Bengaluru Crime News: ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾದ ನವವಿವಾಹಿತೆಯನ್ನು ಭಗ್ನ ಪ್ರೇಮಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ  ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ

ವರದಿ- ರವಿಕುಮಾರ್ ವಿ

Add Asianetnews Kannada as a Preferred SourcegooglePreferred

ಬೆಂಗಳೂರು ಗ್ರಾಮಾಂತರ (ಸೆ. 16):  ಪ್ರೀತಿ ನಿರಾಕರಿಸಿ ಬೇರೊಬ್ಬನ ಜತೆ ವಿವಾಹವಾದ ನವವಿವಾಹಿತೆಯನ್ನು ಭಗ್ನ ಪ್ರೇಮಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೇವನಹಳ್ಳಿ (Devanahalli) ತಾಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ. ಸೌಮ್ಯ (23) ಕೊಲೆಯಾದ ನವವಿವಾಹಿತೆ. ನಿನ್ನೆ ರಾತ್ರಿ ಪಾಗಲ್ ಪ್ರೇಮಿ ಸುಬ್ರಹ್ಮಣ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಮನೆಯಲ್ಲಿದ್ದ ಸೌಮ್ಯ ಪೋಷಕರು ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯರು ಬಂದು ನೋಡಿದಾಗ ಸೌಮ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. 

ಕೂಡಲೇ ಆಕೆಯನ್ನು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ದೇವನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೂಡ ಹೆಚ್ಚಿನ ಚಿಕಿತ್ಸೆಗೆಂದು ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಸೌಮ್ಯ ಸಾವನ್ನಪಿದ್ದಾಳೆ. 

ಇನ್ನೂ ಕೊಲೆ ಮಾಡಿ ಪರಾರಿಯಾಗಿದ್ದ ಸುಬ್ರಹ್ಮಣ್ಯ ನನ್ನು ಪೊಲೀಸರು ಹುಡುಕಲು ಯತ್ನಿಸಿದ್ದು, ಈತನು ಕೂಡ ಸೌಮ್ಯಳನ್ನು ಕೊಲೆ ಮಾಡಿದ ಬಳಿಕ ಅಲ್ಲಿಂದ ಪರಾರಿಯಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತನು ಕೂಡ ಪ್ರಸ್ತುತ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ವಿಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಮದುವೆಯಾಗಿ 15 ದಿನ: ಸೌಮ್ಯ ಬೆಂಗಳೂರಿನ ಮತ್ತೊಬ್ಬ ಯುವಕನ ಜೊತೆ ಮದುವೆಯಾಗಿ 15 ಮಾತ್ರ ಆಗಿತ್ತು. ನಿನ್ನೆಯಷ್ಟೆ ಸೌಮ್ಯ ಆವತಿ ಗ್ರಾಮಕ್ಕೆ ಬಂದಿದ್ದಳು, ಸೌಮ್ಯ ಪತಿಯೇ ಬಂದು ಬಿಟ್ಟುಹೋಗಿದ್ದ. ಆದ್ರೆ ಈ ವಿಷಯವನ್ನು ತಿಳಿದುಕೊಂಡ ಸುಬ್ರಹ್ಮಣಿ ನಿನ್ನೆ ರಾತ್ರಿ ಮನೆಯಲ್ಲಿ ಸೌಮ್ಯ ಇದ್ದಿದ್ದನ್ನು ನೋಡಿ ಆಕೆಯ ಮೇಲೆ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. 

ಕಾಫಿ -ಡೇ ಯಲ್ಲಿ ಇಬ್ಬರು ಒಟ್ಟಿಗೆ ಕೆಲಸ: ಹೌದು ಸೌಮ್ಯ ಹಾಗೂ ಸುಬ್ರಮಣಿ ಇಬ್ಬರು ಕೂಡ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ನಾಗವಾರದ ಕಾಫಿ ಡೇ ಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಇಬ್ಬರು ಒಳ್ಳೆಯ ಸ್ನೇಹಿತರು ಅಂತಲೇ ಆವತಿ ಗ್ರಾಮದ ಜನರು ಅಂದುಕೊಂಡಿದ್ದರು, ಆದ್ರೆ ಸ್ನೇಹ ಪ್ರೀತಿಗೆ ತಿರುಗಿದೆ ಅಂತಾ ನಾವು ಅಂದುಕೊಂಡಿರಲಿಲ್ಲ ಅಂತಾರೆ ಸ್ಥಳೀಯರು

ಸೌಮ್ಯ ಕೊಲೆ ಮಾಡಿ ಸುಬ್ರಹ್ಮಣಿ ಆತ್ಮಹತ್ಯೆ ಯತ್ನ: ಸೌಮ್ಯ ಆವತಿ ಗ್ರಾಮಕ್ಕೆ ಬಂದಿದ್ದ ಖಚಿತ ಮಾಹಿತಿ ಮೆರೆಗೆ ಸೌಮ್ಯ ಮನೆಗೆ ಆಗಮಿಸಿದ್ದ ಸುಬ್ರಮಣಿ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿ ಮುದ್ದನಾಯಕನಹಳ್ಳಿ ಸುತ್ತಮುತ್ತಲ ಬಂಡೆಗಳ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಈ ಎಲ್ಲಾ ವಿಚಾರವನ್ನು ಸುಬ್ರಮಣಿ ಅಣ್ಣನಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಪೋಷಕರು ಬಂದು ಸುಬ್ರಮಣಿಯನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.