ತರಕಾರಿ ಮಾರುಕಟ್ಟೆಯಲ್ಲಿ ಹಗಲು ಹೊತ್ತಿನಲ್ಲಿ ನಡೆದ ಈ ಭಯಾನಕ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಆರೋಪ ಸಂಬಂಧ ಪತಿಯನ್ನು ಬಂಧಿಸಲಾಗಿದೆ. 

ಲಖನೌ (ಜನವರಿ 13, 2024): ಉತ್ತರ ಪ್ರದೇಶ ರಾಜಧಾನಿ ಲಖನೌ ನಗರದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಉದ್ಯಾನವನದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಹಡ ಹಗಲೇ ಪತಿ ತನ್ನ ಪತ್ನಿಯನ್ನು ಭೀಕರವಾಗಿ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ 50 ವರ್ಷದ ಆಸುಪಾಸಿನಲ್ಲಿರುವ ದಲಿಗಂಜ್ ನಿವಾಸಿ ಬ್ರಿಜ್‌ ಮೋಹನ್‌ ನಿಶಾದ್‌ ಎನ್ನುವವರನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ಆರೋಪಿ ಪತಿಯನ್ನು ಬ್ರಿಜ್‌ ಮೋಹನ್‌ ನಿಶಾದ್‌ ಎಂದು ಗುರುತಿಸಲಾಗಿದ್ದು, ಈತ ತನ್ನ ಹೆಂಡತಿಯನ್ನು ಕತ್ತರಿಯಿಂದ 19 ಬಾರಿ ಇರಿದಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಕುತುಬ್‌ಪುರ ಪ್ರದೇಶದ ಲಂಬೇಕೇಶ್ವರ ಉದ್ಯಾನವನದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಹಗಲು ಹೊತ್ತಿನಲ್ಲಿ ನಡೆದ ಈ ಭಯಾನಕ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಬ್ರಿಜ್‌ ಮೋಹನ್‌ ನಿಶಾದ್‌ ವಿರುದ್ಧ ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧ ಅಥವಾ ವಿಧಾನಗಳನ್ನು ಬಳಸಿ ಗಾಯಗೊಳಿಸುವುದು) ಮತ್ತು 342 (ತಪ್ಪು ಸಂಯಮಕ್ಕೆ ಶಿಕ್ಷೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಹೈದರಾಬಾದ್‌ - ಬೆಂಗಳೂರು ಹೆದ್ದಾರಿಯಲ್ಲಿ ವೋಲ್ವೋ ಬಸ್‌ಗೆ ಬೆಂಕಿ: ಸುಟ್ಟು ಕರಕಲಾದ ಮಹಿಳೆ, ನಾಲ್ವರಿಗೆ ಗಂಭೀರ ಗಾಯ

ಜನವರಿ 7 ರಂದು ಬೆಳಗ್ಗೆ ತನ್ನ ತಾಯಿ ತರಕಾರಿ ಮಾರುಕಟ್ಟೆಗೆ ಹೋಗಿದ್ದಾರೆ ಎಂದು ಸಂತ್ರಸ್ತೆಯ ಮಗ ರಾಹುಲ್ ನಿಶಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದ್ದಕ್ಕಿದ್ದಂತೆ, ಅವನ ತಂದೆ ಬ್ರಿಜ್‌ಮೋಹನ್‌ ಆಕೆಯ ಬಳಿಗೆ ಬಂದು, ಕೆಲವೇ ಸೆಕೆಂಡುಗಳಲ್ಲಿ ಅನೇಕ ಬಾರಿ ಚಾಕುವಿನಿಂದ ಇರಿದು ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ (ಕೇಂದ್ರ ವಲಯ) ಮನೀಶಾ ಸಿಂಗ್ ತಿಳಿಸಿದ್ದಾರೆ. 

52 ವರ್ಷದ ಸಂತ್ರಸ್ತೆ ಸದ್ಯ ಕೆಜಿಎಂಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಬ್ರಿಜ್‌ಮೋಹನ್ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿದ್ದು, ಅವರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎಂಬುದು ಮೇಲ್ನೋಟಕ್ಕೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ ಮಾಡಿದ್ರಾ ಬೆಂಗಳೂರು ಸ್ಟಾರ್ಟಪ್‌ ಕಂಪನಿಯ ಸಿಇಒ?

ತನ್ನ ತಂದೆ ಈ ಹಿಂದೆ ತನ್ನ ತಾಯಿಯ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಮಗ ಪ್ರತಿಪಾದಿಸಿದ್ದಾನೆ ಮತ್ತು ಈ ಬಗ್ಗೆ ಡಿಸೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು ಎಂಬುದೂ ಬೆಳಕಿಗೆ ಬಂದಿದೆ.