ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಪರೂಪದ ಕಳ್ಳತನವೊಂದು ನಡೆದಿದೆ. 2 ಲಕ್ಷ ಕದಿಯಲು ಹೋದವರಿಗೆ ಸಿಕ್ಕಿದ್ದು, ಮೂಟೆಯಲ್ಲಿದ್ದ 2 ಕೋಟಿ ಹಣ. ಆದರೆ ಅದನ್ನು ಅನುಭವಿಸುವ ಮುನ್ನವೇ ಕುಮಾರಸ್ವಾಮಿ ಲೇಔಟ್ ಪೊಲೀಸರ ಅತಿಥಿ ಆಗಿದ್ದಾರೆ. 

ವರದಿ: ಚೇತನ್ ಮಹಾದೇವ್

ಬೆಂಗಳೂರು (ಏ.07): ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಅಪರೂಪದ ಕಳ್ಳತನವೊಂದು (Robbery) ನಡೆದಿದೆ. 2 ಲಕ್ಷ ಕದಿಯಲು ಹೋದವರಿಗೆ ಸಿಕ್ಕಿದ್ದು, ಮೂಟೆಯಲ್ಲಿದ್ದ 2 ಕೋಟಿ ಹಣ. ಆದರೆ ಅದನ್ನು ಅನುಭವಿಸುವ ಮುನ್ನವೇ ಕುಮಾರಸ್ವಾಮಿ ಲೇಔಟ್ ಪೊಲೀಸರ (Police) ಅತಿಥಿ ಆಗಿದ್ದಾರೆ. ಸುನಿಲ್ ಕುಮಾರ್ ಹಾಗೂ ದಿಲೀಪ್ ಎಂಬುವರನ್ನು ಬಂಧಿಸಿದ್ದು, ಇವರಿಂದ 1.76 ಕೋಟಿ ನಗದು ಹಾಗೂ 12 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ‌‌.

ಸುನೀಲ್‌ಕುಮಾರ್ ಮಂಡ್ಯ ಮೂಲದವನಾಗಿದ್ದು, ಸುಬ್ರಮಣ್ಯಪುರದಲ್ಲಿ ವಾಸವಾಗಿದ್ದ. ಜೀವನಕ್ಕಾಗಿ ಆಟೊ ಓಡಿಸಿಕೊಂಡಿದ್ದ. ಮತ್ತೊಬ್ಬ ಆರೋಪಿ ದಿಲೀಪ್‌ ‌ಮಂಡ್ಯದವನಾಗಿದ್ದು, ಮಾಗಡಿ‌ ರೋಡ್‌ನಲ್ಲಿ ವಾಸವಾಗಿದ್ದ.‌ ಕಳ್ಳತನ ಹಾಗೂ ಡ್ರಗ್ಸ್ ಪ್ರಕರಣಗಳಲ್ಲಿ ಇಬ್ಬರು ಜೈಲು ಸೇರಿದ್ದರು. ಜೈಲಿನಲ್ಲಿದ್ದಾಗ ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ಜಾಮೀನಿ‌ನ ಮೇರೆಗೆ ಹೊರಬಂದ ಬಳಿಕ ನಿನ್ನ ಜೀವನದ ದಿಕ್ಕನ್ನೇ ಚೇಂಜ್‌ ಮಾಡ್ತೇನೆ ಎಂದು ದಿಲೀಪ್‌ಗೆ ಸುನೀಲ್ ಭರವಸೆ ನೀಡಿದ್ದ.

ಕಳ್ಳತನಕ್ಕೆ ಕೈ ಹಾಕಿದ್ದೆ ಇಂಟೆರೆಸ್ಟಿಂಗ್: ಜೈಲಿಂದ ಬಂದ ಬಳಿಕ ಆಟೊ ಒಡಿಸುತ್ತಿದ್ದ ಸುನೀಲ್ ಒಮ್ಮೆ ಜೆಪಿ ನಗರದಿಂದ ಕೆ.ಎಸ್.ಲೇಔಟ್ ಗೆ ಬಾಡಿಗೆಗೆ ಬಂದಿದ್ದ. ಕಳ್ಳತನಕ್ಕೆ ಮಾಡಿದ‌ ಮನೆ ಮಾಲೀಕ ಸಂದೀಪ್ ಲಾಲ್ ಮನೆ ಮುಂದೆ ಬಂದು ಪ್ಯಾಸೆಂಜರ್ ಡ್ರಾಪ್ ಮಾಡಿದ್ದ.‌ಈ ವೇಳೆ ಸಂದೀಪ್ ಲಾಲ್ ತಂದೆ ಮನಮೋಹನ್ ಲಾಲ್ ಗೆ ವ್ಯಕ್ತಿಯೊಬ್ಬನಿಗೆ ಕಂತೆ ಕಂತೆ ಹಣ ಕೊಟ್ಟಿದ್ದ.‌ ಅದನ್ನ ನೋಡಿದ್ದ ಸುನೀಲ್ ಕಣ್ಣು ಕೆಂಪಾಗಿತ್ತು. ಅಲ್ಲದೇ ಮನೆ ಮುಂದೆ ಐಷಾರಾಮಿ ಬೈಕ್‌ಗಳು ನಿಂತಿದ್ದವು. ಸಂದೀಪ್ ಲಾಲ್ ಒಬ್ಬನೇ ಒಂದು ಮನೆಯಲ್ಲಿ ವಾಸವಿದ್ದ.ಅವರ ತಂದೆ ಮನಮೋಹನ್ ಲಾಲ್ ಮತ್ತು ತಾಯಿ ಪಕ್ಕದಲ್ಲೇ ಮನೆ ಮಾಡಿಕೊಂಡು ವಾಸವಿದ್ದು, ಆಗಾಗ ಬಂದು ಹೋಗುತಿದ್ದದ್ದನ್ನು ಅರಿತುಕೊಂಡಿದ್ದ. 

Bengaluru: ಹಣಕ್ಕಾಗಿ ಮಗನಿಗೆ ಬೆಂಕಿ ಇಟ್ಟ ಕ್ರೂರಿ ತಂದೆ: ಚಿಕಿತ್ಸೆ ಫಲಿಸದೆ ಮಗ ಸಾವು

ಕೆಲಸ‌ದ ಸಲುವಾಗಿ ಸಂದೀಪ್ ಲಾಲ್ ಚೆನ್ನೈಗೆ ಹೋಗಿದ್ದ.‌ಇನ್ನೊಂದೆಡೆ ‌ಖದೀಮ ಮನೆ ಬಳಿ ಒಂದು ಮಾಲೀಕನ ಚಲನವಲನ ಗಮನಿಸಿದ್ದಾನೆ. ಸಹಚರ ದಿಲೀಪ್‌ನನ್ನು ಜೊತೆಗೆ ಕರೆದುಕೊಂಡು ಬಂದು ಕಳ್ಳತನಕ್ಕೆ ಪ್ಲಾನ್ ಮಾಡಿಕೊಂಡಿದ್ದ. ಮಾರ್ಚ್ 28ರಂದು ಮನೆ ಬಳಿ ಬಂದು ವಾಚ್ ಮಾಡ್ತಿದ್ದ. ಸುನೀಲ್ ಮತ್ತು ದಿಲೀಪ್ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಖದೀಮರು‌ ಅದೇ ರಾತ್ರಿ 12 ಗಂಟೆಗೆ ಮನೆಗೆ ನುಗ್ಗಿ ಕಳ್ಳತನ‌ ಮಾಡಿದ್ದಾರೆ.

2 ಕೋಟಿ ನೋಡಿ ಕಳ್ಳರೇ ಫುಲ್ ಕಕ್ಕಾಬಿಕ್ಕಿ: ಸುಮಾರು ಅರ್ಧ ಗಂಟೆಗಳ ತಡಕಾಡಿದ ಖದೀಮರಿಗೆ ಏನು ಸಿಕ್ಕಿರಲಿಲ್ಲ. ಮನೆಯ ಸಜ್ಜೆ ಮೇಲಿದ್ದ ಚೀಲ ಅನುಮಾನಸ್ಪಾದವಾಗಿ ಇರುವುದನ್ನು ಗಮನಿಸಿ‌ ಖದೀಮರು ಅದನ್ನ ತೆಗೆದು ನೋಡಿದಾಗ 2 ಕೋಟಿ ರೂ.ಹಣ ಇರುವುದನ್ನು ನೋಡಿ ಕಳ್ಳರೇ ಶಾಕ್ ಗೆ ಒಳಗಾಗಿದ್ದಾರೆ‌. ಕೋಟಿ-ಕೋಟಿ ಹಣ ಸಿಕ್ಕ‌ ಖುಷಿಗೆ ಮನೆಯಲ್ಲಿದ್ದ ಫಾರಿನ್ ಬ್ರಾಂಡ್ ಮದ್ಯ ಸೇವಿಸಿ ಸಂಭ್ರಮಿಸಿದ್ದಾರೆ. ನಂತರ ಎರಡು ಕೋಟಿ ಹಣದ ಗುಡ್ಡೆಯನ್ನು ಮಧ್ಯಭಾಗ ಮಾಡಿ ಸಮನಾಗಿ ಆರೋಪಿಗಳು ಹಣ ಹಂಚಿಕೊಂಡಿದ್ದಾರೆ.

ದಿಲೀಪ್ ಕದ್ದ ಹಣದಲ್ಲಿ ತಂದೆ ತಾಯಿಗೆ ಚಿನ್ನಾಭರಣ ಕೊಡಿಸಿದ್ದ. ಅಲ್ಲದೆ ಗೋವಾಗೆ ತೆರಳಿ ಮಜಾ ಮಾಡಿ ಬಂದಿದ್ದ. ಸುನೀಲ್ ಮಾತ್ರ ಖರ್ಚು ಮಾಡದೆ ಒಂದು ಕಡೆ ಕೂಡಿಟ್ಟಿದ್ದ. ಪ್ರತಿದಿನ ಹೋಗಿ ಹಣ ನೋಡಿ ಬರ್ತಿದ್ದ. ಕಳ್ಳತನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Woman Death: ಸವದತ್ತಿ ಈ ಸಾವು ನ್ಯಾಯವೇ? ಜನ್ಮನೀಡಿದವಳನ್ನು ಆಕ್ಸಿಜನ್ ಇಲ್ಲದ ಆಂಬುಲೆನ್ಸ್ ನಲ್ಲಿ ಕಳಿಸಿದ್ರು!

ಹಣದ‌‌ ಮೂಲ ಕೋರಿ ಐಟಿಗೆ ಪತ್ರ ಬರೆದ ಖಾಕಿ: ಮನೆಯ ಸಜ್ಜೆಯಲ್ಲಿ ಚೀಲಗಳಲ್ಲಿ ಇಟ್ಟಿದ್ದ ಕೋಟ್ಯಂತರ‌ ರೂಪಾಯಿ ಹಣದ‌‌ ಮೂಲದ ಬಗ್ಗೆ‌ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ‌. ಹಣ ಎಲ್ಲಿಂದ ಬಂತು.? ಹೇಗೆ ಬಂತು.? ಎಂಬುದರ ಬಗ್ಗೆ ಮನೆ ಮಾಲೀಕ ಸಂದೀಪ್ ಲಾಲ್ ವಿಚಾರಣೆ ನಡೆಸುತ್ತಿದ್ದಾರೆ.‌ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದೆ, ಲ್ಯಾಂಡ್ ಮಾರಿ ಹಣ ಸಂಪಾದನೆ ಮಾಡಿರುವೆ ಎಂದು ಲಾಲ್ ಹೇಳಿಕೆ‌ ನೀಡಿದ್ದಾರೆ. ಸದ್ಯ ಐಟಿಗೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.