ಮೇ ೧೨ರಂದು ಬೆಂಗಳೂರಿನ ಜಾಮಿಟ್ರಿ ಪಬ್‌ಗೆ ಗನ್ ತೋರಿಸಿ ನುಗ್ಗಿದ ಒಡಿಶಾ ಮೂಲದ ದಿಲೀಪ್ ಕುಮಾರ್‌ನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ತಂಗಿಯ ಮದುವೆಗೆ ಹಣದ ಅಗತ್ಯದಿಂದ ಕಳ್ಳತನಕ್ಕೆ ಯತ್ನಿಸಿದ್ದನು. ಗನ್ ಪತ್ತೆಯಾಗಿಲ್ಲವಾದರೂ, ತನಿಖೆ ಮುಂದುವರೆದಿದೆ.

ಬೆಂಗಳೂರು (ಮೇ 22): ತಂಗಿಯ ಮದುವೆಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಬೆಂಗಳೂರಿನ ಪಬ್‌ಗೆ ಗನ್ ಹಿಡಿದು ನುಗ್ಗಿದ್ದ ಒಡಿಶಾ ಮೂಲದ ಆರೋಪಿ ದಿಲೀಪ್ ಕುಮಾರ್‌ನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೇ 12ರಂದು ಬೆಳಗಿನ ಜಾವ ನಗರದ ಪಾಶ್ಚಾತ್ಯ ಶೈಲಿಯ ಜಾಮಿಟ್ರಿ ಪಬ್‌ಗೆ ಗನ್ ಹಿಡಿದು ನುಗ್ಗಿದ ಶಂಕಿತ ಆರೋಪಿಯನ್ನು ಕೊನೆಗೂ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ದಿಲೀಪ್ ಕುಮಾರ್ ಎಂಬಾತ ಒಡಿಶಾ ಮೂಲದವನು ಆಗಿದ್ದು, ತಂಗಿಯ ಮದುವೆಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಕಳ್ಳತನ ಮಾಡಲು ಈ ದುಸ್ಸಾಹಸಕ್ಕೆ ಕೈಹಾಕಿದ್ದನು ಎಂದು ತಿಳಿದುಬಂದಿದೆ.

ಘಟನೆಯ ವಿವರ: ಮೇ 12ರಂದು ಬೆಳಗ್ಗೆ ಜಾಮಿಟ್ರಿ ಪಬ್ ಬಳಿ ನಿಗೂಢವಾಗಿ ಸಂಚಾರ ಮಾಡಿತ್ತಿದ್ದ ಈ ವ್ಯಕ್ತಿ ಪಬ್‌ ಒಳಗೆ ಗನ್ ಹಿಡಿದುಕೊಂಡು ನುಗ್ಗಿದ್ದಾನೆ. ಈ ಅನುಮಾನಿತ ವ್ಯಕ್ತಿಯ ದೃಶ್ಯ ಕಂಡು ಸೆಕ್ಯುರಿಟಿ ಗಾರ್ಡ್ ಭಯಭೀತನಾಗಿದ್ದನು. ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸುಬ್ರಹ್ಮಣ್ಯನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಆರೋಪಿ ದಿಲೀಪ್ ಆಗಲೇ ಸ್ಥಳದಿಂದ ಪರಾರಿಯಾಗಿದ್ದನು.

ದಿಲೀಪ್ ಕುಮಾರ್ ಈ ಹಿಂದೆ ಜೆಪಿ ನಗರದ ಒಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್ ಬಳಿಯಲ್ಲೇ ಒಂದು ಬಾಡಿಗೆ ಕೋಣೆಯಲ್ಲಿ ವಾಸವಿದ್ದ ಅವನು, ತಂಗಿಯ ಮದುವೆಗಾಗಿ ಹಣ ಹೊಂದಿಸಬೇಕಾದ ಕಾರಣ ಈ ಅಪರಾಧ ಯತ್ನಿಸಿದ್ದನೆಂದು ಪ್ರಾಥಮಿಕ ತನಿಖೆ ತಿಳಿಸಿದೆ. ಇನ್ನು ಪಬ್‌ಗೆ ಗನ್ ಹಿಡಿದು ನುಗ್ಗಿ ಅಲ್ಲಿರುವವರನ್ನು ಬೆದರಿಸಿ ಹಣ ಕದಿಯುವ ಯೋಜನೆ ವಿಫಲವಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದ ಆರೋಪಿಗಾಗಿ ಬಲೆ ಬೀಸಿದ್ದರು. ನಿರಂತರ ಒಂದುವಾರ ಕಾಲ ಶೋಧ ಕಾರ್ಯಚಟುವಟಿಕೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನ ಪತ್ತೆಹಚ್ಚಿ ಬಂಧಿಸಿದ್ದಾರೆ. ಆದಾಗ್ಯೂ, ವಿಚಾರಣೆ ವೇಳೆ ಆರೋಪಿ ಬಳಿ ಯಾವುದೇ ಗನ್ ಪತ್ತೆಯಾಗಿಲ್ಲ. ಆದರೂ, ಗನ್‌ನ ಬಗ್ಗೆ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣ ದಾಖಲೆ: ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಮುಖ ಅಂಶಗಳು:
ಒಡಿಶಾ ಮೂಲದ ದಿಲೀಪ್ ಕುಮಾರ್ ಬಂಧನ
ಪಬ್ ಗೆ ಗನ್ ಹಿಡಿದು ನುಗ್ಗಿದ ಘಟನೆ
ಕಳ್ಳತನ ಯತ್ನ ಹಿನ್ನೆಲೆಯು ಹಣದ ಅಗತ್ಯ
ಗನ್ ಪತ್ತೆಯಾಗದ ಬೆನ್ನಲ್ಲಿಯೂ ತನಿಖೆ ಮುಂದುವರೆಸಿದ ಪೊಲೀಸರು