ಬೆಂಗಳೂರು: ಕದ್ದ ಹಣ ಭಿಕ್ಷುಕರಿಗೆ ದಾನ ಮಾಡ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್
ಬಂಧಿತ ಆರೋಪಿಯಿಂದ 12 ಲಕ್ಷ ರು. ನಗದು ಹಾಗೂ 50 ಗ್ರಾಂ ಚಿನ್ನ ಜಪ್ತಿ
ಬೆಂಗಳೂರು(ಅ.26): ಮನೆಗಳ್ಳತನದಲ್ಲಿ ಸಂಪಾದಿಸಿದ ಹಣದಲ್ಲಿ ಸ್ಪಲ್ಪ ಭಾಗವನ್ನು ಚರ್ಚ್ ಹಾಗೂ ಭಿಕ್ಷುಕರಿಗೆ ದಾನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾನ್ ಮೇಲ್ವಿನ್ ಬಂಧಿತನಾಗಿದ್ದು, ಆರೋಪಿಯಿಂದ 12 ಲಕ್ಷ ರು. ನಗದು ಹಾಗೂ 50 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮಡಿವಾಳ ಸಮೀಪ ಪಾಪಿರೆಡ್ಡಿ ಎಂಬುವರ ಮನೆಗೆ ಕನ್ನ ಹಾಕಿ 20 ಲಕ್ಷ ರು. ನಗದು ಹಾಗೂ ಚಿನ್ನಾಭರಣವನ್ನು ಮೇಲ್ವಿನ್ ದೋಚಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Tumakuru: ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ
ಜಾನ್ ಮೇಲ್ವಿನ್ ವೃತ್ತಿಪರ ಖದೀಮನಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಆತನ ಮೇಲೆ ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುವುದು ಆತನ ಕೃತ್ಯವಾಗಿತ್ತು. ಹೀಗೆ ಸಂಪಾದಿಸಿದ ಹಣದಲ್ಲಿ ಚಚ್ರ್ ಹಾಗೂ ಭಿಕ್ಷುಕರಿಗೆ ಸ್ಪಲ್ಪ ಹಣ ವಿತರಿಸಿ ಇನ್ನುಳಿದ ಹಣದಲ್ಲಿ ಮೋಜು ಮಸ್ತಿ ನಡೆಸುತ್ತಿದ್ದ. ಅಂತೆಯೇ ಪಾಪಿರೆಡ್ಡಿ ಅವರ ಮನೆಯಲ್ಲಿ ದೋಚಿದ 20 ಲಕ್ಷ ರು. ಹಣದಲ್ಲಿ ಸ್ಪಲ್ಪ ಹಣವನ್ನು ಚಚ್ರ್ಗೆ ತೆರಳಿ ಹುಂಡಿಗೆ ಹಾಕಿದ್ದ ಆರೋಪಿ, ಅದೇ ಚರ್ಚ್ ಮುಂದೆ ಕುಳಿತಿದ್ದ ಭಿಕ್ಷುಕರಿಗೆ ಕೈ ಸಿಕ್ಕಷ್ಟು ಹಣವನ್ನು ದಾನ ಮಾಡಿ ಬಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.