*ವಿಶಾಖಪಟ್ಟಣದಲ್ಲಿ ಖರೀದಿಸಿ ಹೊಸೂರಲ್ಲಿ ಬಚ್ಚಿಟ್ಟು ನಗರದಲ್ಲಿ ಮಾರಾಟ*ಆಂಧ್ರದಲ್ಲಿ ಕಡಿಮೆ ಹಣಕ್ಕೆ ಗಾಂಜಾ ಖರೀದಿ: ನಗರದಲ್ಲಿ ದುಬಾರಿ ಬೆಲೆಗೆ ಮಾರಾಟ

ಬೆಂಗಳೂರು (ಫೆ. 28): ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಹೊಸೂರು ಮೂಲದ ಪ್ರಕಾಶ್‌(30) ಮತ್ತು ಸುಂದರ್‌ ಪಾಂಡೆ(32) ಬಂಧಿತರು. ಆರೋಪಿಗಳಿಂದ ಬರೋಬ್ಬರಿ 21 ಕೆ.ಜಿ. ತೂಕದ ಗಾಂಜಾ, .440 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಗಳು ಫೆ.26ರಂದು ಪೀಣ್ಯ 4ನೇ ಹಂತದ 12ನೇ ಕ್ರಾಸ್‌ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ರೈಲಿನ ಮೂಲಕ ತಮಿಳುನಾಡಿನ ಹೊಸೂರಿಗೆ ತಂದು ಮನೆಯಲ್ಲಿ ಬಚ್ಚಿಡುತ್ತಿದ್ದರು. 

ಬಳಿಕ ಗಿರಾಕಿಗಳ ಬೇಡಿಕೆ ಆಧರಿಸಿ ಬೆಂಗಳೂರಿಗೆ ಗಾಂಜಾ ತರುತ್ತಿದ್ದರು. ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸೇರಿದಂತೆ ಮಾದಕ ವ್ಯಸನಿಗಳಿಗೆ ದುಬಾರಿ ಮೊತ್ತಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿBengaluru Crime: ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ನೈಜಿರಿಯನ್‌ ಪ್ರಜೆ ಬಂಧನ

ಮೊದಲು ಚಕ್ಕುಲಿ-ನಿಪ್ಪಟ್ಟು ಮಾರಾಟ: ಆರೋಪಿಗಳು ಈ ಹಿಂದೆ ಚಕ್ಕುಲಿ-ನಿಪ್ಪಟ್ಟು ತಯಾರಿಸಿ ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬರುವ ಅಲ್ಪ ಪ್ರಮಾಣದ ಹಣದಿಂದ ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಸುಲಭವಾಗಿ ಅಪಾರ ಹಣ ಸಂಪಾದಿಸುವ ಉದ್ದೇಶದಿಂದ ಗಾಂಜಾ ಮಾರಾಟ ದಂಧೆ ಆರಂಭಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ: ನೆರೆಯ ಆಂಧ್ರಪ್ರದೇಶದಿಂದ(Andhra Pradesh) ನಗರಕ್ಕೆ ಗಾಂಜಾ(Marijuana) ತಂದು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಸೇರಿ ಮೂವರು ಡ್ರಗ್ಸ್‌ ಪೆಡ್ಲರ್‌ಗಳನ್ನು ಮಹಾಲಕ್ಷ್ಮೇಲೇಔಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಶ್ರೀರಾಮಪುರದ ಮುತ್ತುರಾಜ್‌(20), ಮುಂಬೈನ ಗೌತಮ್‌ (30), ತಿರುಪತಿಯ ರಫಿ (40) ಬಂಧಿತರು(Arrest). ಆರೋಪಿಗಳಿಂದ(Accused) 80.35 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ಫೆ.21ರಂದು ಮಹಾಲಕ್ಷ್ಮೇಪುರಂನ ಕಮಲಮ್ಮನಗುಂಡಿ ಆಟದ ಮೈದಾನದ ಬಳಿ ಆರೋಪಿ ಮುತ್ತುರಾಜ್‌ ಗಾಂಜಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ 350 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಉಳಿದಿಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿಬೆಳಗಾವಿಯಲ್ಲಿ ಮಿತಿಮೀರಿದ ಗಾಂಜಾ ಹಾವಳಿ, ಸಿಡಿದೆದ್ದ ಮಹಿಳೆಯರು

ಆರೋಪಿ ಮುತ್ತುರಾಜ್‌ ಆಂಧ್ರಪ್ರದೇಶದ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅಂತೆಯೆ ಆ ಇಬ್ಬರು ಆರೋಪಿಗಳು ಫೆ.24ರಂದು ನಗರಕ್ಕೆ ಬರುತ್ತಿರುವ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಮಹಾಲಕ್ಷ್ಮೇ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜು ನೇತೃತ್ವದ ಪೊಲೀಸರ ತಂಡ ಆರೋಪಿಗಳಿಗೆ ಬಲೆ ಬೀಸಿತ್ತು.

ನಗದು ಬಹುಮಾನ ಘೋಷಣೆ: ಗಾಂಜಾ ಪ್ರಕರಣ ಭೇದಿಸಿ ಮೂವರು ಡ್ರಗ್ಸ್‌ ಪೆಡ್ಲರ್‌ಗಳ(Drugs Peddlers) ಬಂಧನದ ಜತೆಗೆ ಬರೋಬ್ಬರಿ 80 ಕೆ.ಜಿ. ತೂಕದ ಗಾಂಜಾ ಜಪ್ತಿ ಮಾಡಿದ ಮಹಾಲಕ್ಷ್ಮೇ ಲೇಔಟ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎಂ.ಕಾಂತರಾಜ್‌ ನೇತೃತ್ವದ ತಂಡದ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಶ್ಲಾಘಿಸಿದ್ದಾರೆ. ಈ ತಂಡಕ್ಕೆ 25 ಸಾವಿರ ರು. ನಗದು ಬಹುಮಾನ ಘೋಷಿಸಿದ್ದಾರೆ.