*  ಕಂಪನಿಯ ಹೆಸರು ಬಳಸಿಕೊಂಡು ವ್ಯಾಪಾರಿಗಳಿಗೆ ಮೋಸ*  ಆರೋಪಿಯಿಂದ ಮೊಬೈಲ್‌ ಜಪ್ತಿ *  ಜನರನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದ ರೌಡಿಯ ಬಂಧನ

ಬೆಂಗಳೂರು(ಮಾ.03): ‘ಪೇಟಿಎಂ ಬ್ಯುಸಿನೆಸ್‌ ಆ್ಯಪ್‌’(Paytm Business App) ಅಳವಡಿಸಿಕೊಂಡರೆ ‘ಕ್ಯಾಶ್‌ ಬ್ಯಾಕ್‌’(Cash Back) ಸಿಗುತ್ತದೆ ಎಂದು ನಂಬಿಸಿ ವ್ಯಾಪಾರಿಗಳಿಂದ ಹಣ ಪಡೆದು ಟೋಪಿ ಹಾಕುತ್ತಿದ್ದ ಪೇಟಿಎಂ ಕಂಪನಿಯ ಮಾಜಿ ನೌಕರನೊಬ್ಬ ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಟ್ಟಹಲಸೂರು ನಿವಾಸಿ ದೀಪನ್‌ ಚಕ್ರವರ್ತಿ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) ಮೊಬೈಲ್‌ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಔಷಧಿ ವ್ಯಾಪಾರಿಯೊಬ್ಬರಿಗೆ ಪೇಟಿಎಂ ಬ್ಯುಸಿನೆಸ್‌ ಆ್ಯಪ್‌ ನೆಪದಲ್ಲಿ .19 ಸಾವಿರ ವಸೂಲಿ ಮಾಡಿ ವಂಚಿಸಿದ್ದ(Fraud). ಈ ಬಗ್ಗೆ ತನಿಖೆ ನಡೆಸಿ ಇನ್‌ಸ್ಪೆಕ್ಟರ್‌ ಆರ್‌.ಸಂತೋಷರಾಮ್‌ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹರ್ಷ ಕೊಲೆ ಪ್ರಕರಣದ ತನಿಖೆ ಚುರುಕು, ಮತ್ತಿಬ್ಬರ ಬಂಧನ, ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳು ಪತ್ತೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ದೀಪನ್‌ ಚಕ್ರವರ್ತಿ ಕುಟುಂಬದ ಜತೆ ಬೆಟ್ಟಹಲಸೂರಿನಲ್ಲಿ ನೆಲೆಸಿದ್ದಾನೆ. ಕೆಲವು ತಿಂಗಳು ಕಾಲ ಪೇಟಿಎಂ ಕಂಪನಿಯಲ್ಲಿ ನೌಕರನಾಗಿದ್ದ. ಅಂಗಡಿಗಳಿಗೆ ತೆರಳಿ ಬ್ಯುಸಿನೆಸ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡುತ್ತಿದ್ದ. ಬ್ಯುಸಿನೆಸ್‌ ಅಪ್ಲಿಕೇಷನ್‌ನನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ ಸಿಗುವ ಲಾಭದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ಬಳಿಕ ಮೊಬೈಲ್‌ ನಂಬರ್‌ ಸಂಗ್ರಹಿಸುತ್ತಿದ್ದ ಆರೋಪಿ, ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿ ಪಾಸ್‌ವರ್ಡ್‌ ನೀಡಿ ಬರುತ್ತಿದ್ದ.

ಆದರೆ ಇತ್ತೀಚೆಗೆ ಕೆಲಸ ತೊರೆದಿದ್ದ ಆತ, ಕಂಪನಿಯ ಹೆಸರು ಬಳಸಿಕೊಂಡು ಜನರಿಗೆ ವಂಚಿಸಲು ಆರಂಭಿಸಿದ್ದ. ತಾನು ಪೇಟಿಎಂ ಇನ್‌ಸ್ಟಾಲ್‌ ಮಾಡಿಕೊಟ್ಟಿದ್ದ ಅಂಗಡಿಗಳ ಮೊಬೈಲ್‌ ನಂಬರ್‌ಗೆ ತನ್ನ ಮೊಬೈಲ್‌ ನಂಬರ್‌ನಿಂದ ಕರೆ ಮಾಡಿ ಅಥವಾ ಅಂಗಡಿಗೆ ಹೋಗಿ ಕ್ಯಾಶ್‌ ಬ್ಯಾಕ್‌ ಬರುತ್ತದೆ. ಇದಕ್ಕಾಗಿ ಪೇಟಿಎಂ ಆ್ಯಪ್‌ನಲ್ಲಿ ಮಿನಿಮಮ್‌ ಡಿಪಾಸಿಟ್‌ ಇಡಬೇಕು ಎಂದು ತಿಳಿಸುತ್ತಿದ್ದ. ಈ ಮಾತು ಕೇಳಿ ವ್ಯಾಪಾರಿಗಳು ಠೇವಣಿ ಇಟ್ಟಾಗ ಆರೋಪಿಗೆ ಪಾಸ್‌ವರ್ಡ್‌ ತಿಳಿದಿದ್ದರಿಂದ ಇದನ್ನು ಬಳಸಿ ಆ ದುಡ್ಡನ್ನು ಕದಿಯುತ್ತಿದ್ದ. ಈ ಬಗ್ಗೆ ವಿಚಾರಣೆ ವೇಳೆ ದೀಪನ್‌ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Robbery Case: ಗೋಡೆ ಕೊರೆದು 1 ಕೇಜಿ ಚಿನ್ನ ದೋಚಿ ಪರಾರಿ

19 ಸಾವಿರ ಎಗರಿಸಿದ: 

ಇದೇ ರೀತಿ ಕೆಲ ದಿನಗಳ ಔಷಧಿ ವ್ಯಾಪಾರಿಗೆ ಆರೋಪಿ ಕರೆ ಮಾಡಿ ಪೇಟಿಎಂ ಎಕ್ಸಿಕ್ಯೂಟಿವ್‌ ರಾಜೇಶ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಪೇಟಿಎಂ ಫಾರ್‌ ಬಿಸಿನೆಸ್‌ ಆ್ಯಪನ್ನು ಡೌನ್‌ಲೋಡ್‌ ಮಾಡಿದರೆ ಕ್ಯಾಷ್‌ಬ್ಯಾಕ್‌ ಬರುತ್ತದೆ. ಇದಕ್ಕೆ .20 ಸಾವಿರ ಠೇವಣಿ ಇಡಬೇಕು ಎಂದು ಹೇಳಿ ನಂಬಿಸಿ ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಮಾಹಿತಿಯನ್ನು ಸಂಗ್ರಹಿಸಿದ್ದಾನೆ. ನಂತರ ದೂರುದಾರರ ಎಸ್‌ಬಿಐ ಖಾತೆಯಿಂದ .19 ಸಾವಿರ ವಂಚಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜನರನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದ ರೌಡಿಯ ಬಂಧನ

ಬೆಂಗಳೂರು: ಜನರಿಗೆ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದ ರೌಡಿಯೊಬ್ಬನನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಸಂತೋಷ್‌ ಕುಮಾರ್‌ ಅಲಿಯಾಸ್‌ ನಾಯಿ ಸಂತೋಷ್‌ ಬಂಧಿತನಾಗಿದ್ದು, ಆರೋಪಿಯಿಂದ ಮಾರಕಾಸ್ತ್ರ ಜಪ್ತಿಯಾಗಿದೆ. ಹುಳಿಮಾವು ಸಮೀಪದ ಅರಕೆರೆ ಗ್ರಾಮದ ಉಡುಪಿ ಹೋಟೆಲ್‌ ಮುಂದೆ ಜನರಿಗೆ ಬೆದರಿಕೆ(Threat) ಹಾಕಿ ಸುಲಿಗೆ ಆರೋಪಿ ಸಜ್ಜಾಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ವರ್ಷಗಳಿಂದ ಪಾತಕಲೋಕದಲ್ಲಿ ಸಂತೋಷ್‌ ಸಕ್ರಿಯವಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೋಣನಕುಂಟೆಯಲ್ಲಿ ಆತನ ಮೇಲೆ ರೌಡಿಪಟ್ಟಿತೆರೆಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.