Latest Kannada News: ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಜನರನ್ನು ಥಳಿಸಿದ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ

ಪ್ರಯಾಗರಾಜ್ (ಜೂ. 28): ‘ಜೈ ಶ್ರೀ ರಾಮ್’ಘೋಷಣೆಗಳನ್ನು (Jai Shri Ram) ಕೂಗಿದ್ದಕ್ಕಾಗಿ ಜನರನ್ನು ಥಳಿಸಿದ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ, ಇರ್ಫಾನ್ ಮತ್ತು ಅವರ ಕಡೆಯ ಕೆಲವರು, ಧಾರ್ಮಿಕ ಘೋಷಣೆ 'ಜೈ ಶ್ರೀ ರಾಮ್' ಎಂದು ಹೇಳುತ್ತಾ ಮನೆಗೆ ಹಿಂದಿರುಗುತಿದ್ದ ಜನರನ್ನು ನಿಂದಿಸಿದ್ದರು. ಈ ವೇಳೆ ಇನ್ನೊಂದು ಕಡೆಯಿಂದ ಆಕ್ಷೇಪಣೆಯ ನಂತರ, ಎರಡೂ ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದು ಆರೋಪಿಗಳ ಕಡೆಯವರು ಲಾಠಿ, ದೇಶಿ ನಿರ್ಮಿತ ಬಂದೂಕುಗಳು, ಕಬ್ಬಿಣದ ರಾಡ್‌ಗಳು ಮತ್ತು ಇತರ ಆಯುಧಗಳಿಂದ ಘೋಷಣೆ ಕೂಗಿದವರನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಇರ್ಫಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 147, 148, 504, 307, 354 ಖಾ ಮತ್ತು 324 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾಮೀನು ಅರ್ಜಿಯ ಸಂದರ್ಭದಲ್ಲಿ ಇರ್ಫಾನ್ ನಿರಪರಾಧಿ ಎಂದು ಹೇಳಿಕೊಂಡಿದ್ದು ಈ ಪ್ರಕರಣದಲ್ಲಿ ತನ್ನನ್ನು ಬಂಧಿಸಲಾಗುತ್ತಿದೆ ಮತ್ತು ತಾನು ಯಾರನ್ನೂ ಹೊಡೆದಿಲ್ಲ ಎಂದು ಹೇಳಿದ್ದಾರೆ. 

ತಮ್ಮ ಕಡೆಯ ಸದಸ್ಯರಿಗೂ ಗಾಯಗಳಾಗಿವೆ, ಆದ್ದರಿಂದ ಪ್ರಕರಣವು ಏಕಪಕ್ಷೀಯವಾಗಿದೆ ಮತ್ತು ನಮ್ಮ ಕಡೆಯವರು ಮಾತ್ರ ಹೊಡೆದಿದ್ದಾರೆ ಎಂಬುದು ಸುಳ್ಳು, ಎರಡೂ ಕಡೆಯಿಂದ ದಾಳಿ-ಪ್ರತಿ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿಯ ಮೇಲೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಇದನ್ನೂ ಓದಿ: ಬೆಳಗಾವಿ: ಸಾಕ್ಷ್ಯಾಧಾರ ಕೊರತೆ: ತ್ರಿಪಲ್ ಮರ್ಡರ್ ಕೇಸ್ ಆರೋಪಿ ಖುಲಾಸೆ

ಈ ವರ್ಷದ ಮಾರ್ಚ್‌ನಿಂದ ಜೈಲಿನಲ್ಲಿದ್ದೇನೆ ಮತ್ತು ಜಾಮೀನು ನೀಡದಿದ್ದರೆ ತನ್ನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮುಂದಿನ ದಿನಗಳಲ್ಲಿ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲ ಆದ್ದರಿಂದ ತನ್ನನ್ನು ಬಿಡುಗಡೆ ಮಾಡಬೇಕು ಎಂದು ಆರೋಪಿ ಆಗ್ರಹಿಸಿದ್ದಾರೆ. ಅಲ್ಲದೇ ಪ್ರಕರಣದ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು, ಇರ್ಫಾನ್‌ಗೂ ಜಾಮೀನು ಮಂಜೂರಾಗಬೇಕು ಎಂದು ಆಗ್ರಹಿಸಲಾಗಿತ್ತು. ಇದಾದ ಬಳಿಕ ಇಬ್ಬರು ಶ್ಯೂರಿಟಿಗಳೊಂದಿಗೆ ಜಾಮೀನಿನ ಮೇಲೆ ಇರ್ಫಾನ್‌ನನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.