Asianet Suvarna News Asianet Suvarna News

ದನ ಕದಿಯಲು ಬಂದ ವ್ಯಕ್ತಿ ಅನುಮಾನಾಸ್ಪದ ಸಾವು: ಕಾರಣ..?

ಕೋಲ್ಡ್‌ ಸ್ಟೋರೇಜ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುಂಬೈ ಮೂಲದ ಮಹಮದ್‌ ಫರಿಯಾದ್‌ ಶೇಖ್‌ ಖುರೇಷಿ| ಲಾಕ್ಡೌನ್‌ ನಂತರ ಕೋಲ್ಡ್‌ ಸ್ಟೋರೇಜ್‌ ಬಂದ್‌ ಆಗಿದ್ದರಿಂದ ನಿರುದ್ಯೋಗಿ ಆಗಿದ್ದ ಆರೋಪಿ| ತೋಟದಲ್ಲಿ ಕಟ್ಟಿದ್ದ ದನಗಳನ್ನು ಕದಿಯಲು ಯತ್ನಿಸಿದ್ದ ಖುರೇಷಿ| 

Person Suspicious Dies at  Kalaburagi grg
Author
Bengaluru, First Published Feb 6, 2021, 3:13 PM IST

ಕಲಬುರಗಿ(ಫೆ.06):ದನಗಳ ಕಳ್ಳತನಕ್ಕ ಯತ್ನಿಸಿದ ವ್ಯಕ್ತಿಯೊಬ್ಬ ಹೊಲದಲ್ಲಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಸಿರನೂರ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮುಂಬೈ ಮೂಲದ ಮಹಮದ್‌ ಫರಿಯಾದ್‌ ಶೇಖ್‌ ಖುರೇಷಿ (40) ಎಂದು ಗುರುತಿಸಲಾಗಿದೆ. ನಗರದ ಕೋಲ್ಡ್‌ ಸ್ಟೋರೇಜ್‌ ಒಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಲಾಕ್ಡೌನ್‌ ನಂತರ ಕೋಲ್ಡ್‌ ಸ್ಟೋರೇಜ್‌ ಬಂದ್‌ ಆಗಿದ್ದರಿಂದ ನಿರುದ್ಯೋಗಿ ಆಗಿದ್ದ ಅವರು, ಬುಧವಾರ ತಡರಾತ್ರಿ ಸಿರನೂರಿನ ಹೊರವಲಯದ ತೋಟದಲ್ಲಿ ಕಟ್ಟಿದ್ದ ದನಗಳನ್ನು ಕದಿಯಲು ಯತ್ನಿಸಿದ್ದಾರೆ. 

ದನಗಳ ಹಗ್ಗ ಬಿಚ್ಚಿಕೊಂಡು ಹೊರಟ ಸಂದರ್ಭದಲ್ಲಿ ತೋಟದ ಮಾಲೀಕ ಶ್ರೀನಿವಾಸ ಗುತ್ತೇದಾರ ಹಾಗೂ ಕುಟುಂಬದವರಿಗೆ ಎಚ್ಚರವಾಗಿದೆ. ತಕ್ಷಣ ಅವರು ಆರೋಪಿಯನ್ನು ಹಿಡಿಯಲು ಹಿಂಬಾಲಿಸಿದ್ದಾರೆ. ಆಗ ಶ್ರೀನಿವಾಸ ಹಾಗೂ ಅವರ ಕುಟುಂಬದವರ ಮೇಲೆ ಆರೋಪಿ ಕಲ್ಲು ತೂರಲು ಶುರು ಮಾಡಿದ್ದಾನೆ. ಅಷ್ಟೊತ್ತಿಗೆ ಗ್ರಾಮದ ಹಲವರು ಜಮಾವಣೆಗೊಂಡು ಆರೋಪಿ ಮೇಲೂ ಕಲ್ಲು ತೂರಿದ್ದಾರೆ. ನಂತರ ಆತ ತೊಗರಿ ಹೊಲದಲ್ಲಿ ಕಣ್ಮರೆ ಆಗಿದ್ದ’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ ತಿಳಿಸಿದ್ದಾರೆ.

ಮಾಜಿ ಸಿಎಂ ಧರ್ಮಸಿಂಗ್‌ ಸಂಬಂಧಿ ಕೊಲೆ ಕೇಸ್‌: ಮಲತಾಯಿ ವಿಚಾರಣೆ

ಆದರೆ, ಗುರುವಾರ ನಸುಕಿನಲ್ಲಿ ಖುರೇಷಿಯು ತೊಗರಿ ಹೊಲದಲ್ಲೇ ಬಿದ್ದಿದ್ದ. ಇದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್‌ ತಮ್ಮಾರಾಯ ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಆಂಬುಲೆನ್ಸ್‌ ಮೂಲಕ ಜಿಮ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೂರು ತಾಸಿನ ನಂತರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ಖಾತ್ರಿಪಡಿಸಿದ್ದಾರೆ ಎಂದೂ ಸತೀಶಕುಮಾರ ತಿಳಿಸಿದ್ದಾರೆ.

ದನಗಳನ್ನು ಕದಿಯಲು ಬಂದ ಕಾರಣ ಆರೋಪಿ ಮೇಲೆ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರ ಮಗ ಕೂಡ ಕಲಬುರಗಿಯಲ್ಲೇ ವಾಸವಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆ ಮಾಡಲಾಗಿದೆ ಎಂದು ಅವರು ದೂರು ನೀಡಿದರೆ ಅದನ್ನೂ ದಾಖಲಿಸಿಕೊಳ್ಳುತ್ತೇವೆ ಎಂದೂ ಅವರು ತಿಳಿಸಿದರು. ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios