ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೂರ ತಾಂಡಾದಲ್ಲಿ ನಡೆದ ಘಟನೆ

ರಾಮದುರ್ಗ(ಅ.27): ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯನ ಮನೆಗೆ ದರೋಡೆಕೋರರ ಗುಂಪೊಂದು ದಾಳಿ ಮಾಡಿ ಮನೆಯವರ ಮೇಲೆ ಹಲ್ಲೆ ನಡೆಸಿ ಮಗನ ಸಾವಿನಿಂದ ಬಂದಿದ್ದ ವಿಮೆ ಹಣ 23 ಲಕ್ಷ, 120 ಗ್ರಾಮ ಚಿನ್ನಾಭರಣ ದೋಚಿ ಪರಾರಿಯಾಗಿದ ಘಟನೆ ಭಾನುವಾರ ಮಧ್ಯರಾತ್ರಿ ತಾಲೂಕಿನ ಕಟಕೋಳ ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೂರ ತಾಂಡಾದಲ್ಲಿ ನಡೆದಿದೆ.

ತಾಲೂಕಿನ ಬನ್ನೂರ ತಾಂಡಾದ ನಿವಾಸಿ ಬನ್ನೂರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರು ರಜಪೂತ ಮನೆ ದರೋಡೆ ಮಾಡಲಾಗಿದೆ. ರಾತ್ರಿ ಮಲಗಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಕಾಲಿಂಗ್‌ ಬೆಲ್‌ ಒತ್ತಿದಾಗ ಚಂದ್ರ ಪತ್ನಿ ಬಾಗಿಲ ತೆರೆದಾಗ ಸುಮಾರು 7-8 ಜನರು ಒಳಗೆ ನುಗ್ಗಿ ತಲೆಗೆ ಬಡೆದು ಬಟ್ಟೆಯಿಂದ ಬಾಯಿ ಮುಚ್ಚಿ ನಂತರ ಚಂದ್ರ ರಜಪೂತ ಮತ್ತು ಸೊಸೆಯನ್ನು ಬಟ್ಟೆಯಿಂದ ಬಾಯಿ ಕಟ್ಟಿಹಾಕಿ ಟ್ರೇಜರಿ ಒಡೆದು ಅದರಲ್ಲಿದ್ದ ಸುಮಾರು .23 ಲಕ್ಷ ಹಣ ಮತ್ತು 120 ಗ್ರಾಂ ಬಂಗಾರದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಮಂಗಗಳನ್ನು ಕೊಂದು ಮರಕ್ಕೆ ನೇಣು ಹಾಕಿದ ದುಷ್ಕರ್ಮಿಗಳು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಮಗ ಆಕಸ್ಮಿಕ ನಿಧನ ಹೊಂದಿದ್ದರಿಂದ ಬಂದಿರುವ ವಿಮೆ ಹಣವನ್ನು ತಂದು ಮನೆಯಲ್ಲಿಟ್ಟಿದ್ದರು. ಇದೀಗ ಹಣವನ್ನುವನ್ನು ದರೋಡೆಕೋರರು ದೋಚಿಕೊಂಡು ಹೋಗಿದ್ದಾರೆ. ದರೋಡೆಕೋರರೆಲ್ಲ ಮುಸುಕುದಾರಗಳಾಗಿದ್ದು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು ಎಂದು ಚಂದ್ರು ತಿಳಿಸಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಪರಿಶೀಲಿಸಿದರು. ಪ್ರಕರಣ ಕಟಕೋಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿ ಪರಿಶೀಲಿಸಿದರು.