನ್ನಾ ಸಹಚರ ಆದಿತ್ಯ ಅಗರ್ವಾಲ್ ಎಂಬಾತನನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ವೀರೇನ್ ಖನ್ನಾ ಪಾರ್ಟಿಯಲ್ಲಿ ಆದಿತ್ಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಆದಿತ್ಯ ಈವೆಂಟ್ ಮ್ಯಾನೇಜ್ಮೆಂಟ್ ಸ್ವಂತ ಕಂಪನಿ ಹೊಂದಿದ್ದ. ಈತ ಕೂಡ ಸೆಲೆಬ್ರಿಟಿಗಳಿಗಾಗಿ ಪಾರ್ಟಿ ಆಯೋಜಿಸುತ್ತಿದ್ದ. ಅಲ್ಲದೆ ಡ್ರಗ್ ಪೆಡ್ಲರ್ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಕೊಟ್ಟಮಾಹಿತಿ ಮೇರೆಗೆ ಆದಿತ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.