ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಮೇರೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಮಂಗಳವಾರ ತಾಲೂಕಿನ ದಾಸನಕೊಪ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಶಿರಸಿ (ಜೂ.19): ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಮೇರೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಮಂಗಳವಾರ ತಾಲೂಕಿನ ದಾಸನಕೊಪ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ದಾಸನಕೊಪ್ಪದ ದನಗನಹಳ್ಳಿಯ ಅಬ್ದುಲ್ ಶಕೂರ್‌ (೩೪) ಎನ್‌ಐಎ ವಶಕ್ಕೆ ಪಡೆದಿರುವ ವ್ಯಕ್ತಿ. ಈತನ ವಿರುದ್ಧ ನಕಲಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಆರೋಪವಿದೆ. ಗಲ್ಫ್‌ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಈತ ಬಕ್ರೀದ್‌ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಈತನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರೋಪವೂ ಇದೆ ಎನ್ನಲಾಗಿದೆ. ಮುಖ್ಯವಾಗಿ ರಾಮೇಶ್ವರಂ ಕೆಫೆ, ಶಿವಮೊಗ್ಗ ಸ್ಫೋಟಕ್ಕೆ ಸಂಬಂಧಿಸಿ ಕೋಮುಗಲಭೆಗೆ ಪ್ರಚೋದಿಸಿ ಪೋಸ್ಟ್ ಮಾಡಿದ್ದ ಆರೋಪವಿದೆ ಎಂದು ಹೇಳಲಾಗಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ: ಅಬ್ದುಲ್ ಶಕೂರ್‌ ಮನೆಗೆ ಭೇಟಿ ನೀಡಿದ ತನಿಖಾ ತಂಡ ಮನೆಯವರನ್ನೂ ವಿಚಾರಣೆ ಮಾಡಿದೆ. ನಂತರ ಅಬ್ದುಲ್ ಶಕೂರ್‌ ಪಾಸ್‌ಪೋರ್ಟ್, ಆಧಾರ್‌ ಕಾರ್ಡ್ ಸೇರಿ ಮತ್ತಿತರರ ದಾಖಲೆಗಳನ್ನು ಪರಿಶೀಲಿಸಿದೆ. ಅದರಲ್ಲಿನ ನ್ಯೂನತೆ ಪತ್ತೆಹಚ್ಚಿ, ವಶಕ್ಕೆ ಪಡೆದು ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದೆ. 

ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ನೀಟ್‌ ರದ್ದು ಚಿಂತನೆ: ಡಿ.ಕೆ.ಶಿವಕುಮಾರ್‌ ಸುಳಿವು

ಎನ್‌ಐಎ ಆಗಮಿಸಿರುವ ಕುರಿತು ಸ್ಥಳೀಯರು ಬನವಾಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬನವಾಸಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಕಳೆದೆರಡು ವರ್ಷದ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಗರದ ಬನವಾಸಿ ರಸ್ತೆಯ ಟಿಪ್ಪುನಗರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆಂದು ಎನ್‌ಐಎ ಕರೆದುಕೊಂಡು ಹೋಗಿತ್ತು. ಪಿಎಫ್‌ಐ ಸಂಘಟನೆಯಲ್ಲಿ ಇನ್ನೂ ಕೆಲವರು ಸಕ್ರಿಯರಾಗಿರುವ ಮಾಹಿತಿ ತಿಳಿದ ಎನ್‌ಐಎ ತಂಡ ಮತ್ತೆ ಜಿಲ್ಲೆಗೆ ಬಂದು ಹಲವರನ್ನು ವಿಚಾರಣೆಗೂ ಒಳಪಡಿಸಿತ್ತು.