ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕನ ಎದೆಗೆ ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚುಚ್ಚಿ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾಣಿಬೆನ್ನೂರ ತಾಲೂಕಿನ ಹೂಲಿಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.

ರಾಣಿಬೆನ್ನೂರು (ಅ.03): ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕನ ಎದೆಗೆ ಸರ್ವೀಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚುಚ್ಚಿ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾಣಿಬೆನ್ನೂರ ತಾಲೂಕಿನ ಹೂಲಿಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. ಶಿರಸಿ ತಾಲೂಕಿನ ಗಡಿಹಳ್ಳಿ ಗ್ರಾಮದ ಶಿವಾನಂದ ಬಡಗಿ ಗಾಯಗೊಂಡ ಚಾಲಕ. ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೋಗುವಾಗ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಬ್ಬಿಣದ ಪೈಪ್ ಚಾಲಕನ ಎದೆಗೆ ಚುಚ್ಚಿದೆ. 

ಸುದ್ದಿ ತಿಳಿದ ತಕ್ಷಣ ಹೈವೇ ಆಂಬ್ಯುಲೆನ್ಸ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹರಸಾಹಸ ಪಟ್ಟು ಚಾಲಕನ ಎದೆಗೆ ಚುಚ್ಚಿದ್ದ ಕಬ್ಬಿಣದ ಪೈಪ್‌ ಅನ್ನು ಕತ್ತರಿಸಿ ಸ್ವಲ್ಪ ಭಾಗ ಹೊರಕ್ಕೆ ತೆಗೆದಿದ್ದಾರೆ. ಇನ್ನೂ ಸ್ವಲ್ಪ ಭಾಗ ಚಾಲಕನ ದೇಹದಲ್ಲೇ ಉಳಿದಿದ್ದು, ಅವರನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್‌ ಮಾಡಿ ಉಳಿದ ಕಬ್ಬಿಣದ ಭಾಗವನ್ನು ಹೊರ ತೆಗೆದಿದ್ದಾರೆ. ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ದಾಖಲೆ ಬಿಸಿಲು: 32.8 ಡಿಗ್ರಿ ಸೆಲ್ಶಿಯಸ್‌ ದಾಖಲು

ವೇಗವಾಗಿ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಸುಮಾರು 4 ಗಂಟೆಗೆ ಯಶವಂತಪುರ ಸರ್ಕಲ್‌ ಸಮೀಪದ ಸಿ.ವಿ.ರಾಮನ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮಹೀಂದ್ರ ಎಕ್ಸ್‌ ಯುವಿ 500 ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆ ವೇಳೆ ಗಾಯಗೊಂಡ ಕಾರು ಚಾಲಕ ಸೋಮಶೇಖರ್‌ ಎಂಬುವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲಿಸಿ, ಕಾರನ್ನು ಜಪ್ತಿ ಮಾಡಿ ಠಾಣೆಗೆ ಸಾಗಿಸಿದ್ದಾರೆ. ಅಪಘಾತದ ವೇಳೆ ಕಾರಿನ ಏರ್‌ ಬ್ಯಾಗ್‌ಗಳು ತೆರೆದುಕೊಂಡ ಹಿನ್ನೆಲೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ ಯಾವುದೇ ದೂರು ದಾಖಲಾಗಿಲ್ಲ. ಕಾರಿನ ಮಾಲೀಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಳಿಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.