* ಮಹಾರಾಷ್ಟ್ರದ ಬಿಡ್‌ ಜಿಲ್ಲೆಯಲ್ಲಿ ಘೋರ ಕೃತ್ಯ* ಅಪ್ರಾಪ್ತೆ ಮೇಲೆ 6 ತಿಂಗಳಲ್ಲಿ 400 ಮಂದಿ ಅತ್ಯಾಚಾರ* ವಿಚಾರಣೆ ವೇಳೆ ಮತ್ತಷ್ಟು ಶಾಕಿಂಗ್ ವಿಚಾರ ಬಯಲು

ಔರಂಗಾಬಾದ್‌(ನ.15): ವಿವಾಹಿತ ಅಪ್ರಾಪ್ತೆ (Minor) ಯುವತಿ ಮೇಲೆ ಕಳೆದ 6 ತಿಂಗಳುಗಳಿಂದ ಪೊಲೀಸರು ಸೇರಿದಂತೆ 400 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ (Gangrape) ಹೇಯ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದಿದೆ. 

Add Asianetnews Kannada as a Preferred SourcegooglePreferred

ಹೌದು ಮಹಾರಾಷ್ಟ್ರದ ಬೀಡ್ (Beed District, Maharashtra) ಜಿಲ್ಲೆಯಲ್ಲಿ ಇಂತಹುದ್ದೊಂದು ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಬರೋಬ್ಬರಿ 400 ಜನ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಇನ್ನು ದೂರು ದಾಖಲಿಸಲು ಬಂದಾಗ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿದ ಲೈಂಗಿಕ ದೌರ್ಜನ್ಯ ಎಸಗಿದವರಲ್ಲಿ ಒಬ್ಬ ಪೊಲೀಸ್ ಕೂಡ ಇರುವುದು ಮತ್ತಷ್ಟು ಭೀಕರವಾಗಿದೆ. ಇನ್ನು ಬೀಡ್ ಪೊಲೀಸ್ ಅಧೀಕ್ಷಕ ರಾಜಾ ರಾಮಸಾಮಿ ಅವರು ಈ ಘೋರ ಅಪರಾಧ ನಡೆದಿದೆ ಎಂಬುವುದನ್ನು ದೃಢಪಡಿಸಿದ್ದಾರೆ ಮತ್ತು ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಪೋಲೀಸರ ಪ್ರಕಾರ, ಸಂತ್ರಸ್ತೆ ಅಪ್ರಾಪ್ತ ವಯಸ್ಕಳು 16 ವರ್ಷ ವಯಸ್ಸಿನವಳಾಗಿದ್ದು, ಬಾಲ್ಯದಲ್ಲಿಯೇ ಮದುವೆಯಾಗಿದೆ. 

ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ : ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

ಸಂತ್ರಸ್ತ ಬಾಲಕಿ ಎರಡು ತಿಂಗಳ ಗರ್ಭಿಣಿ

ಸುದ್ದಿ ಸಂಸ್ಥೆ ಎಎನ್‌ಐ ವರದಿ ಪ್ರಕಾರ, ಸಂತ್ರಸ್ತ ಬಾಲಕಿ ಎರಡು ತಿಂಗಳ ಗರ್ಭಿಣಿ ಎಂದು ಎಸ್‌ಪಿ ರಾಜಾ ರಾಮಸಾಮಿ ತಿಳಿಸಿದ್ದಾರೆ. ಈ ಅತ್ಯಾಚಾರದ ಬಲೆಯಿಂದ ಹೇಗೋ ಹೊರಬಂದ ಬಾಲಕಿ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ, ಬಾಲ್ಯ ವಿವಾಹ ಕಾಯ್ದೆ (Child Marriage Act), ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

8 ತಿಂಗಳ ಹಿಂದೆ ವಿವಾಹ, ವರದಕ್ಷಿಣೆಗಾಗಿ ಕಿರುಕುಳ

ಎಸ್ಪಿ ರಾಜಾ ರಾಮಸಾಮಿ ಈ ಬಗ್ಗೆ ಮತ್ತಷ್ಟು ಮಾಹಿತಿ ನಿಡಿದ್ದು, ಸಂತ್ರಸ್ತೆಯ ತಾಯಿ ಸುಮಾರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಆಕೆಯ ತಂದೆ 8 ತಿಂಗಳ ಹಿಂದೆ ಆಕೆಯನ್ನು ಮದುವೆ ಮಾಡಿಕೊಟ್ಟಿದ್ದಾರೆ. ಆದರೆ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿ ಹಾಗೂ ಅತ್ತೆಯಂದಿರು ಆಕೆಯನ್ನು ಥಳಿಸುತ್ತಿದ್ದರು. ಹಲ್ಲೆಗೊಳಗಾಗುವುದನ್ನು ತಪ್ಪಿಸಲು ಹಾಗೂ ತಂದೆ ಮನೆ ಸೇರಲು ಆಕೆ ಆರು ತಿಂಗಳ ಹಿಂದೆ ತನ್ನ ಅತ್ತೆಯ ಮನೆಯಿಂದ ಓಡಿ ಹೋಗಿದ್ದಳು.

Gang Rape Case:ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ SP ನಾಯಕನಿಗೆ ಜೀವಾವಧಿ ಶಿಕ್ಷೆ!

ತಂದೆ ಮನೆ ಪ್ರವೇಶಿಸಲು ಬಿಡಲಿಲ್ಲ, ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಿದಳು

ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ ಹೇಳಿಕೆಯಲ್ಲಿ, ತಂದೆ ಮನೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ. ಇದಾದ ನಂತರ ಬೀಡ್ ಜಿಲ್ಲೆಯ ಅಂಬಾಜೋಗಿಯ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಆರಂಭಿಸಿದಳು. ಈ ನಡುವೆ ಉದ್ಯೋಗ ನೀಡುವ ಭರವಸೆಯೊಂದಿಗೆ ಇಬ್ಬರು ದುರುಳರು ಅತ್ಯಾಚಾರವೆಸಗಿದ್ದರು. ಇಲ್ಲಿಂದ ಅವಳಿಗೆ ಲೈಂಗಿಕ ಕಿರುಕುಳ ಪ್ರಾರಂಭವಾಯಿತು. 

ಹೀಗೆ ಕಳೆದ ಆರು ತಿಂಗಳ ಅವಧಿಯಲ್ಲಿ ತನ್ನ ಮೇಲೆ 400ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಸಮಿತಿಗೆ ತಿಳಿಸಿದ್ದಾರೆ. ದೂರಿನೊಂದಿಗೆ ಅಂಬಾಜೋಗಿ ಠಾಣೆಗೆ ಹಲವು ಬಾರಿ ಹೋದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಒಬ್ಬ ಪೋಲೀಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೀಗ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಇತರರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.