ಪತ್ನಿಯ ಮೊದಲ ಪತಿಗೆ ಚಾಕು ಇರಿದು ಕೊಂದ ಎರಡನೇ ಪತಿ..!
ಮತ್ತೊಂದು ಮದುವೆ ಆಗಿದ್ದಕ್ಕೆ ಮೊದಲ ಗಂಡ ತಕರಾರು, ಜಗಳ| ಮದ್ಯ ಸೇವಿಸಿ ತೆರಳುತ್ತಿದ್ದವನ ಕೊಲೆ| ಬೆಂಗಳೂರಿನ ಬಸವನಗುಡಿ ಬಳಿ ನಡೆದ ಘಟನೆ| ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಂಗಳೂರು(ಆ.09): ವೈಯಕ್ತಿಕ ಕಾರಣಗಳಿಗಾಗಿ ಪತ್ನಿಯ ಮೊದಲ ಪತಿಯನ್ನು ಎರಡನೇ ಗಂಡ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬಸವನಗುಡಿ ಸಮೀಪ ನಡೆದಿದೆ. ಚಾಮರಾಜನಗರದ ಕೊಳ್ಳೆಗಾಲದ ಲಾರಿ ಕ್ಲೀನರ್ ಸಿದ್ದರಾಜು (26) ಕೊಲೆಯಾದ ದುರ್ದೈವಿ.
ಈ ಘಟನೆ ಸಂಬಂಧ ಆರೋಪಿ ಲಕ್ಷ್ಮಣ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತನ್ನ ಸ್ನೇಹಿತರ ಜತೆ ಮದ್ಯ ಸೇವಿಸಿ ಸಿದ್ದರಾಜು, ಲಾರಿಯಲ್ಲಿ ಮಲಗಲು ತೆರಳುವಾಗ ಮಾರ್ಗ ಮಧ್ಯೆ ಸುಬ್ಬಣ್ಣ ಚೆಟ್ಟಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿದೆ.
ಆಸ್ತಿಗಾಗಿ ಕಲಹ: ವಿಷದ ಇಂಜಕ್ಷನ್ ನೀಡಿ ತಂದೆಯನ್ನೇ ಕೊಲ್ಲಿಸಿದ ಮಗ
ಕೆಲವು ವರ್ಷಗಳ ಹಿಂದೆ ತನ್ನೂರಿನ ಲತಾ ಜೊತೆ ಕೊಳ್ಳೇಗಾಲ ಸಿದ್ದರಾಜು ವಿವಾಹವಾಗಿದ್ದ. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಯಿತು. ಈ ಹಿನ್ನೆಲೆಯಲ್ಲಿ ಪತಿಯನ್ನು ತೊರೆದ ಲತಾ, ಹೂವಿನ ವ್ಯಾಪಾರಿ ಲಕ್ಷ್ಮಣ್ ಜತೆ ಎರಡನೇ ವಿವಾಹವಾಗಿದ್ದಳು. ಈ ವಿಷಯ ತಿಳಿದು ಕೆರಳಿದ ಸಿದ್ದರಾಜು, ಬಸವನಗುಡಿ ಹತ್ತಿರದಲ್ಲಿರುವ ಪತ್ನಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸಹ ಜಗಳವಾಗಿತ್ತು. ಈ ಗಲಾಟೆ ವಿಚಾರ ಗೊತ್ತಾಗಿ ಸಿದ್ದರಾಜು ಮೇಲೆ ಲಕ್ಷ್ಮಣ್ ಕೋಪಗೊಂಡಿದ್ದ.
ಆಗ ಸಿದ್ದರಾಜು ಕೊಲೆಗೆ ನಿರ್ಧರಿಸಿದ ಲಕ್ಷ್ಮಣ್, ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಸಂಚು ಕಾರ್ಯರೂಪಕ್ಕಿಳಿಸಿದ್ದಾನೆ. ತನ್ನ ಸ್ನೇಹಿತರ ಜತೆ ಮದ್ಯ ಸೇವಿಸಿದ್ದ ಸಿದ್ದರಾಜು, ಲಾರಿಯಲ್ಲಿ ವಿಶ್ರಾಂತಿಗೆ ತೆರಳುತ್ತಿದ್ದ. ಅದೇ ವೇಳೆಗೆ ಬಂದ ಲಕ್ಷ್ಮಣ್, ಗಲಾಟೆ ತೆಗೆದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಬಿರುಸಿನ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಿದ್ದರಾಜುನಿಗೆ ಆರೋಪಿ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. ತಕ್ಷಣವೇ ಗಾಯಾಳು ರಕ್ಷಣೆಗೆ ಸಾರ್ವಜನಿಕರು ಧಾವಿಸಿದ್ದಾರೆ. ಆದರೆ ಆ ವೇಳೆಗೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.