ಸಿಗರೇಟ್ ಕೊಡದ ಕಾರಣಕ್ಕೆ ಮಹಿಳೆಯೊಬ್ಬರ ಅಂಗಡಿಯನ್ನೇ ಸುಟ್ಟು ಹಾಕಿದ್ದ ನಟೋರಿಯಸ್ ಕ್ರಿಮಿನಲ್ ಒಬ್ಬನ ಮೇಲೆ ಮಂಗಳೂರಿನ ಉಳ್ಳಾಲ ಪೊಲೀಸರು ಗುಂಡು ಹಾರಿಸಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜು.17): ಸಿಗರೇಟ್ ಕೊಡದ ಕಾರಣಕ್ಕೆ ಮಹಿಳೆಯೊಬ್ಬರ ಅಂಗಡಿಯನ್ನೇ ಸುಟ್ಟು ಹಾಕಿದ್ದ ನಟೋರಿಯಸ್ ಹಿನ್ನೆಲೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನ ಮೇಲೆ ಮಂಗಳೂರಿನ ಉಳ್ಳಾಲ ಪೊಲೀಸರು ಗುಂಡು ಹಾರಿಸಿದ್ದಾರೆ. ಬೇರೆ ಅಪರಾಧ ಕೇಸ್ ನಲ್ಲಿ ಮಹಜರು ನಡೆಸಲು ಬಂದಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ವೇಳೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಬಳಿ ಫೈರಿಂಗ್ ನಡೆದಿದೆ. ಮಂಗಳೂರಿನ ಕೆಲ ಠಾಣಾ ವ್ಯಾಪ್ತಿಯಲ್ಲಿ 15 ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ನಡೆದಿದೆ. ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿ ವಾಸುದೇವ ಹಾಗೂ ಅಕ್ಬರ್ ಎಂಬವರಿಗೆ ಗಾಯಗಳಾಗಿವೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮುಕ್ತಾರ್ ನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಶನಿವಾರ ಸೆರೆಹಿಡಿದಿದ್ದ ಉಳ್ಳಾಲ ಪೊಲೀಸರು, ಇಂದು ನಸುಕಿನ ಜಾವ ಆತನ ಬೈಕ್ ನ ಮಹಜರಿಗೆ ಕೊಣಾಜೆ ಬಳಿಯ ಅಸೈಗೋಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ್ದು, ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಕಾಲಿಗೆ ಗುಂಡು ಹೊಡೆದಿದ್ದಾರೆ.
ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಶಶಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
19ನೇ ವರ್ಷಕ್ಕೆ ಕ್ರಿಮಿನಲ್ ಅಗಿದ್ದ ಮುಕ್ತಾರ್!: ಮಂಗಳೂರಿನ ಕೊಣಾಜೆ ಬಳಿ ರೌಡಿಶೀಟರ್ ಮೇಲೆ ಫೈರಿಂಗ್ ವಿಚಾರ ಸಂಬಂಧಿಸಿ ರೌಡಿಶೀಟರ್ ಮುಕ್ತಾರ್ ನ ಕ್ರೈಂ ಹಿಸ್ಟರಿಯೇ ಭಯಾನಕವಾಗಿದೆ. ಈತ ಸಿಗರೇಟ್ ಕೊಡದ ಕಾರಣಕ್ಕೆ ಮಹಿಳೆಯ ಅಂಗಡಿಯನ್ನೇ ಬೆಂಕಿ ಹಚ್ಚಿ ಸುಟ್ಟಿದ್ದ ನಟೋರಿಯಸ್ ಆಗಿದ್ದ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
2021ರಲ್ಲಿ ಶೋಭಾ ಎಂಬ ಹೆಣ್ಮಗಳು ಸಣ್ಣ ಗೂಡಂಗಡಿ ನಡೆಸ್ತಾ ಇದ್ದಳು. ಈ ವೇಳೆ ಮುಕ್ತಾರ್ ಆಕೆಯ ಬಳಿ ಸಿಗರೇಟ್ ಕೇಳಿದ್ದಾನೆ. ಆದರೆ ಆಕೆ ಅಂಗಡಿ ಕ್ಲೋಸ್ ಆಗಿದೆ ಅಂತ ಹೇಳಿದ್ದಾಳೆ. ಆಗ ಆಕ್ರೋಶದಿಂದ ಆಕೆಯ ಅಂಗಡಿಗೆ ಬೆಂಕಿ ಹಾಕಿ ಸುಟ್ಟಿದ್ದ. ಆವಾಗಲೂ ಆತ ವಾರೆಂಟ್ ಮೇಲೆ ಕಣ್ತಪ್ಪಿಸಿ ಓಡಾಡ್ತಿದ್ದ. ಈತ 2014ರಿಂದ ಅಪರಾಧ ಚಟುವಟಿಕೆಯಲ್ಲಿ ಇದ್ದಾನೆ. ಈಗ 27 ವರ್ಷ ವಯಸ್ಸಾಗಿದ್ದು, ಸಣ್ಣ ಪ್ರಾಯದಲ್ಲೇ ಕ್ರಿಮಿನಲ್ ಚಟುವಟಿಕೆ ಭಾಗಿಯಾಗಿದ್ದ. ಉಳ್ಳಾಲ, ಉತ್ತರ ಠಾಣೆ, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇವೆ.
ಕಳೆದ ಐದು ವರ್ಷಗಳಿಂದ ಈತನ ಪತ್ತೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆಯೂ ಈತ ಆರು ಅಪರಾಧಗಳನ್ನು ಮಾಡಿದ್ದಾನೆ. ಆರು ಕೊಲೆ ಯತ್ನ, ಎರಡು ಅಕ್ರಮ ಶಸ್ತಾಸ್ತ್ರ ಕಾಯ್ದೆ, ದರೋಡೆ ಕೇಸ್ ಇದೆ. ಆರೋಪಿ ಮುಕ್ತಾರ್ ಮೇಲೆ ಬೆಳಿಗ್ಗೆ 6.30ಕ್ಕೆ ಉಳ್ಳಾಲ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಆಯುಧಗಳನ್ನು ಇಟ್ಟಿದ್ದ ಜಾಗಕ್ಕೆ ಕರೆ ತರಲಾಗಿತ್ತು. ಈ ವೇಳೆ ನಮ್ಮ ಇಬ್ಬರು ಸಿಬ್ಬಂದಿ ಮೇಲೆ ಆರೋಪಿ ದಾಳಿ ಮಾಡಿದ್ದಾನೆ. ಆಗ ಇನ್ಸ್ಪೆಕ್ಟರ್ ಸಂದೀಪ್ ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದಾರೆ. ಆದರೂ ಲೆಕ್ಕಿಸದೇ ಇದ್ದಾಗ ಎಡಗಾಲಿಗೆ ಫೈರ್ ಮಾಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
