*  ಷೇರು ಮಾರುಕಟ್ಟೆಯಲ್ಲಿ ನಷ್ಟ*  ಮಾಡಿದ್ದ ಸಾಲ ತೀರಿಸಲು ಕೃತ್ಯ*  ಮರುಕ ವ್ಯಕ್ತಪಡಿಸಿ ದೂರು ಹಿಂದಕ್ಕೆ 

ಬೆಂಗಳೂರು(ಜೂ.03): ಟ್ರೇಡಿಂಗ್‌ ಆ್ಯಪ್‌ನಲ್ಲಿ ಉಂಟಾದ 15 ಸಾವಿರ ನಷ್ಟ ಭರಿಸಲು ಸರಗಳ್ಳತನಕ್ಕಿಳಿದಿದ್ದ ವಿದ್ಯಾರ್ಥಿನಿ ಸೇರಿ ಇಬ್ಬರು ಪದವಿ ವಿದ್ಯಾರ್ಥಿಗಳು ನಂದಿನಿ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಇಬ್ಬರು ಮಲ್ಲೇಶ್ವರದ ನಿವಾಸಿಗಳಾಗಿದ್ದು, ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಐದು ದಿನಗಳ ಹಿಂದೆ ಬಿಎಚ್‌ಇಎಲ್‌ ಮಿನಿ ಕಾಲೋನಿ ಸಮೀಪ ವೃದ್ಧೆಯೊಬ್ಬರಿಂದ ಸರಗಳ್ಳತನಕ್ಕೆ ಯತ್ನಿಸಿ ವಿದ್ಯಾರ್ಥಿಗಳು ವಿಫಲರಾಗಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಇಬ್ಬರು ಪದವಿ ತರಗತಿಯ ಸಹಪಾಠಿಗಳಾಗಿದ್ದು, ಗೆಳೆತನದಲ್ಲೇ ಆನ್‌ಲೈನ್‌ ಟ್ರೇಡಿಂಗ್‌ ಆ್ಯಪ್‌ನಲ್ಲಿ .15 ಸಾವಿರ ಹಣ ಹೂಡಿಕೆ ಮಾಡಿದ್ದರು. ಆದರೆ ಮೊದ ಮೊದಲು ಲಾಭ ಪಡೆದು ಬಳಿಕ ಅವರು ಕೈ ಸುಟ್ಟುಕೊಂಡಿದ್ದಾರೆ. ಈ ಹಣ ಹೂಡಿಕೆ ಸಲುವಾಗಿ ಸಾಲವನ್ನು ಲೋನ್‌ ಆ್ಯಪ್‌ಗಳಿಂದ .15 ಸಾವಿರ ಪಡೆದು .10 ಸಾವಿರವನ್ನು ಅವರು ಮರಳಿಸಿದ್ದರು. ಆದರೆ ಬಾಕಿ .5 ಸಾವಿರ ಸಾಲಕ್ಕಾಗಿ ಸರಗಳ್ಳತನಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Hubballi Crime: ಆನ್‌ಲೈನ್‌ ಆ್ಯಪ್‌ನಿಂದ ಸಾಲ ಡೇಂಜರ್‌: ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್‌..!

ಇಂಟರ್‌ನೆಟ್‌ ನೋಡಿ ಸರಗಳ್ಳತನ

ಸುಲಭವಾಗಿ ಹಣ ಸಂಪಾದನೆಗೆ ಸೂಕ್ತ ಅಪರಾಧ ಕೃತ್ಯ ಯಾವುದು ಎಂದು ಇಂಟರ್‌ನೆಟ್‌ನಲ್ಲಿ ವಿದ್ಯಾರ್ಥಿಗಳು ಹುಡುಕಾಡಿದ್ದರು. ಆಗ ಸರಗಳ್ಳತನ ಬಗ್ಗೆ ತಿಳಿದ ಅವರು, ಮೇ 28ರಂದು ನಂದಿನಿ ಲೇಔಟ್‌ ವ್ಯಾಪ್ತಿಯಲ್ಲಿ ಕೃತ್ಯ ಎಸಗಲು ನಿರ್ಧರಿಸಿದ್ದರು. ಅಂತೆಯೇ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತೆಯ ಸೋಗಿನಲ್ಲಿ ಕರ ಪತ್ರ ಹಂಚುವಂತೆ ಹೋಗಿ ವೃದ್ಧೆಯಿಂದ ಸರಗಳ್ಳತನಕ್ಕೆ ಯತ್ನಿಸಿದ್ದಳು. ಆಗ ಅಜ್ಜಿ ರಕ್ಷಣೆಗೆ ಕೂಗಿಕೊಂಡಾಗ ಚಿನ್ನದ ಸರವನ್ನು ಬಿಟ್ಟು ಆಕೆ ಕಾಲ್ಕಿತ್ತಿದ್ದಳು. ಸಮೀಪದಲ್ಲೇ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಆಕೆಯ ಸ್ನೇಹಿತ ತಕ್ಷಣವೇ ವಿದ್ಯಾರ್ಥಿನಿಯನ್ನು ಕುರಿಸಿಕೊಂಡು ಶರವೇಗದಲ್ಲಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮರುಕ ವ್ಯಕ್ತಪಡಿಸಿ ದೂರು ಹಿಂದಕ್ಕೆ

ಇಬ್ಬರು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಪದವಿಯಲ್ಲಿ ಉತ್ತಮ ಅಂಕಗಳಿಂದಲೇ ತೇರ್ಗಡೆಗೊಂಡಿದ್ದರು. ಸಾಲ ತೀರಿಸುವ ಸಲುವಾಗಿ ಸರಗಳ್ಳತಕ್ಕಿಳಿದಿದ್ದ ವಿದ್ಯಾರ್ಥಿಗಳ ಬಗ್ಗೆ ಮರುಕು ವ್ಯಕ್ತಪಡಿಸಿ ತಮ್ಮ ದೂರು ಹಿಂಪಡೆಯಲು ಸಂತ್ರಸ್ತೆರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.