ಸ್ಯಾಂಟ್ರೋ ರವಿ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಕಲೆ ಹಾಕುವ ಅವಶ್ಯಕತೆ ಇದೆ. ಆತನ ವಿರುದ್ಧ ಪ್ರಕರಣ ದಾಖಲಾದ ನಂತರ ಆತ ಎಲ್ಲೆಲ್ಲಿ ಓಡಾಡಿದ, ಯಾರು ಸಹಕಾರ ನೀಡಿದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ: ಅಲೋಕ್‌ ಕುಮಾರ್‌ 

ಮೈಸೂರು(ಜ.15): ಗುಜರಾತ್‌ನ ಅಹಮದಾಬಾದ್‌ನಲ್ಲಿ ಸ್ಯಾಂಟ್ರೋ ರವಿ ಹಿಂದಿಯಲ್ಲಿ ಮಾತನಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಪ್ರಸಂಗವೂ ನಡೆದಿದೆ. ಈ ವೇಳೆ ಪೊಲೀಸರಿಗೆ ತನ್ನ ಗುರುತು ಸಿಗದಂತೆ ಮೀಸೆ, ವಿಗ್‌ ತೆಗೆದು ವೇಷ ಬದಲಾಯಿಸಿದ್ದು ಮಾತ್ರವಲ್ಲದೆ ಭಾಷೆಯನ್ನೂ ಆತ ಬದಲಾಯಿಸಿದ್ದ!

ಪೊಲೀಸರು ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಆತ ಪೊಲೀಸರೊಂದಿಗೆ ಹಿಂದಿ ಮಾತನಾಡುವ ಮೂಲಕ ದಾರಿ ತಪ್ಪಿಸಲೆತ್ನಿಸಿದ್ದ. ವಿಗ್‌ ಹಾಗೂ ಮೀಸೆ ಇಲ್ಲದೆ ಆತನನ್ನು ಗುರುತು ಹಿಡಿಯುವುದೂ ಕಷ್ಟವಾಗಿತ್ತು. ನನಗೆ ಕನ್ನಡ ಗೊತ್ತಿಲ್ಲ, ಹಿಂದಿಯಲ್ಲಿ ಮಾತನಾಡಿ ಎಂದೂ ವಶಕ್ಕೆ ತೆಗೆದುಕೊಳ್ಳುವಾಗ ಹೇಳಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕನ್ನಡದಲ್ಲಿ ಮಾತನಾಡಿದ್ದಲ್ಲದೆ ತಾನೇ ಸ್ಯಾಂಟ್ರೋ ರವಿ ಎಂಬುದನ್ನು ಒಪ್ಪಿಕೊಂಡಿದ್ದಾನೆ.

ವೇಶ್ಯಾವಾಟಿಕೆ, ಎತ್ತಂಗಡೀಲಿ ಸ್ಯಾಂಟ್ರೋ ಎಕ್ಸಪರ್ಟ್‌..!

ಮೊದಲ ಪತ್ನಿ ನೆರವು: 

ಪೊಲೀಸರು ಮೊದಲ ಪತ್ನಿಯನ್ನು ವಿಶ್ವಾಸಕ್ಕೆ ಪಡೆದು ಆಕೆ ಮೂಲಕ ಸ್ಯಾಂಟ್ರೋ ರವಿಯ ಹೊರರಾಜ್ಯಗಳ ಸ್ನೇಹಿತರ ವಿವರ ಕಲೆಹಾಕಲಾಯಿತು. ಹೊರ ರಾಜ್ಯದ ನಾಲ್ವರು ಸ್ನೇಹಿತರ ಪೈಕಿ ಒಬ್ಬಾತ ಮಾತ್ರ ಊರುಬಿಟ್ಟು ಹೊರಹೋಗಿದ್ದರಿಂದ ಅನುಮಾನದಿಂದ ಬೆನ್ನುಬಿದ್ದ ಪೊಲೀಸರಿಗೆ ಸ್ಯಾಂಟ್ರೋ ರವಿ ಅಹಮಾದಾಬಾದ್‌ನಲ್ಲಿರುವುದು ಖಚಿತವಾಗಿದೆ.

ವಿಚಾರಣೆಗೆ ಸಹಕಾರ-ಎಡಿಜಿಪಿ: 

ಎಡಿಜಿಪಿ ಅಲೋಕ್‌ ಕುಮಾರ್‌ ಮಾತನಾಡಿ, ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಮಾತ್ರ ವಿಚಾರಣೆ ನಡೆಯುತ್ತಿದೆ. ಬೇರೆ ವಿಚಾರಗಳ ಬಗ್ಗೆ ಆರೋಪಿಯನ್ನು ನಾವು ಪ್ರಶ್ನಿಸಿಲ್ಲ. ಆತ ವಿಚಾರಣೆಗೆ ಸಹಕರಿಸುತ್ತಿದ್ದಾನೆ ಎಂದು ಹೇಳಿದರು.

ಗುರುತೇ ಸಿಗದಂತೆ ವೇಷ ಬದಲಿಸಿದ ಸ್ಯಾಂಟ್ರೋ ರವಿ ಬಂಧನ, ರಾಜ್ಯ ರಾಜಕೀಯದಲ್ಲಿ ಸಂಚಲನ!

ಸ್ಯಾಂಟ್ರೋ ರವಿ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಕಲೆ ಹಾಕುವ ಅವಶ್ಯಕತೆ ಇದೆ. ಆತನ ವಿರುದ್ಧ ಪ್ರಕರಣ ದಾಖಲಾದ ನಂತರ ಆತ ಎಲ್ಲೆಲ್ಲಿ ಓಡಾಡಿದ, ಯಾರು ಸಹಕಾರ ನೀಡಿದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಸ್ಯಾಂಟ್ರೋ ರವಿ ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ. ಆತ ಮಧುಮೇಹದಿಂದ ಬಳಲುತ್ತಿದ್ದಾನೆ. ಗಂಟೆಗೊಮ್ಮೆ ಇನ್ಸುಲಿನ್‌ ಪಡೆದುಕೊಳ್ಳುತ್ತಿದ್ದಾನೆ. ಸೂಕ್ತ ಔಷಧಿ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಸ್ಯಾಂಟ್ರೋ ರವಿ ಸೇರಿ ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.