ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಅನುತ್ತೀರ್ಣ ಎಂಬ ಕಾರಣಕ್ಕೆ ಚಾಮರಾಜನಗರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಚಾಮರಾಜನಗರ (ಏ.21): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಎಂಬ ಕಾರಣಕ್ಕೆ ಚಾಮರಾಜನಗರದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಚಾಮರಾಜನಗರದ ಜೆಎಸ್ಎಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದ ವಿಜಯಲಕ್ಷ್ಮಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗುಂಡ್ಲುಪೇಟೆ ತಾಲ್ಲೂಕಿನ ಮೂಡಗೂರು ಗ್ರಾಮದ ವಿಜಯಲಕ್ಷ್ಮಿ ಜೆ‌ಎಸ್‌ಎಸ್ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆಸಿಇಟಿ) ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ತಂಗಿದ್ದರು. ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ನಿರ್ಧಾರ. ಇದಕ್ಕಿಂತ ಹೇಡಿತನದ ಕೆಲಸ ಮತ್ತೊಂದಿಲ್ಲ. ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿದೆ. ಶಿಕ್ಷಣ ಇಲಾಖೆ ಮತ್ತೊಂದು ಅವಕಾಶ ನೀಡಿದೆ. ಫೇಲ್ ಆದ ವಿಷಯವನ್ನು ಪೂರಕ ಪರೀಕ್ಷೆ ಬರೆದು ಪಾಸ್ ಮಾಡಿಕೊಳ್ಳಬಹುದು. ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ.

ದ್ವಿತೀಯ ಪಿಯು ಪೂರಕ ಪರೀಕ್ಷೆ ಕಟ್ಟಲು ಏಪ್ರಿಲ್ ‌27 ಕೊನೆಯ ದಿನ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ‌ ಪರೀಕ್ಷೆ ಕಟ್ಟಲು ಇಂದಿನಿಂದಲೇ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಡಾ. ರಾಮಚಂದ್ರನ್ ದ್ವಿತೀಯ ಪಿಯುಸಿ ಫಲಿತಾಂಶ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯಾವುದೇ ದಂಡ ಶುಲ್ಕವಿಲ್ಲದೆ 27 ಏಪ್ರಿಲ್ ‌ವರಿಗೂ ಪೂರಕ‌ ಪರೀಕ್ಷೆ ಕಟ್ಟಲು ಅವಕಾಶವಿದೆ. ಮೇ 2 ರವರೆಗೆ ದಂಡಸಹಿತವಾಗಿ ಪರೀಕ್ಷೆ ಕಟ್ಟಬಹುದು. ಅದಾದ ನಂತರ ಮತ್ತೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ 74.67% ಫಲಿತಾಂಶ ಬಂದಿದೆ. ಪ್ರತೀ ಬಾರಿಯಂತೆ ಈ ಬಾರಿ ಕೂಡ ಬಾಲಕಿಯರೇ (80.25%) ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗ 85.71% , ವಾಣಿಜ್ಯ ವಿಭಾಗ 75.89%, ಕಲಾ ವಿಭಾಗದಲ್ಲಿ 61.22 % ಫಲಿತಾಂಶ ಬಂದಿದೆ.

ಫೇಲ್ ಆಗಿದ್ರೆ ಚಿಂತೆ ಬಿಡಿ, ದ್ವಿತೀಯ ಪಿಯು ಪೂರಕ ಪರೀಕ್ಷೆ ಕಟ್ಟಲು ಏಪ್ರಿಲ್ ‌27 ಕೊನೆಯ ದಿನ

ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಬಾರಿ ದಕ್ಷಿಣ ಕನ್ನಡ (95.34%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (95.24%) ಎರಡನೇ ಸ್ಥಾನ ಪಡೆದಿದೆ. ಕೊಡಗು (90.55%) ತೃತೀಯ ಸ್ಥಾನ ಪಡೆದಿದೆ. ಯಾದಗಿರಿ (62.98%) ಕೊನೆಯ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನ ಉತ್ತರ ಕನ್ನಡ ( 89.74,% ) ಪಾಲಾಗಿದೆ.

2nd PUC ಜಿಲ್ಲಾವಾರು ಲಿಸ್ಟ್, ಕಳೆದ ಬಾರಿ ಕೊನೆ ಸ್ಥಾನದಲ್ಲಿದ್ದು ಉಗಿಸಿಕೊಂಡ ಚಿತ್ರದುರ್ಗಕ್ಕೆ ಎಷ್ಟನೇ ಸ್ಥಾನ?

ಈ ಬಾರಿ 42 ಸರಕಾರಿ ಕಾಲೇಜುಗಳು ಮತ್ತು 10 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಒಟ್ಟು 78 ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 264 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100 ಫಲಿತಾಂಶ ಬಂದಿದೆ.