ಸೋಲದೇವನಹಳ್ಳಿಯಲ್ಲಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಿಗೆ ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. ಜಾಮೀನು ಪಡೆದಿದ್ದರೂ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಗೆ ಅನರ್ಹರೆಂದು ಘೋಷಿಸಲಾಗಿದೆ

ಪೀಣ್ಯ ದಾಸರಹಳ್ಳಿ (ಜುಲೈ.10): ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಯುವಕನನ್ನು ಕಿಡ್ನಾಪ್ ಮಾಡಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಪರೀಕ್ಷೆಯ ಕಾರಣ ಕೋರ್ಟ್‌ ಜಾಮೀನು ನೀಡಿದ್ದರೂ ಕಾಲೇಜ್ ಆಡಳಿತ ಮಂಡಳಿ ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದೆ.

Add Asianetnews Kannada as a Preferred SourcegooglePreferred

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ ಗ್ಯಾಂಗ್‌ ರೀತಿ ಕುಶಾಲ್ ಎನ್ನುವ ಯುವಕನನ್ನು ಕಿಡ್ನಾಪ್ ಮಾಡಿದ್ದ ಸೋಲದೇವನಹಳ್ಳಿ ಪುಂಡರು, ಆತನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ವಿದ್ಯಾರ್ಥಿಗಳಾದ 8 ಆರೋಪಿಗಳು ಪರೀಕ್ಷೆಯ ನೆಪ ಹೇಳಿ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಆದರೆ, ಪರೀಕ್ಷೆ ಬರೆಯೋದಕ್ಕೆ ಆರೋಪಿಗಳಿಗೆ ಕಾಲೇಜು ಆಡಳಿತ ಮಂಡಳಿ ಅನುಮತಿಯೇ ಕೊಟ್ಟಿಲ್ಲ.

ಪುಂಡ ವಿದ್ಯಾರ್ಥಿಗಳು ಸರಿಯಾಗಿ ಕಾಲೇಜ್‌ಗೆ ಹೋಗದ್ದರಿಂದ ಹಾಜರಾತಿ ಕೊರತೆ ಇದೆ. ಈ ಕಾರಣದಿಂದ ಪರೀಕ್ಷೆ ಬರೆಯಲು ಹಾಲ್‌ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ, ಮಧ್ಯಂತರ ಜಾಮೀನು ವಜಾಗೊಳಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪರೀಕ್ಷೆಗೆ ಅರ್ಹತೆ ಇಲ್ಲದೆ ಇದ್ದರೂ ಸುಳ್ಳು ಹೇಳಿ ಆರೋಪಿಗಳು ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಎ1 ಆರೋಪಿ ಬಂಧನ:

ಎಫ್‌ಐಆರ್ ಆಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಪ್ರಕರಣದ ಎ1 ಆರೋಪಿ ಹೇಮಂತ್‌ನನ್ನ ತುಮಕೂರಿನಲ್ಲಿ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕುಶಾಲ್ ಅಪಹರಣಕ್ಕೆ ಈತನೇ ಪ್ಲ್ಯಾನ್‌ ಮಾಡಿದ್ದ. ಈತನ ವಿರುದ್ಧ ಈ ಹಿಂದೆಯೂ ಹಲ್ಲೆ ಆರೋಪದ ಮೇಲೆ 3 ಎಫ್‌ಐಆರ್ ದಾಖಲಾಗಿವೆ. 2023ರಲ್ಲಿ 1 ಹಾಗೂ 2024ರಲ್ಲಿ 2 ಕೇಸ್ ದಾಖಲಾಗಿದ್ದು, ಇದು ಸೇರಿ 4 ಕೇಸ್‌ನಲ್ಲಿ ಭಾಗಿಯಾಗಿದ್ದಾನೆ ಎಂದು ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.