ಮನ್ಮುಲ್ನಲ್ಲಿ ಹಾಲಿಗೆ ನೀರು ಜತೆ ರಾಜಕೀಯ: CID ತನಿಖೆಗೆ ಆದೇಶಿಸಿದ ಸರ್ಕಾರ
* ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಗುತ್ತಿಗೆದಾರರು ಹಾಲಿಗೆ ನೀರು ಮಿಶ್ರಣ ಪ್ರಕರಣ
* ಮನ್ಮುಲ್ ಹಾಲಿಗೆ ನೀರು ಬೆರೆಸಿದ ಪ್ರಕರಣ CID ಹೆಗಲಿಗೆ
* CIDಗೆ ವಹಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು/ಮಂಡ್ಯ, (ಜೂನ್,30): ಮನ್ಮುಲ್ನಲ್ಲಿ ಹಾಲಿಗೆ ನೀರು ಹಾಕಿದ ಪ್ರಕರಣದ ತನಿಖೆಯನ್ನ CIDಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕರಣ ಗಂಭೀರ ಹಾಗೂ ಸೂಕ್ಷ್ಮವಾಗಿರುವುದರಿಂದ ಪಾರದರ್ಶಕತೆ ಹಾಗೂ ತೀವ್ರತರ ತನಿಖೆ ನಡೆಸಬೇಕಾಗಿರುವುದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಬಿ.ಎಸ್.ನಾಗರತ್ಮಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಹಗರಣ ತನಿಖೆಗೆ ಗೌಡರಿಂದ ಅಡ್ಡಿ?: ಆಡಿಯೋ ವೈರಲ್
ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಗುತ್ತಿಗೆದಾರರು ಹಾಲಿಗೆ ನೀರು ಹಾಕಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 406, 420 ಅನ್ವಯ ಎಫ್ಐಆರ್ ದಾಖಲಾಗಿತ್ತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿಐಡಿ ತನಿಖೆಗೆ ವಹಿಸುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲು ಯಡಿಯೂರಪ್ಪ ಹಿಂದೇಟು ಹಾಕಿದ್ದರು.
'ಮನ್ಮುಲ್ ಹಗರಣ ಸಂಬಂಧ ಯಾವ ತನಿಖೆಯಾದರೂ ಮಾಡಿಕೊಳ್ಳಲಿ'
ಇದಕ್ಕೆ ಆಕ್ರೋಶಗೊಂಡಿದ್ದ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ 'ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕಾಲ್ ಮಾಡಿದ್ದಕ್ಕೆ ಸಿಐಡಿ ತನಿಖೆಗೆ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಚಲುವರಾಯಸ್ವಾಮಿ ಅವರ ಈ ಆರೋಪ ಮಂಡ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಕ್ರೋಶಕ್ಕೂ ಇದು ಕಾರಣವಾಗಿತ್ತು.