ವೈಟ್ಫೀಲ್ಡ್ನಲ್ಲಿ, ಸಹೋದರನಿಗೆ ಗಂಡಾಂತರವಿದೆ, ಪೂಜೆ ಮಾಡಿಸದಿದ್ದರೆ 10 ದಿನದಲ್ಲಿ ಸಾಯುತ್ತಾನೆ ಎಂದು ಹೆದರಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ ವಂಚಿಸಲಾಗಿದೆ. ಪೂಜೆಯ ನೆಪದಲ್ಲಿ ಮನೆಗೆ ಬಂದ ಆರೋಪಿಗಳು, ಸುಮಾರು 7 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನವೀದಾ ಸುಲ್ತಾನ ಮತ್ತು ಪರ್ವೇಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪೂಜೆಯ ನೆಪದಲ್ಲಿ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ₹7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಮಹಿಳೆ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ವೈಟ್ಫೀಲ್ಡ್ನ ಅಂಬೇಡ್ಕರ್ ನಗರ ನಿವಾಸಿ ಮೋಯಿನ್ ಪಾಷಾ ಎಂಬುವರು ನೀಡಿದ ದೂರಿನನ್ವಯ ನವೀದಾ ಸುಲ್ತಾನ ಮತ್ತು ಪರ್ವೇಜ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ
ದೂರುದಾರರಾದ ಮೋಯಿನ್ ಪಾಷಾ ಅವರು, ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಮೇ 23ರಂದು ಸ್ನೇಹಿತನ ಮನವಿ ಮೇರೆಗೆ ನವೀದಾ ಸುಲ್ತಾನ ಎಂಬಾಕೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದೆ. ಈ ವೇಳೆ ನನ್ನ ಸಹೋದರನನ್ನು ನೋಡಿ, ಈತನಿಗೆ ಗಂಡಾಂತರವಿದೆ. ಪೂಜೆ ಮಾಡಿಸದಿದ್ದರೆ 10 ದಿನದೊಳಗೆ ಸಾಯುತ್ತಾನೆ ಎಂದು ಬೆದರಿಸಿದ್ದಳು.
ಇದರಿಂದ ಹೆದರಿ ಆಕೆಯ ಅಣತಿಯಂತೆ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿ ಸಿದ್ಧಪಡಿಸಿಕೊಂಡು ಮೇ 25ರಂದು ಮನೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದೆ. ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವದವರೆಗೆ ಪೂಜೆ ಮಾಡಲಾಗಿತ್ತು. ಪೂಜೆ ವೇಳೆ ಆರೋಪಿಗಳ ಸೂಚನೆ ಮೇರೆಗೆ ಮನೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ತಂದಿಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯೊಳಗೆ ಬಟ್ಟೆಯಲ್ಲಿ ಚಿನ್ನವಿಟ್ಟು ಗಂಟು ಹಾಕಿ 90 ದಿನಗಳ ಕಾಲ ತೆಗೆಯದಂತೆ ತಿಳಿಸಿದ್ದರಿಂದ ಅದನ್ನು ರೂಮಿನಲ್ಲಿ ಇಡಲಾಗಿತ್ತು. ಪೂಜೆಯ ಬಳಿಕ ಬೆಳಗಿನ ಜಾವ ಆರೋಪಿಗಳು ತೆರಳಿದ್ದರು. ಅಂದು ಪೂಜೆಗಾಗಿ ಸುಮಾರು ₹30 ಸಾವಿರ ಖರ್ಚು ಮಾಡಲಾಗಿತ್ತು.
ಕೆಲ ದಿನಗಳ ಬಳಿಕ ನವೀದಾ ಕರೆ ಮಾಡಿ ₹60 ಸಾವಿರ ಸಾಲ ನೀಡುವಂತೆ ಕೇಳಿದ್ದಳು. ಹಣ ನೀಡಲು ನಿರಾಕರಿಸಿದ್ದಕ್ಕೆ ತನ್ನ ವಿರುದ್ಧವೇ ಕಿಡಿಕಾರಿದ್ದಳು. ಆಕೆಯ ಮೇಲೆ ಅನುಮಾನಗೊಂಡು ಮನೆಗೆ ಬಂದು ಪೆಟ್ಟಿಗೆಯನ್ನು ತೆಗೆದು ನೋಡಿದ್ದಾಗ ಗಂಟು ಕಟ್ಟಿದ ಬಟ್ಟೆಯಲ್ಲಿದ್ದ ಚಿನ್ನ ನಾಪತ್ತೆಯಾಗಿತ್ತು. ಚಿನ್ನಾಭರಣ ನೀಡುವಂತೆ ಪ್ರಶ್ನಿಸಿದಾಗ ಕೊಡುವುದಾಗಿ ನೆಪಗಳನ್ನು ಹೇಳಿ ಈವರೆಗೂ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


