ಸಿನಿಮಿಯ ಸ್ಟೈಲ್: ಗುಂಡು ಹಾರಿಸಿ ದರೋಡೆಗೆ ಯತ್ನ
ಅಂಗಡಿ ಮಾಲೀಕನ ಬಳಿ ತೆರಳಿ ಗುಂಡುಹಾರಿಸಿ, ಕ್ಯಾಶ್ ಕೌಂಟರ್ಗೆ ಕೈ ಹಾಕಲು ಯತ್ನಿಸಿದ ಖದೀಮ| ಬೆಳಗಾವಿ ನಗರದ ರವಿವಾರಪೇಟೆಯ ಮಠಗಲ್ಲಿಯಲ್ಲಿ ನಡೆದ ಘಟನೆ| ಮಾಲೀಕ ದರೋಡೆಕೋರನ ಮೇಲೆ ಸಾಬೂನು ಬಾಕ್ಸ್ ಎಸೆದು ದಾಳಿ ತಡೆಯುವ ಪ್ರಯತ್ನ| ಈ ಸಂಬಂಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲು|
ಬೆಳಗಾವಿ(ಜ.25): ಸಿನಿಮಿಯ ಮಾದರಿಯಲ್ಲಿ ಕಿರಾಣಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ಲೂಟಿ ಮಾಡಲು ಯತ್ನಿಸಿದ ಘಟನೆ ನಗರದ ಪ್ರಮುಖ ಮಾರುಕಟ್ಟೆಯಾದ ರವಿವಾರಪೇಟೆಯ ಮಠಗಲ್ಲಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಚೇತನಾ ಮಾರ್ಟ್ ಕಿರಾಣಿ ಅಂಗಡಿಗೆ ರಾತ್ರಿ 9 ಗಂಟೆ ಸುಮಾರಿಗೆ ಬೈಕ್ ಮೇಲೆ ಬಂದ ಇಬ್ಬರಲ್ಲಿ ಒಬ್ಬ ಅಂಗಡಿಯಲ್ಲಿ ಬಿಸ್ಕೆಟ್ ಖರೀದಿಸುವ ನಾಟಕವಾಡಿದರೆ, ಮತ್ತೊಬ್ಬ ನೇರವಾಗಿ ಅಂಗಡಿ ಮಾಲೀಕನ ಬಳಿ ತೆರಳಿ ಗುಂಡುಹಾರಿಸಿ, ಕ್ಯಾಶ್ ಕೌಂಟರ್ಗೆ ಕೈ ಹಾಕಲು ಯತ್ನಿಸಿದ. ಈ ವೇಳೆ ಅಂಗಡಿ ಮಾಲೀಕ ದರೋಡೆಕೋರನ ಮೇಲೆ ಸಾಬೂನು ಬಾಕ್ಸ್ ಎಸೆದು ದಾಳಿ ತಡೆಯುವ ಪ್ರಯತ್ನ ಮಾಡಿದ್ದಾನೆ.
ವಾರದ ಹಿಂದೆಯಷ್ಟೇ ಜೈಲಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್
ತಮ್ಮ ಮೇಲೆ ದಾಳಿಯಾಗಬಹುದು ಎಂಬುದನ್ನು ಮನಗಂಡ ದರೋಡೆಕೋರರು ತಕ್ಷಣ ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ. ದರೋಡೆಕೋರ ಹಾರಿಸಿದ ಗುಂಡು ಗೋಡೆಗೆ ತಗುಲಿದೆ. ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.