Bengaluru Crime News: ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ 

ಬೆಂಗಳೂರು (ಆ. 08): ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಈ ಸಂಬಂಧ ಬನಶಂಕರಿ ಪೊಲೀಸರು ಸ್ಥಳಕ್ಕೆ‌ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವಾಗ ಎರಡು ದಿನಗಳ ಹಿಂದೆ ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಂತ ವೈದ್ಯೆಯಾಗಿರುವ ಕೊಡಗಿನ ವಿರಾಜಪೇಟೆ ಮೂಲದ ಶೈಮಾ (39) ಮತ್ತು ಮಗಳು ಆರಾಧನ (10) ಮೃತ ದುರ್ದೈವಿಗಳು.

Add Asianetnews Kannada as a Preferred SourcegooglePreferred

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮನೆಯೊಂದರಲ್ಲಿ‌ ತಾಯಿ-ಮಗಳು ವಾಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಶಂಕೆ ಹಿನ್ನೆಲೆ ಎರಡು ದಿನಗಳ ಹಿಂದೆ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳೆದ 10 ವರ್ಷದ ಹಿಂದೆ ದಂತ ವೈದ್ಯ ತರಬೇತಿ ವೇಳೆ ಕೋಲಾರ ಮೂಲದ ನಾರಾಯಣ್‌ರನ್ನು ಪ್ರೀತಿಸಿ ಎರಡು ಕುಟುಂಬದವರನ್ನು ಒಪ್ಪಿಸಿ ಇಬ್ಬರು ವಿವಾಹವಾಗಿದ್ದರು. ಪತಿ ಸಹ ವೈದ್ಯನಾಗಿದ್ದು ಮನೆಯ ಸಮೀಪದಲ್ಲಿ ಕ್ಲಿನಿಕ್‌ ಇಟ್ಟುಕೊಂಡಿದ್ದರು‌. 

ಮಗುವಿನೊಂದಿಗೆ ನೇಣಿಗೆ ಶರಣಾದ ತಾಯಿ!

ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೈಮಾ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.