ಬಹುಶಃ ಸ್ನೇಹದ ಬಂಧ ಅಂದ್ರೆ ಇದೇ ಏನೋ.. ಕ್ಯಾನ್ಸರ್‌ನಿಂದಾಗಿ ಮೃತಪಟ್ಟ ಗೆಳೆಯ ಚಿತೆಯ ಮುಂದೆ ಕಣ್ಣೀರಿಡುತ್ತಿದ್ದ ಬಾಲ್ಯದ ಗೆಳೆಯ, ಜನ ಎಲ್ಲಾ ಮರೆಯಾಗುತ್ತಿದ್ದಂತೆ ತಾನೂ ಕೂಡ ಚಿತೆಗೆ ಹಾರಿ ಪ್ರಾಣಬಿಟ್ಟಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.

ನವದೆಹಲಿ (ಮೇ.28): ಖುಷಿಯಲ್ಲಿ ಮಾತ್ರವಲ್ಲ ದುಃಖದಲ್ಲೂ ಜೊತೆಗಿರೋದು ಸ್ನೇಹ, ಅಂಥಾ ಸ್ನೇಹಿತನೊಬ್ಬ ಸಿಗಲಿ ಅನ್ನೋದು ಪ್ರತಿಯೊಬ್ಬರ ಆಸೆ ಕೂಡ ಹೌದು. ಉತ್ತರ ಪ್ರದೇಶದಲ್ಲಿ ಸ್ನೇಹಿತನ ಸಾವಿನಿಂದ ನೊಂದು ಆತನ ಚಿತೆಗೆ ಹಾರಿ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿದ್ದಾನೆ. ಚಿತೆಗೆ ಹಾರಿದ್ದ ವ್ಯಕ್ತಿಯನ್ನು ಸ್ಥಳೀಯ ಜನರು ರಕ್ಷಣೆ ಮಾಡಿದ್ದರಾದರೂ, ಶೇ. 90ರಷ್ಟು ಸುಟ್ಟಗಾಯಗಳಾಗಿದ್ದ ಕಾರಣಕ್ಕೆ ಆತ ಶನಿವಾರ ಮೃತ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಧಿಯಾ ನದಿಯಾ ಗ್ರಾಮದ 40 ವರ್ಷದ ಅಶೋಕ್‌ ಕುಮಾರ್‌ ಶನಿವಾರ ಸಾವು ಕಂಡಿದ್ದರು. ಗ್ರಾಮದಲ್ಲಿಯೇ ಈತ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅಂತ್ಯಸಂಸ್ಕಾರದಲ್ಲಿ ಹಾಜರಾಗಿದ್ದ ಅವರ ಬಾಲ್ಯದ ಗೆಳೆಯ 42 ವರ್ಷದ ಗೌರವ್‌ ಆನಂದ್‌ ಸಿಂಗ್‌, ಜನರೆಲ್ಲಾ ತೆರಳಿದ ಬಳಿಕ ಅದೇ ಚಿತೆಗೆ ಹಾರಿದ್ದಾರೆ. ಇದನ್ನು ಜನರು ಗಮನಿಸಿ ಆತನನ್ನು ಚಿತೆಯಿಂದ ಹೊರತೆಗೆಯುವ ವೇಳೆ ಆತನಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.

ಫಿರೋಜಾಬಾದ್‌ನ ನಾಗ್ಲಾ ಖಾಂಗರ್ ಪೊಲೀಸ್ ಠಾಣೆಯ ಉಸ್ತುವಾರಿ ಮಹೇಶ್ ಸಿಂಗ್ ಈ ಕುರಿತಾಗಿ ಮಾಹಿತಿ ನೀಡಿದ್ದು, 'ಮೃತ ಅಶೋಕ್‌ನ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಚಿತೆಗೆ ಬೆಂಕಿ ಇರಿಸಲಾಗಿತ್ತು. ಇದರ ಬೆನ್ನಲ್ಲಿಯೇ ಸ್ಥಳೀಯ ನಿವಾಸಿಗಳು ಹಾಗೂ ಅವರ ಕುಟುಂಬ ಸದಸ್ಯರು ಚಿತಾಗಾರದಿಂದ ಹೊರಬರಲು ಆರಂಭ ಮಾಡಿದ್ದರು. ಆದರೆ, ಗೌರವ್‌ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದ. ಕಣ್ಣೀರಿಡುತ್ತಲೇ ಇದ್ದ ಗೌರವ್‌ ಕೆಲವೇ ಸಮಯದಲ್ಲಿ ಚಿತೆಗೆ ಹಾರಿದ್ದಾನೆ ಎಂದು ಸ್ಮಶಾನದಲ್ಲಿದ್ದವರು ಹೇಳಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಇತರರು ಧಾವಿಸಿದ್ದಾರೆ. ಉರಿಯುವ ಚಿತೆಯಿಂದ ಗೌರವ್‌ನನ್ನು ಹೊರತೆಗೆಯುವ ವೇಳೆಗೆ ಆತನಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದವು' ಎಂದು ಹೇಳಿದ್ದಾರೆ.

ಗೌರವ್‌ನ ಹಿರಿಯಣ್ಣ ಕಮಲ್‌ ಸಿಂಗ್‌ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಶೋಕ್‌ ಹಾಗೂ ಗೌರವ್‌ ಇಬ್ಬರೂ ಬಾಲ್ಯದ ಸ್ನೇಹಿತರು. ಜೊತೆಯಾಗಿಯೇ ಬೆಳೆದು, ಜೊತೆಯಾಗಿಯೇ ಓದಿದ್ದರು. ಇಬ್ಬರೂ ಒಂದು ಶಾಲೆಯಲ್ಲಿ ಓದಿದ್ದಲ್ಲದೆ, ಒಂದೇ ದಿನ ಇಬ್ಬರ ಮದುವೆ ಕೂಡ ಅಗಿತ್ತು. ಅಶೋಕ್‌ ಡ್ರಮ್‌ ಬಾರಿಸುವುದರಲ್ಲಿ ಪರಿಣಿತರಾಗಿದ್ದರೆ, ಗೌರವ್‌ ಮಂಜೀರಾ (ತಾಳ) ಬಾರಿಸುವ ಮೂಲಕ ಅವರಿಗೆ ಸಾಥ್‌ ನೀಡುತ್ತಿದ್ದರು. ಗ್ರಾಮದಲ್ಲಿ ಯಾವುದೇ ಮದುವೆ, ಸಾಮಾಜಿಕ ಕಾರ್ಯಕ್ರಮಗಳಿದ್ದರೂ ಸಂಗೀತ ನುಡಿಸಲು ಇವರಿಬ್ಬರನ್ನು ಕರೆಯಲಾಗುತ್ತಿತ್ತು' ಎಂದಿದ್ದಾರೆ.

Add Asianetnews Kannada as a Preferred SourcegooglePreferred

'ಪ್ರತಿ ದಿನ ಎಣ್ಣೆ ಕುಡ್ಕೊಂಡ್‌ ಬರ್ತಿರಾ..' ಅಂತಾ ಪತ್ನಿ ಹೇಳಿದ್ದೇ ತಪ್ಪಾಯ್ತು, ಟಾಯ್ಲೆಟ್‌ ಕ್ಲೀನರ್‌ ಕುಡಿದು ಪತಿ ಸಾವು!

ಆರು ತಿಂಗಳ ಹಿಂದೆ ಅಶೋಕ್‌ಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು. ವಿಪರೀತವಾಗಿ ದುರ್ಬಲನಾಗಿದ್ದ ಅಶೋಕ್‌ಗೆ ಗೌರವ್‌ ಜೊತೆ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಹುಟ್ಟೂರಿನಲ್ಲಿ ಅಶೋಕ್‌ ನಿಧನರಾಗಿದ್ದರು. ಪಕ್ಕದ ಗಡಿಯಾ ಪಂಚವಟಿ ಗ್ರಾಮದಲ್ಲಿ ನೆಲೆಸಿರುವ ಗೌರವ್, ಕೂಡಲೇ ತನ್ನ ಸ್ನೇಹಿತನ ಸ್ಥಳಕ್ಕೆ ಧಾವಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲುಗಳಿಂದ ಜಜ್ಜಿ 60 ವರ್ಷದ ಮಹಿಳೆಯ ಕೊಂದು ಆಕೆಯ ಮುಖದ ಮಾಂಸ ತಿಂದ ವ್ಯಕ್ತಿ!

ಗಂಭೀರ ಸುಟ್ಟ ಗಾಯವಾಗಿದ್ದ ಕಾರಣಕ್ಕೆ ಗೌರವ್‌ನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಲಾಗಿತ್ತು. ಆದರೆ, ಆಗ್ರಾಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಸಾವು ಕಂಡಿದ್ದಾರೆ. ಶನಿವಾರ ಸಂಜೆ ಗಡಿಯಾ ಪಂಚವಟಿಯಲ್ಲಿ ಗೌರವ್‌ನ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕಮಲ್‌ ಸಿಂಗ್‌ ತಿಳಿಸಿದ್ದಾರೆ.