Asianet Suvarna News Asianet Suvarna News

ದಾವಣಗೆರೆಯಲ್ಲಿದೆ ಖತರ್ನಾಕ್‌ ಖದೀಮರ ಗ್ಯಾಂಗ್‌: ಸ್ವಲ್ಪ ಯಾಮಾರಿದ್ರೂ ಪಂಗನಾಮ ಗ್ಯಾರಂಟಿ..!

ರೋಗಿಗಳ ಹೆಸರಿಗೆ ವಿಮೆ ಮಾಡಿಸಿ ಇನ್ಸುರೆನ್ಸ್ ಕಂಪನಿಗಳಿಂದ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುತ್ತಿದ್ದ ಖದೀಮರ ಟೀಮ್ ವೊಂದು ದಾವಣಗೆರೆ ಜಿಲ್ಲೆಯಲ್ಲಿ ಸಕ್ರೀಯವಾಗಿದೆ. 

People Should Aware of Cheaters Gang in Davanagere grg
Author
First Published Sep 15, 2022, 7:26 AM IST

ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್,ದಾವಣಗೆರೆ

ದಾವಣಗೆರೆ(ಸೆ.15):  ಕ್ಯಾನ್ಸರ್ ರೋಗಿಗಳನ್ನು ಹುಡುಕಿ ಅವರನ್ನು ಪುಸಲಾಯಿಸಿ ನಿಮಗೆ ಹಣ ಬರುವಂತೆ ಮಾಡುತ್ತೇವೆ ಎಂದು ದಾಖಲೆಗಳನ್ನು ಪಡೆದುಕೊಂಡು ರೋಗಿಗಳ ಹೆಸರಿಗೆ ವಿಮೆ ಮಾಡಿಸಿ ಇನ್ಸುರೆನ್ಸ್ ಕಂಪನಿಗಳಿಂದ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುತ್ತಿದ್ದ ಖದೀಮರ ಟೀಮ್ ವೊಂದು ದಾವಣಗೆರೆ ಜಿಲ್ಲೆಯಲ್ಲಿ ಸಕ್ರೀಯವಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾದ ಪ್ರಕರಣವೊಂದರಲ್ಲಿ  ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷ ಲಕ್ಷ ಲೂಟಿ ಮಾಡಿದ ಗುಂಪನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದಾವಣಗೆರೆ ಮೂಲದ ವಾಗೇಶ್, ಶಿಕ್ಷಕರಾದ ರವಿ, ಪಿ ಎಂ  ಮಹೇಶ್ವರಯ್ಯ, ಅನಿಲ್ ಕುಮಾರ್, ಚಂದ್ರು ಬ್ಯಾಂಕ್ ಉದ್ಯೋಗಿ ಶಿವಕುಮಾರ್,  ಚೇತನ್ ನರಗನಹಳ್ಳಿ, ವಿನೋದ್ ರೆಡ್ಡಿ, ಹನುಮಂತರೆಡ್ಡಿ, ರಾಜಶೇಖರ್ ರೆಡ್ಡಿ  ಸೇರಿದಂತೆ ಒಟ್ಟು 10 ಜನ ಆರೋಪಿಗಳಾಗಿದ್ದಾರೆ. ಬ್ಯಾಂಕ್ ಇನ್ಸುರೆನ್ಸ್ ಕಂಪನಿ, ಶಾಲೆ, ಐಟಿ ರಿಟರ್ನ್, ಜನ್ಮದಿನ ಹೀಗೆ ಹಲವು ದಾಖಲೆಗಳನ್ನೇ ನಕಲಿಯಾಗಿ ಸೃಷ್ಟಿಸಿ ಲಕ್ಷದಿಂದ ಕೋಟಿವರೆಗಿನ ಹಣವನ್ನು ಲಪಟಾಯಿಸುವುದೇ ಇವರ ಕಾಯಕ. ಹೀಗೆ ದಾವಣಗೆರೆ ಜಿಲ್ಲೆ ಸೇರಿದಂತೆ ಮಧ್ಯಕರ್ನಾಟಕದ ಹಲವಡೆ ಇವರು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚಿಸಿದ್ದಾರೆ.

ಹಿಂದೂ ಹುಡುಗಿ-ಮುಸ್ಲಿಂ ಹುಡುಗ ವಿವಾಹಕ್ಕೆ ಅಡ್ಡಿ: ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ಬುಕ್

ಹರಪನಹಳ್ಳಿ ತಾಲೂಕಿನ ಜಂಗಮ ತುಂಬಿಗೆರೆ ಟಿ.ಎಂ. ಬೋಗೇಶ್ವರಯ್ಯ ಎಂಬುವರಿಗೆ ಒಮ್ಮೆ ಗಂಟಲು ನೋವು ಬಂದಿತ್ತು. ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು  ಮನೆಗೆ ಬಂದ್ರು. ಇವರನ್ನು ಸಂಪರ್ಕಿಸಿ ಇವರ ಹತ್ತಿರದ ಸಂಬಂಧಿಯೊಬ್ಬರು ನಿಮಗೆ ಹಣ ಬರುವಂತೆ ಮಾಡುತ್ತೇವೆಂದು ಇವರ ಕಡೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡರು. ನಿಮಗೆ ಒಂದು ವಿಮೆ ಮಾಡಿಸುತ್ತೇವೆಂದು ಅವರ ವರಿಜಿನಲ್ ಆಧಾರ್ ಕಾರ್ಡ್ ನ್ನು ಪಡೆದು 58 ವರ್ಷದ ವೃದ್ಧರಿಗೆ 1970 ಇಸವಿಯಲ್ಲಿ ಜನಿಸಿದ್ದು ಎಂದು ನಕಲಿ ನಕಲಿ ಆದಾರ್ ಕಾರ್ಡ್​ ಸೃಷ್ಟಿಸಿ ಇನ್ಸುರೆನ್ಸ್ ಮಾಡಿಸಿದ್ದಾರೆ.  

ಡೂಪ್ಲೀಕೇಟ್ ಆಧಾರ್ ಕಾರ್ಡ್ ಮಾಡಿಸಲು  ಹರಿಹರ ತಾಲೂಕಿನ ಗುಳದಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ಶಾಲಾ ದೃಢೀಕರಣ ಪತ್ರ ಮಾಡಿಕೊಂಡಿದ್ದಾರೆ. ಆ ಶಾಲಾ ಧೃಡೀಕರಣದಲ್ಲಿ 1968 ಎಂದು ಜನ್ಮದಿನಾಂಕ ತೋರಿಸಿದ್ದಾರೆ. ನಂತರ  ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿ ಅದರಲ್ಲಿ 1970 ಎಂದು ಹುಟ್ಟಿದ ವರ್ಷ ಎಂದು ತೋರಿಸಿದ್ದಾರೆ.  ಮೂರು ಹೊತ್ತಿನ ಊಟಕ್ಕೂ  ಪರದಾಡುವ ಬೋಗೇಶ್ವರಯ್ಯ ಕುಟುಂಬ  ಸಣ್ಣಪುಟ್ಟ ಅಡುಗೆ ಕಂಟ್ರಾಕ್ಟರ್ ಹಿಡಿದು ಜೀವನ ಸಾಗಿಸುತ್ತದೆ. ಅವರ ಹೆಸರಿಗೆ ನಕಲಿ ಐಟಿ ರಿಟರ್ನಸ್  ರೆಡಿ ಮಾಡಿ   ನಕಲಿ ಆದಾಯ ತೆರಿಗೆ ಮಾಡಿಸಿ ಖಾಸಗಿ ವಿಮಾ ಕಂಪನಿಯಲ್ಲಿ ತಲಾ 50 ಲಕ್ಷದ ಎರಡು ವಿಮಾ ಪಾಲಿಸಿ ಮಾಡಿಸಿದ್ದಾರೆ. ಬೋಗೇಶ್ವರಯ್ಯನ ಹೆಸರಿಗೆ ಒಂದು ಅಕೌಂಟ್ ಮಾಡಿಸಿ ಎಲ್ಲಾ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಬೋಗೇಶ್ವರಯ್ಯನಿಗೆ ಬಂದ ಹಣವನ್ನು ದೋಚಿದ್ದಾರೆ ಖದೀಮರು.

ಮತ್ತೊಂದು ಪ್ರಕರಣದಲ್ಲಿ ಗಡಿಗುಡಾಳ್ ವಟ್ಟೇರ ಮೂಗಪ್ಪ  ಗ್ರಾಮದ ಕ್ಯಾನ್ಸರ್ ಪೇಸೆಂಟ್ ನ ಹೆಸರಿಗೆ ಇನ್ಸುರೆನ್ಸ್ ಮಾಡಿಸಿ ಅವರ ಹೆಸರಿನಲ್ಲಿ 12.50 ಲಕ್ಷ ರೂಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.  ಗಡಿಗುಡಾಳ್ ವಟ್ಟೇರ್ ಮೂಗಪ್ಪನಿಗೆ   ಕ್ಯಾನ್ಸರ್ ಕೊನೆ ಸ್ಟೇಜ್  ಇರುವುದು ಖಚಿತವಾದ ನಂತರ ಅವರ ಮನೆಗೆ ಹೋಗಿ ನಿಮಗೆ ದುಡ್ಡು ಬರುವಂತೆ ಮಾಡುತ್ತೇವೆಂದು ಮೂಲ ದಾಖಲೆಗಳನ್ನು ಪಡೆದಿದ್ದಾರೆ. ನಂತರ ಅವರ ರೋಗದ ಮಾಹಿತಿಯನ್ನು ಮುಚ್ಚಿಟ್ಟು ಇನ್ಸುರೆನ್ಸ್ ಮಾಡಿಸಿದ್ದಾರೆ. ಅವರು ಸಾವನ್ನಪ್ಪಿದ ನಂತರ ಅವರ ಹೆಂಡತಿಯನ್ನು ದಾವಣಗೆರೆ ನಗರದ ಪಾರ್ಕ್ ವೊಂದಕ್ಕೆ ಕರೆಸಿಕೊಂಡು ಅವರ ವಿಳಾಸವನ್ನು ದಾವಣಗೆರೆಗೆ ವರ್ಗಾಯಿಸಿ ಅವರಿಂದ ಖಾಲಿ ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. 

Cyber Crime: ದ‌.ಕ‌ ಡಿಸಿ ಮೊಬೈಲ್ ನಂಬರ್ ಹ್ಯಾಕ್: ಜನತೆ ಮೋಸ ಹೋಗದಂತೆ ಡಿಸಿ ಮನವಿ

ಇನ್ಸುರೆನ್ಸ್ ನಾಮಿನಿ ಮಾಡಿದ್ದ ಗೌರಮ್ಮ ಎಲ್ಲಾ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಆ ನಂತರ ಅವರಿಗೆ ಒಂದು ದಿನ ಕರೆಸಿಕೊಂಡು 1.50 ಲಕ್ಷ ರೂಗಳನ್ನು ನೀಡಿ ಕಳಿಸಿದ್ದಾರೆ. ಕೆಲ ದಿನಗಳ ನಂತರ ಈ ಖದೀಮರ ಟೀಮ್  ಪೊಲೀಸರಿಗೆ ಕೈಗೆ ಮೆಕ್ಕೆಜೋಳ ಖರೀದಿಸಿ ರೈತರಿಗೆ ಹಣ ಕೊಡದೇ ವಂಚಿಸಿದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಆರೋಪದ ಬಗ್ಗೆ ವಿಚಾರಣೆ ನಡೆದಿದೆ. ಈ ಪ್ರಕರಣದಲ್ಲಿ ಇನ್ಸರೆನ್ಸ್ ಹಣವನ್ನು ಬಿಡಿಸಿ ಶಿವಲಿಂಗಯ್ಯನ ಎಂಬ ವ್ಯಾಪಾರಿ  ಅಕೌಂಟ್ ಗೆ ವರ್ಗಾವಣೆ ಮಾಡಿ  ನಂತರ ಅಲ್ಲಿಂದ ತಮಗೆ ಬೇಕಾದವರಿಗೆ ವರ್ಗಾವಣೆ ಮಾಡಿರುವುದು ಬ್ಯಾಂಕಿನ ಸ್ಟೇಟ್ಮೆಂಟ್ ನಲ್ಲಿ ಗೊತ್ತಾಗಿದೆ. ಶಿವಲಿಂಗಯ್ಯನ ಫರ್ಮ್ ಖಾತೆಗೆ ಈ  ಹಣ ವಟ್ಟೇರ್ ಮೂಗಪ್ಪನ ಹೆಸರಿನಲ್ಲಿ ಏಕೆ ವರ್ಗಾವಣೆ ಆಯಿತು ಎಂಬುದು ಇದುವರೆಗು ಸ್ವತಃ ಗೊಬ್ಬರದ ಅಂಗಡಿ ವ್ಯಾಪಾರಿ ಶಿವಲಿಂಗಯ್ಯನಿಗೆ ಗೊತ್ತಿಲ್ಲ. ವಟ್ಟೇರ್ ಮೂಗಪ್ಪನ ಹೆಸರಿನಲ್ಲಿ  11.50 ಲಕ್ಷ ಹಣ ವ್ಯವಹಾರ ಆಗಿರುವುದು ದಾಖಲೆಗಳಲ್ಲಿ ಸಿಕ್ಕಿದೆ. ಈ ಬಗ್ಗೆ ವಟ್ಟೇರ ಮೂಗಪ್ಪನ ಹೆಂಡತಿ ಗೌರಮ್ಮ ಅವರ ಸಹೋದರರು ವಂಚಕರ ಮೇಲೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣ ಸೈಬರ್ ಠಾಣೆಯಿಂದ ಡಿಸಿಆರ್ ಬಿ ಪೊಲೀಸರಿಗೆ ವರ್ಗಾವಣೆ ಆಗಿದ್ದು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ಅಮಾಯಕರಿಗೆ ವಂಚಿಸಿರುವ ಈ ಖದೀಮರ ಗ್ಯಾಂಗ್ ನ್ನು ಈ ಹಿಂದೆ ಡಿಸಿಆರ್ ಬಿ ಪೊಲೀಸರು ಬಂಧಿಸಿ ಬೆಳೆ ಕಳೆದುಕೊಂಡ ರೈತರಿಗೆ 1.62 ಕೋಟಿ ರೂಗಳನ್ನು ವಾಪಸ್ಸು ಕೊಡಿಸಿದ್ದರು. ಈ ವಂಚಕರ ಗ್ಯಾಂಗ್ ರೈತರಿಗಲ್ಲದೇ ಜನಸಾಮಾನ್ಯರಿಗೆ ವಂಚಿಸಿದ್ದು ಡಿಸಿಆರ್ ಬಿ ಪೊಲೀಸರು ಸೂಕ್ತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕಿದೆ.
 

Follow Us:
Download App:
  • android
  • ios