ಸ್ಟಾಪ್ ನರ್ಸ್‌ಗೆ ದೈಹಿಕ ಕಿರುಕುಳ ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯ ರಮೇಶ್ ಮೂಲಿಮನಿ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊಪ್ಪಳ (ಜು.15): ಸ್ಟಾಪ್ ನರ್ಸ್‌ಗೆ ದೈಹಿಕ ಕಿರುಕುಳ ನೀಡಿದ ಆರೋಪದಡಿ ತಾಲೂಕಿನ ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರ ವೈದ್ಯ ರಮೇಶ್ ಮೂಲಿಮನಿ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನಗೆ ಸಹಕರಿಸು ಎಂದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಸ್ವತಃ ನರ್ಸ್​ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೊಪ್ಪಳ ತಾಲೂಕು ಹಿರೇಸಿಂದೋಗಿ ಗ್ರಾಮ ಸಮೂದಯ ಆರೋಗ್ಯ ಕೇಂದ್ರದ ವೈದ್ಯ ರಮೇಶ್ ಮೂಲಿಮನಿ ಸ್ಟಾಪ್ ನರ್ಸ್‌ ಅವರಿಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದನು. ಈ ವಿಚಾರವನ್ನು ನರ್ಸ್‌ ಅವರು ತನ್ನ ಪತಿಗೆ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಇದರಿಂದ ಕೋಪಗೊಂಡ ವೈದ್ಯ ರಮೇಶ್, ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದು, ಸಂಸಾರ ಒಡೆಯುತ್ತೆನೆ, ಸತಿ-ಪತಿಗಳನ್ನ ಬೇರ್ಪಡಿಸುತ್ತೆನೆಂದು ಅವಾಜ್ ಹಾಕಿದ್ದನಂತೆ. ಅಷ್ಟಕ್ಕೂ ನಿಲ್ಲದ ವೈದ್ಯ ರಮೇಶ್​ನ ಕಿರುಕುಳ, ಅಮಿನಾ ಅವರ ಕಳೆದ ಎರಡೂ ತಿಂಗಳ ಸಂಬಳ ತಡೆಹಿಡಿದಿದ್ದಾನೆ. ಇದನ್ನ ಕೇಳಲು ಹೋಗಿದ್ದ ನರ್ಸ್‌ ಪತಿಯ ವಿರುದ್ಧವೇ ದೂರು ನೀಡಿ ಜೈಲಿಗಟ್ಟಿದ್ದನು. ಸದ್ಯ ಕಿರುಕುಳದಿಂದ ಬೇಸತ್ತ ನರ್ಸ್‌ ಅವರು ಅಳವಂಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದರ ಅನ್ವಯ ಪೊಲೀಸರು ವೈದ್ಯ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಟ್ರ್ಯಾಪ್‌ಗೆ ಫುಡ್ ಇನ್ಸ್‌ಪೆಕ್ಟರ್

ವರದಕ್ಷಿಣೆ ಕಿರುಕುಳ, ಆರೋಪ: ತವರು ಮನೆಯಿಂದ 5 ತೊಲೆ ಬಂಗಾರ ತರುವಂತೆ ಗಂಡ, ಅತ್ತೆ, ಮೈದುನ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಚಿತ್ತಾಪುರ ತಾಲೂಕಿನ ಅಲ್ಲೂರ ಗ್ರಾಮದ ಜ್ಯೋತಿ ಅಲಿಯಾಸ್‌ ಭೂಮಿಕಾ (21) ಎಂಬುವವರೆ ದೂರು ಸಲ್ಲಿಸಿದ್ದು, 13.5.2022ರಲ್ಲಿ ಪಾಣೇಗಾಂವ ಗ್ರಾಮದ ವಿಜಯಕುಮಾರ ಜೊತೆ ಮದುವೆಯಾಗಿದ್ದು, ಮದುವೆಯಲ್ಲಿ 5.5.ತೊಲೆ ಬಂಗಾರ, 1 ಲಕ್ಷ ರು. ನಗದು ಮತ್ತು ಇತರೆ ಗೃಹ ಬಳಕೆ ಸಾಮಾನು ಸೇರಿ 8 ಲಕ್ಷ ರು. ನೀಡಲಾಗಿದೆ.

ಮದುವೆಯಾದ ಒಂದು ತಿಂಗಳವರೆಗೆ ಸರಿಯಾಗಿ ನೋಡಿಕೊಂಡ ಗಂಡನ ಮನೆಯವರು ನಂತರ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ, ನೀನು ನೋಡಲು ಸರಿಯಾಗಿಲ್ಲ, ನಿನ್ನ ತವರು ಮನೆಯವರು ವರದಕ್ಷಿಣೆ ಕಡಿಮೆ ನೀಡಿದ್ದಾರೆ ಎಂದೆಲ್ಲ ಹೇಳಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಪತಿ ವಿಶಾಲಕುಮಾರ ರಾತ್ರಿ ಕುಡಿದು ಬಂದು ಚುಚ್ಚು ಮಾತುಗಳನ್ನು ಆಡಿ ತವರು ಮನೆಯಿಂದ 5 ತೊಲೆ ಬಂಗಾರ ತರುವಂತೆ ಕಿರುಕುಳ ನೀಡಿದ್ದರಿಂದ ಈ ವಿಷಯ ತವರು ಮನೆಯವರ ಗಮನಕ್ಕೆ ತಂದಿದ್ದೇನೆ. ತಂದೆ-ತಾಯಿ ಬಂದು ಬುದ್ಧಿವಾದ ಹೇಳಿದರು ಕೇಳಿಲ್ಲ.

ಮಲಗಿದ್ದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಇಬ್ಬರು ಯುವಕರು

ಇದರಿಂದ ಬೇಸತ್ತು ತವರು ಮನೆಗೆ ಹೋಗಿದ್ದು, ಗಂಡ ಇಂದಲ್ಲ ನಾಳೆ ಸರಿ ಹೋಗಬಹುದು ಎಂದು ತಾಳಿಕೊಂಡು ತವರು ಮನೆಯಲ್ಲಿಯೇ ಉಳಿದಿದ್ದು, ಗಂಡನ ಮನೆಯವರು ಕರೆದುಕೊಂಡು ಹೋಗಲು ಬಾರದೇ ಇರುವುದರಿಂದ 6.7.2023ರಂದು ತಂದೆ-ತಾಯಿ ಮತ್ತು ಬಂಧುಗಳೊಂದಿಗೆ ಮರಳಿ ಗಂಡನ ಮನೆಗೆ ಹೋಗಿದ್ದೇನೆ. ಈ ವೇಳೆ 5 ತೊಲೆ ಬಂಗಾರ ತಂದರೆ ಮಾತ್ರ ಮನೆಯೊಳಗೆ ಕರೆದುಕೊಳ್ಳುತ್ತೇವೆ, ಇಲ್ಲದಿದ್ದರೆ ಇಲ್ಲ ಎಂದು ಹೇಳಿ ಗಂಡ ಮತ್ತು ಆತನ ಮನೆಯವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.