ಮರವಂತೆ ಮಹಾರಾಜ ವರಾಹಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಹಿಂದೆ ಕಳ್ಳತನದ ವಿಫಲ ಪ್ರಯತ್ನ ನಡೆದಿತ್ತು. ಕಳ್ಳತನಕ್ಕೆ ಯತ್ನಿಸಿದ ದಂಪತಿ ಬಂಧಿಸಲಾಗಿದೆ.

ಕುಂದಾಪುರ (ಆ.11) : ತಾಲೂಕಿನ ಮರವಂತೆ ಮಹಾರಾಜ ವರಾಹಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಹಿಂದೆ ಕಳ್ಳತನದ ವಿಫಲ ಪ್ರಯತ್ನವನ್ನು ನಡೆದಿತ್ತು . ಈ ಪ್ರಯತ್ನದಲ್ಲಿ ಯಾವುದೇ ಸ್ವತ್ತುಗಳು ಕಳುವಾಗಿಲ್ಲವಾದರೂ ದೇವಸ್ಥಾನದ ಗರ್ಭಗುಡಿಯೊಳಗೆ ಹೋಗಿ ಅಲ್ಲಿನ ಮೂರ್ತಿಗಳನ್ನು ಮುಟ್ಟಿ ಅಪವಿತ್ರ ಗೊಳಿಸಿದ ಬಗ್ಗೆ ಚರ್ಚೆ ಉಂಟಾಗಿತ್ತು. ಇದೀಗ ಕಳುವಿಗೆ ಯತ್ನಿಸಿದವರು ಸಿಕ್ಕಿಬಿದ್ದಿದ್ದಾರೆ. ಕಳವು ಮಾಡಲು ವಿಫಲಯತ್ನ ನಡೆಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿ ಪೈಕಿ ಪತಿ ಜೈಲು ಪಾಲಾದರೆ, ಪತ್ನಿ ಇನ್ನೂ ಅಪ್ರಾಪ್ತೆಯಾದ ಕಾರಣ ರಿಮಾಂಡ್ ಹೋಮ್ ಸೇರಿದ್ದಾಳೆ. ಈ ದೇವಸ್ಥಾನದಲ್ಲಿ ದಿನವಿಡೀ ಭಕ್ತರು ಇರುವುದಿಲ್ಲ.ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿದ್ದು, ಪೂಜಾ ಕೆಲಸ ಮುಗಿಸಿ ಅರ್ಚಕರು ಗರ್ಭಗುಡಿಗೆ ಕದಹಾಕಿ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ಪ್ರಾಯದ ಅವರ ಪತ್ನಿ ದೇವಸ್ಥಾನಕ್ಕೆ ಭಕ್ತರಂತೆ ಬಂದಿದ್ದರು. 

Add Asianetnews Kannada as a Preferred SourcegooglePreferred

40 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿದ ಮೂವರನ್ನು ಬಂಧಿಸಿದ ದೆಹಲಿ ಪೊಲೀಸ್‌

ಹೊರಗಡೆ ಇದ್ದ ದೇವರಿಗೆ ಕೈಮುಗಿದು ದೇವಸ್ಥಾನ ಪ್ರವೇಶಿಸಿ ಕಾಣಿಕೆ ಡಬ್ಬಿ ಒಡೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದರು. ನಂತರ ಗರ್ಭಗುಡಿ ಪ್ರವೇಶಿಸಿ, ಬರಿಗೈಯಲ್ಲಿ ಮರಳಿದ್ದು, ಕಳ್ಳ ದಂಪತಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೊದಲು ಇದು ಯುವಕನ ಕೃತ್ಯ ಎಂದು ನಂಬಲಾಗಿತ್ತು.ಬಳಿಕ ಸಿಸಿ ಕ್ಯಾಮೆರಾ ಜಾಲಾಡಿದಾಗ ,ಯುವಕನ ಜೊತೆ ಅಪ್ರಾಪ್ತ ಪತ್ನಿಯೂ ಭಾಗಿಯಾಗಿರುವುದು ಕಂಡುಬಂದಿತ್ತು. ದಂಪತಿ ದೇವಸ್ಥಾನಕ್ಕೆ ಕನ್ನ ಹಾಕಿ ಖಾಲಿ ಕೈಯಲ್ಲಿ ಹಿಂದಿರುಗಿದರೂ, ಕಳ್ಳರು ಗರ್ಭಗುಡಿಗೆ ನುಗ್ಗಿದ್ದರಿಂದ ಪ್ರಾಯಶ್ಚಿತ್ತಕ್ಕೆ 50-60 ಸಾವಿರ ರೂ. ಖರ್ಚು ಮಾಡಬೇಕಿದೆ. ಕಳ್ಳರು ಗರ್ಭಗುಡಿಗೆ ನುಗ್ಗಿದ್ದರಿಂದ ಶಾಂತಿ, ಶುದ್ಧಿ ವಾಸ್ತು, ಹೋಮ, ಚೋರ ಶಾಂತಿ ಮೂಲಕ ಶುದ್ದೀಕರಿಸಬೇಕಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.

-ಕಮಿಷನರ್ ಕಚೇರಿ ಮುಂದೇನೆ ಕಾರ್‌ನಲ್ಲಿದ್ದ ಹಣ ಎಗರಿಸಿದ ಖದೀಮರು!

ದೇವರನ್ನೂ ಬಿಡದ ಕಳ್ಳರು; ಭಕ್ತರು ಬೇಸರ

ಇತ್ತೀಚೆಗೆ ದೇವಸ್ಥಾನಗಳೇ ಕಳ್ಳರ ಟಾರ್ಗೆಟ್ ಆಗುತ್ತಿದ್ದು, ದೇವಸ್ಥಾನದ ಕಾಣಿಕೆ, ದೇವರ ಮೂರ್ತಿ ಮೇಲಿರುವ ಆಭರಣ ಕದಿಯಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮರವಂತೆ ದೇವಸ್ಥಾನದೊಳಗೆ ಭಕ್ತರ ಸೋಗಿನಲ್ಲಿ ಕೈಮುಗಿದು ನುಗ್ಗಿ, ಕಳ್ಳತನ ಮಾಡಲು ಯತ್ನಿಸಿದ ಖತರ್ನಾಕ ದಂಪತಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ನೋಡಿ ಭಕ್ತರು ಕುಪಿತಗೊಂಡಿದ್ದಾರೆ. ಅಷ್ಟೇ ಬೇಸರ ವ್ಯಕ್ತಪಡಿಸಿದ್ದಾರೆ.