ಬೈದಿದ್ದಕ್ಕೆ ಅಪ್ಪನ ಮರ್ಮಾಂಗಕ್ಕೆ ಹೊಡೆದು ಕೊಂದ ಮಗ!
- ಬೈದ ಅಪ್ಪನ ಮರ್ಮಾಂಗಕ್ಕೆ ಹೊಡೆದು ಕೊಂದ
- ತೋಟದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಬೈದ ಅಪ್ಪ
- ಕೈಯಲ್ಲಿದ್ದ ಸಲಾಕೆಯಿಂದ ಹೊಡೆದ ಮಗ
- ಖಾಜಿ ಸೊಣ್ಣೇನಹಳ್ಳಿಯಲ್ಲಿ ಘಟನೆ
ಬೆಂಗಳೂರು (ಸೆ.26) : ‘ನೀನು ಉದ್ಧಾರವಾಗುವುದಿಲ್ಲ’ ಎಂದು ಬೈದಿದಕ್ಕೆ ಕೋಪಗೊಂಡ ಮಗ ಕಬ್ಬಿಣದ ಸಲಾಕೆಯಿಂದ ಜನ್ಮ ನೀಡಿದ ತಂದೆಯನ್ನೇ ಹೊಡೆದು ಹತ್ಯೆ ಮಾಡಿರುವ ಅಮಾನುಷ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಜಿ ಸೊಣ್ಣೇನಹಳ್ಳಿ ನಿವಾಸಿ ಚನ್ನಬಸವರಾಜು(56) ಹತ್ಯೆಯಾದ ದುರ್ದೈವಿ. ಘಟನೆ ಸಂಬಂಧ ಈತನ ಮಗ ರಾಕೇಶ್ ಕುಮಾರ್ನನ್ನು (23) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನು ವಿವಾದ; ಚಾಮರಾಜನಗರ ಜಿಪಂ ಉಪಾಧ್ಯಕ್ಷೆ ತಂದೆ ಕೊಲೆ
ಏನಿದು ಘಟನೆ?
ಹತ್ಯೆಯಾದ ಚನ್ನಬಸವರಾಜು, ಪತ್ನಿ ನಳಿನಾಕ್ಷಿ ಹಾಗೂ ಪುತ್ರ ಆರೋಪಿ ರಾಕೇಶ್ಕುಮಾರ್ ಖಾಜಿ ಸೊಣ್ಣೇನಹಳ್ಳಿಯಲ್ಲಿ ನೆಲೆಸಿದ್ದರು. ಇವರಿಗೆ ಮೂರು ಎಕರೆ ಜಮೀನಿದ್ದು, ತಂದೆ ಮತ್ತು ಮಗ ವ್ಯವಸಾಯ ಮಾಡುತ್ತಿದ್ದರು. ರಾತ್ರಿ ವೇಳೆ ರಾಕೇಶ್ ತೋಟದ ಮನೆಯಲ್ಲೇ ಮಲಗುತ್ತಿದ್ದ. ಈ ನಡುವೆ ಸೆ.21ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ಗೆ ಉಪಹಾರ ನೀಡಲು ಬೆಳಗ್ಗೆ 9ರ ಸುಮಾರಿಗೆ ಚನ್ನಬಸವರಾಜು ತೋಟಕ್ಕೆ ಬಂದಿದ್ದಾರೆ.
ಮರ್ಮಾಂಗಕ್ಕೆ ಹಲ್ಲೆ:
ಈ ವೇಳೆ ರಾಕೇಶ್ ತೋಟಕ್ಕೆ ನೀರು ಕಟ್ಟುವಲ್ಲಿ ನಿರತನಾಗಿದ್ದ. ಈ ಸಂದರ್ಭದಲ್ಲಿ ಚನ್ನಬಸವರಾಜು ‘ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ. ಪರೋಡಿಯಾಗಿದ್ದೀಯಾ? ನಿನಗೆ ಎಷ್ಟುಬೈಯ್ದು ಹೇಳಿದರೂ ಇಷ್ಟೇನೆ. ನೀನು ಈ ಜನ್ಮದಲ್ಲಿ ಉದ್ಧಾರವಾಗುವುದಿಲ್ಲ’ ಎಂದು ರಾಕೇಶ್ಗೆ ಬೈದಿದ್ದಾರೆ. ಇದರಿಂದ ಕೋಪಗೊಂಡ ರಾಕೇಶ್ ಕೈಯಲಿದ್ದ ಸಲಾಕೆಯಿಂದ ಏಕಾಏಕಿ ಚನ್ನಬಸವರಾಜು ಅವರ ಮರ್ಮಾಂಗಕ್ಕೆ ಬಲವಾಗಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ, ಮುಖಕ್ಕೆ ಮುಷ್ಠಿಯಿಂದ ಗುದ್ದಿದ್ದಾನೆ. ಈ ವೇಳೆ ಚನ್ನಬಸವರಾಜು ಪ್ರಜ್ಞೆ ತಪ್ಪಿದ್ದಾರೆ.
ತಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಗಾಬರಿಯಾದ ರಾಕೇಶ್, ನೇರ ಮನೆಗೆ ಬಂದು ತಾಯಿ ನಳಿನಾಕ್ಷಿಯನ್ನು ತೋಟಕ್ಕೆ ಕರೆದುಕೊಂಡು ಬಂದಿದ್ದಾನೆ. ಪತಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡು ಏನಾಯಿತು ಎಂದು ಕೇಳಿದಾಗ, ನಡೆದ ಘಟನೆಯನ್ನು ರಾಕೇಶ್ ವಿವರಿಸಿದ್ದಾನೆ. ಕೂಡಲೇ ನಳಿನಾಕ್ಷಿ ಸ್ಥಳೀಯರ ನೆರವು ಪಡೆದು ಚನ್ನಬಸವರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಚನ್ನಬಸವರಾಜು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ನಳಿನಾಕ್ಷಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕಾಡುಗೋಡಿ ಠಾಣೆ ಪೊಲೀಸರು, ಆರೋಪಿ ರಾಕೇಶ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಪೊಲೀಸರಿಂದ ಮರ್ಮಾಂಗಕ್ಕೆ ಹಲ್ಲೆ; ಯುವಕ ಸಾವು:
ಜನರನ್ನು ರಕ್ಷಿಸಬೇಕಾದ ಪೊಲೀಸರು ವ್ಯಕ್ತಿಯೋರ್ವನಿಗೆ ಮನಬಂದಂತೆ ಲಾಠಿಯಿಂದ ಬಲತೊಡೆ ಹಾಗೂ ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಆತ ಕೊನೆಯುಸಿರೆಳೆದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ. ಬಲರಾಮ… (37) ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮದ ನಿವಾಸಿ. ಸೆಪ್ಟೆಂಬರ್ 19ರಂದು ಸೊಂಡೆಕೊಪ್ಪ ಗ್ರಾಮದ ಬಾರ್ ಒಂದರ ಬಳಿ ನಿಂತಿದ್ದ ಬಲರಾಮನಿಗೆ ಮಾದನಾಯಕನಹಳ್ಳಿ ಪೊಲೀಸರು ಮನಬಂದಂತೆ ಥಳಿಸಿದ್ಧಾರೆ. ಇದರಿಂದ ಬಲರಾಮನ ಮರ್ಮಾಂಗಕ್ಕೆ ವಿಪರೀತ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪ್ರೇಮಪಾಶದಲ್ಲಿ ಮೃಗನಾದ ಮಗ, ಗರ್ಲ್ಫ್ರೆಂಡ್ ಧ್ವನಿ ಕೇಳದಾಗ ತಂದೆಯನ್ನೇ ಕೊಂದ!
ಸೆ.19ರ ಬೆಳಗ್ಗೆ ಬಲರಾಮ… ತನ್ನ ತಾಯಿಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರ ಹೋಗಿದ್ದ. ದಾರಿ ಮಧ್ಯೆ ಬಾರೊಂದರ ಬಳಿ ಕುಡಿದ ಮತ್ತಿನಲ್ಲಿ ಜಗಳ ನಡೆಯುತ್ತಿತ್ತು. ಇದನ್ನು ನೋಡುತ್ತಾ ನಿಂತಿದ್ದ ಬಲರಾಮನಿಗೆ ಮಾದನಾಯಕಹಳ್ಳಿ ಠಾಣೆಯ ಎಎಸ್ಐ ವಿಜಯಕುಮಾರ್ ಹಾಗೂ ಜನಾರ್ಧನ್ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಎರಡು ದಿನದ ನಂತರ ಬಲರಾಮ್ನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಮರ್ಮಾಂಗಕ್ಕೆ ಪೆಟ್ಟು ಬಿದ್ದು ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಾಯಿ ಸುಧಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರಂಭದಲ್ಲಿ ಪ್ರಕರಣ ಸ್ವೀಕರಿಸಲು ಪೊಲೀಸರು ಒಪ್ಪಿರಲಿಲ್ಲ. ಗ್ರಾಮಸ್ಥರು ಠಾಣೆಯಲ್ಲಿ ಸಭೆ ನಡೆಸಿ ಒತ್ತಡ ತಂದ ಬಳಿಕ ಪೊಲೀಸರು, ಸರ್ಕಾರಿ ಅಧಿಕಾರಿಯಿಂದ ಹಲ್ಲೆ ಅಡಿ ಪ್ರಕರಣ ದಾಖಲಿಸಿದ್ದಾರೆ.