ರಾಯಚೂರಿನಲ್ಲಿ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಮಂತ್ರಾಲಯ ಮಠದ ವಿದ್ಯಾರ್ಥಿ ಜಯಸಿಂಹ (23) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜನವರಿ 22 ರಂದು ಹಂಪಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ಈ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಹಲವರು ಗಾಯಗೊಂಡಿದ್ದರು.
ರಾಯಚೂರು (ಫೆ.13): ಕಳೆದ ತಿಂಗಳು(ಜ.22) ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಮಂತ್ರಾಲಯ ಮಠದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜಯಸಿಂಹ(23) ಮೃತ ದುರ್ದೈವಿ. ಮಂತ್ರಾಲಯ ರಾಯರ ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದ ಮೃತರು. ಅಪಘಾತದಲ್ಲಿ ತಲೆ, ಬೆನ್ನು, ಶಾಸ್ವಕೋಶ ಸೇರಿ ದೇಹದ ಹಲವೆಡೆ ತೀವ್ರ ಗಾಯಗಳಾಗಿದ್ದವು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ. ಆದರೆ ಇಂದು ಬೆಳಗಿನ ಜಾವ ಕಾರ್ಡಿಯಾಕ್ ಅರೆಸ್ಟ್ನಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಸಿಂಧನೂರು ಬಳಿ ಭೀಕರ ಅಪಘಾತ, ಮಂತ್ರಾಲಯ ಮಠದ ಚಾಲಕ ಸೇರಿ ನಾಲ್ವರು ದುರ್ಮರಣ!
ಕಳೆದ ಜನೆವರಿ 22 ರಂದು ಮಂತ್ರಾಲಯದಿಂದ ಹಂಪಿಯ ನರಹರಿತೀರ್ಥರ ಆರಾಧನೆಗೆ ತೆರಳುತ್ತಿದ್ದ ವಾಹನ ಮಾರ್ಗ ಮಧ್ಯೆ ಎಕ್ಸೆಲ್ ಕಟ್ ಆಗಿ ದುರಂತ ಸಂಭವಿಸಿತ್ತು. ದುರ್ಘಟನೆಯಲ್ಲಿ ಮಂತ್ರಾಲಯ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು, ವಾಹನ ಚಾಲಕ ಸೇರಿ ನಾಲ್ವರು ದುರ್ಮರಣಕ್ಕೀಡಾಗಿದ್ದರು. ಹತ್ತು ಜನರು ಗಾಯಗೊಂಡಿದ್ದರು. ಅವರ ಪೈಕಿ ಮೃತ ಜಯಸಿಂಹ ತೀವ್ರ ಗಾಯಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಕಾರ್ಡಿಯಾಕ್ ಅರೆಸ್ಟ್ನಿಂದ ಮೃತರಾಗಿದ್ದಾರೆ.
