ಉಡುಪಿಯ ಹೆಜಮಾಡಿ ದೇವಸ್ಥಾನದಲ್ಲಿ ವೃದ್ಧೆಯ ಸರ ಕದ್ದಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರ ಗ್ಯಾಂಗ್, ಪುತ್ತೂರಿನಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದೆ. ವೈರಲ್ ಆದ ಸಿಸಿಟಿವಿ ದೃಶ್ಯಗಳಿಂದ ಕಳ್ಳಿಯರನ್ನು ಗುರುತಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉಡುಪಿ (ಡಿ.28): ದೇವಸ್ಥಾನಗಳ ಜನಸಂದಣಿಯನ್ನೇ ಟಾರ್ಗೆಟ್ ಮಾಡಿ ಗೃಹಿಣಿಯರು, ವೃದ್ಧೆಯರ ಕತ್ತಿಗೆ ಕೈ ಹಾಕುತ್ತಿದ್ದ ತಮಿಳುನಾಡು ಮೂಲದ ಮೂವರು ಲೇಡಿ ಗ್ಯಾಂಗ್ ಪ್ಲಾನ್ ಪ್ಲಾಪ್ ಆಗಿದೆ. ಹೆಜಮಾಡಿಯ ಬ್ರಹ್ಮಬೈದರ್ಕಳ ಗರೋಡಿಯ ನೇಮೋತ್ಸವದಲ್ಲಿ ವೃದ್ಧೆಯ ಸರ ಕದ್ದಿದ್ದ ಈ ಗ್ಯಾಂಗ್, ಪುತ್ತೂರಿನ ಕೆಮ್ಮಿಂಜೆ ದೇವಾಲಯದಲ್ಲಿ ಮತ್ತೊಂದು ಕಳ್ಳತನಕ್ಕೆ ಸ್ಕೆಚ್ ಹಾಕುವಾಗ ಸಾರ್ವಜನಿಕರ ಕಣ್ಣಿಗೆ ಬಿದ್ದು ಪೋಲಿಸರ ಅತಿಥಿಗಳಾಗಿದ್ದಾರೆ.
ನೇಮೋತ್ಸವದಲ್ಲಿ ಗಂಟೆ ಬಾರಿಸುವ ನೆಪ: ವೃದ್ಧೆಯ ಸರ ಮಂಗಮಾಯ!
ಕಳೆದ ಗುರುವಾರ ಹೆಜಮಾಡಿಯ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನೇಮೋತ್ಸವ ನಡೆಯುತ್ತಿತ್ತು. ಈ ವೇಳೆ ಭಕ್ತಿ ಭಾವದಿಂದ ದೇವಸ್ಥಾನಕ್ಕೆ ಬಂದಿದ್ದ 78 ವರ್ಷದ ವೃದ್ಧೆಯನ್ನು ಈ ಕಳ್ಳಿಯರ ಗ್ಯಾಂಗ್ ಸುತ್ತುವರಿದಿತ್ತು. ಗಂಟೆ ಬಾರಿಸುವ ನೆಪದಲ್ಲಿ ವೃದ್ಧೆಯ ಗಮನ ಬೇರೆಡೆ ಸೆಳೆದು, ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ್ದ ಈ ಖತರ್ನಾಕ್ ಕಳ್ಳಿಯರು ಸ್ಥಳದಿಂದ ಪರಾರಿಯಾಗಿದ್ದರು.
ತಮಿಳುನಾಡಿನ ಈ ಲೇಡಿ ಗ್ಯಾಂಗ್ಗೆ ಕದಿಯೋದೇ ಕೆಲಸ!
ಸರ ಕಳುವು ಆದ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳಿಯರ ಕರಾಮತ್ತು ಬೆಳಕಿಗೆ ಬಂದಿತ್ತು. ತಮಿಳುನಾಡು ಮೂಲದ ಶೀಥಲ್, ಕಾಳಿಯಮ್ಮ ಮತ್ತು ಮಾರಿಯಮ್ಮ ಎಂಬುವವರು ವೃದ್ಧೆಯನ್ನ ಸುತ್ತುವರಿದು ಗಮನ ಬೇರೆಡೆ ಸೆಳೆದು ಸರ ಕದಿಯುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಬಳಿಕ ಸಾರ್ವಜನಿಕರು ಅಲರ್ಟ್ ಆಗಿದ್ದರು.
ಪುತ್ತೂರಿನ ಕೆಮ್ಮಿಂಜೆ ದೇವಸ್ಥಾನದಲ್ಲಿ ಕಳ್ಳಿಯರು' ಲಾಕ್!
ಹೆಜಮಾಡಿಯಲ್ಲಿ ಕೈಚಳಕ ತೋರಿಸಿದ್ದ ಈ ಕಳ್ಳಿಯರು, ಇಂದು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಷಣ್ಮುಕ ಸುಬ್ರಮಣ್ಯ ದೇವಾಲಯಕ್ಕೆ ಆಟೋದಲ್ಲಿ ಬಂದಿಳಿದಿತ್ತು. ಅಲ್ಲಿಯೂ ಊಟದ ಬಳಿಕ ಕೈ ತೊಳೆಯಲು ಬಂದ ಯಮುನಾ ಎಂಬ ವೃದ್ಧೆಯ 14 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲು ಯತ್ನಿಸಿದ್ದರು. ಆದರೆ, ಆಗಲೇ ವೈರಲ್ ಆಗಿದ್ದ ಸಿಸಿಟಿವಿ ದೃಶ್ಯಗಳಿಂದ ಅಲರ್ಟ್ ಆಗಿದ್ದ ಸಾರ್ವಜನಿಕರು ಈ ಕಳ್ಳಿಯರನ್ನು ಗುರುತಿಸಿ, ಕೂಡಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಡುಬಿದ್ರಿ ಪೊಲೀಸರ ವಶದಲ್ಲಿ ಆರೋಪಿಗಳು
ಸದ್ಯ ಪೊಲೀಸರು ಕಳ್ಳಿಯರನ್ನು ವಶಕ್ಕೆ ಪಡೆದಿದ್ದು, ಹೆಜಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸರು ಇವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಈ ಅಂತರರಾಜ್ಯ ಕಳ್ಳಿಯರ ಗ್ಯಾಂಗ್ ಈಗ ಜೈಲು ಪಾಲಾಗಿದೆ.


