Love Cheating Allegation: ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಪ್ರಾಪ್ತೆಯ ಡೆತ್ ನೋಟ್ನಲ್ಲಿ ಬಹಿರಂಗವಾದ ಆರೋಪಗಳೇನು? ಕರಾವಳಿಯನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಮಂಗಳೂರು (ಜೂ.24): ಇಲ್ಲಿನ ಹೊರವಲಯದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾಳೆ. ಆತ್ಮ*ಹ*ತ್ಯೆಗೆ ಮುನ್ನ ತುಳು ಭಾಷೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಬಾಲಕಿ, ತನ್ನ ಸಾವಿಗೆ ಕಾರಣವಾದ ನೋವು ಮತ್ತು ವಂಚನೆಯ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. "ಅಮ್ಮಾ, ನಾನು ತಪ್ಪು ಮಾಡಿದ್ದೇನೆ... ನನ್ನನ್ನು ಕ್ಷಮಿಸು. ಇನ್ನು ಬದುಕಲು ಸಾಧ್ಯವಿಲ್ಲ" ಎಂದು ಬರೆದಿರುವ ಆಕೆ, ತನ್ನನ್ನು ಪ್ರೀತಿಯ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿದ್ದಾಳೆ.
ಬಂಟ್ವಾಳ ಮೂಲದ ಅನೀಶ್ ಪೂಜಾರಿ ಎಂಬ ಯುವಕನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿ ನಂತರ ಕೈಬಿಟ್ಟಿದ್ದಾನೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ, "ನನಗೆ ಹಿಂದೂ ಸಂಘಟನೆಯವರು ಸಹಾಯ ಮಾಡಲಿಲ್ಲ. ನನಗೆ ಮೋಸ ಮಾಡಿದವನು ಆರಾಮವಾಗಿದ್ದಾನೆ" ಎಂಬ ಸಾಲುಗಳು ಕೂಡ ಡೆತ್ ನೋಟ್ನಲ್ಲಿ ಕಂಡುಬಂದಿವೆ.
"ನನ್ನ ರೀತಿಯಲ್ಲಿ ಮತ್ತೊಬ್ಬ ಹುಡುಗಿಯ ಜೀವನ ಹಾಳಾಗಬಾರದು" ಎಂಬ ನೋವಿನ ಮಾತುಗಳನ್ನೂ ಬಾಲಕಿ ಬರೆದಿಟ್ಟಿದ್ದಾಳೆ. ಕಾಲೇಜಿನಿಂದ ಮನೆಗೆ ಬಂದ ಬಳಿಕ ಈ ದುರ್ಘಟನೆ ನಡೆದಿದ್ದು, ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಮೃತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನೀಶ್ ಪೂಜಾರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಕರಾವಳಿಯಲ್ಲಿ ತೀವ್ರ ಚರ್ಚೆ
ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಆರೋಪಿ ಅನೀಶ್ ಪೂಜಾರಿ ಕೆಲ ಹಿಂದೂ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾನೆ ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ಒಬ್ಬ ಅಪ್ರಾಪ್ತೆಯ ಬದುಕನ್ನು ಕತ್ತಲೆಗೆ ತಳ್ಳಿದ ಈ ಪ್ರಕರಣ ಈಗ ಕರಾವಳಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಥವಾ ಇನ್ನೇನಾದರೂ ಕಾರಣ ಇದೆಯಾ? ಡೆತ್ ನೋಟ್ನಲ್ಲಿ ಬರೆದಿರುವ ಆರೋಪಗಳಿಗೆ ತನಿಖೆ ಯಾವ ತಿರುವು ನೀಡಲಿದೆ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.


