ಹದಿಹರೆಯದ ಚಾಲಕ ವಿಮಾನ ನಿಲ್ದಾಣದ ಬ್ಯಾರಿಕೇಡ್‌ಗಳನ್ನು ಗಮನಿಸದೆ ಅದನ್ನು ಹೊಡೆದಿದ್ದು, ಬಳಿಕ ಯೋಧನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. 

ಮುಂಬೈ (ಅಕ್ಟೋಬರ್ 3, 2023): ವೇಗವಾಗಿ ಬಂದ ಕಾರೊಂದು ಸಿಐಎಸ್‌ಎಫ್‌ ಯೋಧನಿಗೆ ಡಿಕ್ಕಿ ಹೊಡೆದು ಅವರು ಮೃತಪಟ್ಟಿರೋ ದಾರುಣ ಘಟನೆ ಇಲ್ಲಿ ವರದಿಯಾಗಿದೆ. ಭಾನುವಾರ ಮುಂಜಾನೆ ಮುಂಬೈ ವಿಮಾನ ನಿಲ್ದಾಣದ ಎಲಿವೇಟೆಡ್ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಅಪಘಾತ ನಡೆದಿದೆ ಎಂದು ತಿಳಿದುಬಂದಿದ್ದು, ಸೋಮವಾರ ಬೆಳಗ್ಗೆ ಯೋಧ ಮೃತಪಟ್ಟಿದ್ದಾನೆ.

ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೆಬಲ್ ರಾಹುಲ್ ಶರ್ಮಾ (35) ತಲೆಗೆ ಗಾಯವಾಗಿತ್ತು. ಅಪಘಾತ ನಡೆದ ಒಂದು ದಿನದ ನಂತರ ಯೋಧ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಹಾರ್ ಪೊಲೀಸರು ಅಪಘಾತಕ್ಕಾಗಿ ತನ್ನ ತಂದೆಯ BMW ಅನ್ನು ಚಾಲನೆ ಮಾಡುತ್ತಿದ್ದ ವಿಲ್ಲೆಪಾರ್ಲೆ (W) ನ 19 ವರ್ಷದ ಕಾಲೇಜು ವಿದ್ಯಾರ್ಥಿ ಹೃದಯ್ ಸಜ್ಜನರಾಜ್ ಕವಾರ್ ಎಂಬಾತನನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಗೂಗಲ್‌ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!

ಎಲಿವೇಟೆಡ್ ರಸ್ತೆಯ ಚೆಕ್‌ಪೋಸ್ಟ್ ಸಂಖ್ಯೆ 1 ರಲ್ಲಿ ರಾಹುಲ್ ಶರ್ಮಾ ಮತ್ತು ಹೆಡ್ ಕಾನ್‌ಸ್ಟೆಬಲ್ ಕರ್ತವ್ಯದಲ್ಲಿದ್ದಾಗ ಮುಂಜಾನೆ 4 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕವಾರ್ 18-19 ವರ್ಷ ವಯಸ್ಸಿನ ನಾಲ್ವರು ಸ್ನೇಹಿತರ ಜೊತೆಗೆ ಹೊರದೇಶದಿಂದ ಆಗಮಿಸಿದ ಸ್ನೇಹಿತನನ್ನು ಕರೆದುಕೊಂಡು ಹೋಗಲು ಎಲಿವೇಟೆಡ್ ರಸ್ತೆಯಲ್ಲಿ ಬಂದಿದ್ದರು. ಕವಾರ್ ಚೆಕ್‌ಪೋಸ್ಟ್‌ನಲ್ಲಿ ನಿಲ್ಲಲಿಲ್ಲ ಮತ್ತು ಅತ ವೇಗವಾಗಿ ವಾಹನ ಚಲಿಸಲು ಪ್ರಯತ್ನಿಸಿದಾಗ, ಪ್ಲಾಸ್ಟಿಕ್ ಬ್ಯಾರಿಕೇಡ್ ಅನ್ನು ಬೀಳಿಸಿದ್ದು, ನಂತರ ರಾಹುಲ್‌ ಶರ್ಮಾಗೆ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಕವಾರ್ ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯದ ಯಾವುದೇ ಕುರುಹು ಕಂಡುಬಂದಿಲ್ಲ. ಹದಿಹರೆಯದ ಚಾಲಕ ವಿಮಾನ ನಿಲ್ದಾಣದ ಬ್ಯಾರಿಕೇಡ್‌ಗಳನ್ನು ಗಮನಿಸಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕತ್ತಲಾಗಿದ್ದರಿಂದ ಬ್ಯಾರಿಕೇಡ್‌ಗಳನ್ನು ಗಮನಿಸಲು ವಿಫಲವಾಗಿದ್ದು ಎಂದು ಅಪಘಾತ ಮಾಡಿದ ಯುವಕ ಹೇಳಿದ್ದು, ಇನ್ನು ಆತನನ್ನು ವಶಕ್ಕೆ ಪಡೆಯಲಾಗಿದೆ. 

ಇದನ್ನು ಓದಿ: ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿರೋ ಐಸಿಸ್‌ ಉಗ್ರ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ

ಹೃದಯ್ ಕವಾರ್ ತನ್ನ ತಂದೆಯ ಬಿಎಂಡಬ್ಲ್ಯು ಕಾರನ್ನು ಓಡಿಸುತ್ತಿದ್ದು, "ಆರೋಪಿ ಮತ್ತು ಅವನ ಸ್ನೇಹಿತರು ಸ್ನೇಹಿತನೊಬ್ಬನನ್ನು ಪಿಕಪ್‌ ಮಾಡಿದ ನಂತರ ಹುಟ್ಟುಹಬ್ಬದ ಆಚರಣೆಗೆ ಹೋಗಲು ಯೋಜಿಸಿದ್ದರು" ಎಂದು ಪೊಲೀಸ್ ಹೇಳಿದರು. ಆರೋಪಿಯು ಚಾಲನಾ ಪರವಾನಗಿಯನ್ನು ಹೊಂದಿದ್ದಾರೆ. ಕಾವಾರನ ತಂದೆ ಜವಳಿ ಕಂಪನಿಯ ನಿರ್ದೇಶಕರು.

ಡಿಕ್ಕಿ ಹೊಡೆದ ರಭಸಕ್ಕೆ ಶರ್ಮಾ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಆರೋಪಿ ವಿರುದ್ಧ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್