ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತಳನ್ನೇ ಇಲ್ಲೊಬ್ಬ ಪಾಗಲ್ ಪ್ರೇಮಿ/ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ/ ಮೂಡಿಗೆರೆ ತಾಲೂಕಿನ ಬಿಳಗುಳ ಬಳಿ ಘಟನೆ/ ಸವಿತಾ (40) ಮೃತ ದುರ್ದೈವಿ ನಂದೀಶ್ ಗೌಡ ಎಂಬುವನಿಂದ ಕೃತ್ಯದ ಆರೋಪ/ 3 ದಿನದ ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಸಾವು

ಮೂಡಿಗೆರೆ( ಡಿ. 03) ಪ್ರೀತಿ ನಿರಾಕರಿಸಿದ್ದಕ್ಕೆ ವಿವಾಹಿತಳನ್ನೇ ಇಲ್ಲೊಬ್ಬ ಪಾಗಲ್ ಪ್ರೇಮಿ ಹತ್ಯೆ ಮಾಡಿದ್ದಾನೆ. ತೀವ್ರ ಸುಟ್ಟಗಾಯಗಳಿಂದ ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದು ಪ್ರಕರಣ ದಾಖಲಾಗಿದೆ. 

Add Asianetnews Kannada as a Preferred SourcegooglePreferred

ತಾಲೂಕಿನ ಬಿಳಗುಳ ಗ್ರಾಮದ ವಿಶ್ವನಾಥ ಶೆಟ್ಟಿ ಎಂಬುವರ ಪುತ್ರಿ ಸವಿತಾ(40) ಮೃತಪಟ್ಟವರು. ಡೈವರ್‌ ಕೆಲಸ ಮಾಡುತ್ತಿದ್ದ ನಂದೀಶ್‌ಗೌಡ (28) ಎಂಬಾತ ಸವಿತಾ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಈ ಬಗ್ಗೆ ಸವಿತಾ ಅಣ್ಣ ನಾಗೇಶ್‌ ರೈ ಎಂಬುವವರು ದೂರು ನೀಡಿದ್ದರು.

ಹಗಲಿನಲ್ಲಿಯೇ ಪ್ರೀತಿಸಿದವಳನ್ನೇ ಕಿಡ್ನಾಪ್ ಮಾಡಿದ ಕೋಲಾರದ ಯುವಕ

ಸವಿತಾ ಅವರನ್ನು ಕೊಪ್ಪ ತಾಲೂಕಿನ ವ್ಯಕ್ತಿಯೊಬ್ಬರ ಜತೆ ಮದುವೆ ಮಾಡಿಕೊಡಲಾಗಿತ್ತು. ಪತಿಯೊಂದಿಗೆ ಭಿನ್ನಾಭಿಪ್ರಾಯ ಬಂದು ತವರು ಮನೆ ಬಿಳಗುಳದಲ್ಲಿ ವಾಸವಾಗಿದ್ದರು. ಕೊಲ್ಲಿ ಬೈಲ್‌ ಸಮೀಪದ ಹೋಮ್‌ ಸ್ಟೇ ವೊಂದರಲ್ಲಿಅಡುಗೆ ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಪಕ್ಕದ ಎಸ್ಟೇಟ್‌ ವೊಂದರಲ್ಲಿ ಡೈವರ್‌ ಕೆಲಸ ಮಾಡುತ್ತಿದ್ದ ನಂದೀಶ್‌ಗೌಡ ತನ್ನನ್ನು ಪ್ರೀತಿಸುವಂತೆ ಸವಿತಾ ಅವರಿಗೆ ಪೀಡಿಸುತ್ತಿದ್ದ.

ಕಳೆದ ಭಾನುವಾರ ಸಂಜೆ ಸವಿತಾ ಅವರು ಅಡುಗೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಂಚಿದ್ದಾನೆ. ಘಟನೆ ವೇಳೆ ನಂದೀಶ್‌ಗೌಡನ ಎರಡೂ ಕೈಗಳಿಗೆ ಬೆಂಕಿ ತಗುಲಿದ್ದು, ಗಾಯಗೊಂಡ ಆತ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗ ಚಿಕಿತ್ಸೆ ಫಲಕಾರಿಯಾಗದೆ ಸವಿತಾ ಸಾವನ್ನಪ್ಪಿದ್ದಾರೆ.