*  ಪೊಲೀಸರ ಬಲೆಗೆ ಬಿದ್ದ*  ಮೋಜು ಮಸ್ತಿಗಾಗಿ ಸೈಕಲ್‌ ಕಳ್ಳತನ*  ದೂರು ನೀಡಲ್ಲ ಎಂಬ ಧೈರ್ಯ 

ಬೆಂಗಳೂರು(ಮೇ.29): ಮೋಜು-ಮಸ್ತಿಗೆ ಸುಲಭವಾಗಿ ಹಣ ಹೊಂದಿಸಲು ಸೈಕಲ್‌ಗಳನ್ನು ಮಾತ್ರ ಕಳವು ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬ ಸುದ್ದಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Add Asianetnews Kannada as a Preferred SourcegooglePreferred

ಮೈಲಸಂದ್ರ ನಿವಾಸಿ ಬಾಲರಾಜ್‌ ಅಲಿಯಾಸ್‌ ಬಾಲ (48) ಬಂಧಿತ. ಈತನಿಂದ .6 ಲಕ್ಷ ಮೌಲ್ಯದ 54 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸುದ್ದಗುಂಟೆ ವ್ಯಾಪ್ತಿಯ ಮನೆಯೊಂದರಲ್ಲಿ ಸೈಕಲ್‌ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾದಲ್ಲಿ ದೊರೆತ ಸುಳಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈತನ ಬಂಧನದಿಂದ ಸುದ್ದಗುಂಟೆ ಠಾಣೆಯಲ್ಲಿ 9 ಹಾಗೂ ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ 1 ದೂರು ಸೇರಿ ಒಟ್ಟು 10 ಸೈಕಲ್‌ ಕಳವು ಪ್ರಕರಣಗಳು ಪತ್ತೆಯಾಗಿವೆ.

Davanagere: ಭತ್ತ ಕಟಾವು ಮಾಡುವಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು

ವೃತ್ತಿಪರ ಕಳ್ಳನಾಗಿರುವ ಬಾಲರಾಜ್‌ ಈ ಹಿಂದೆ ತಿಲಕ ನಗರದಲ್ಲಿ ನೆಲೆಸಿದ್ದ ವೇಳೆ ಮನೆಗಳವು ಮಾಡಿ ಹಲವು ಬಾರಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಲಸಂದ್ರಕ್ಕೆ ವಾಸ್ತವ್ಯ ಬದಲಿಸಿದ್ದ ಆರೋಪಿ ಮತ್ತೆ ಸೈಕಲ್‌ ಕಳವು ಕೃತ್ಯದಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಯಾರೂ ದೂರು ಕೊಡಲ್ಲ ಎಂದು ಸೈಕಲ್‌ಗಳಿಗೆ ಕನ್ನ

ಸೈಕಲ್‌ ಕಳವು ಮಾಡುವುದರಿಂದ ಬಹುತೇಕರು ಪೊಲೀಸರಿಗೆ ದೂರು ನೀಡುವುದಿಲ್ಲ. ಮನೆಗಳ್ಳತನಕ್ಕಿಂತ ಸೈಕಲ್‌ ಕಳವು ಸುಲಭ. ಯಾವುದೇ ಕಷ್ಟವಿಲ್ಲದೆ ಸೈಕಲ್‌ ಕದ್ದು ಸುಲಭವಾಗಿ ವಿಲೇವಾರಿ ಮಾಡಬಹುದು ಎಂಬ ಕಾರಣಕ್ಕೆ ಸೈಕಲ್‌ ಕಳ್ಳತನಕ್ಕೆ ಇಳಿದಿದ್ದ. ಮನೆ ಆವರಣ, ಪಾರ್ಕಿಂಗ್‌ ಸ್ಥಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದುಬಾರಿ ದರದ ಸೈಕಲ್‌ಗಳನ್ನು ಕಳುವು ಮಾಡುತ್ತಿದ್ದ. ಈ ಸೈಕಲ್‌ಗಳನ್ನು ಕೇವಲ ಎರಡು-ಮೂರು ಸಾವಿರಕ್ಕೆ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.