ಲಕ್ನೋದಲ್ಲಿ ಮೂರು ವರ್ಷದ ಬಾಲಕಿಯನ್ನು ಅಪಹರಿಸಿ ಬಲತ್ಕಾರವೆಸಗಿದ ಆರೋಪಿ ದೀಪಕ್ ವರ್ಮಾ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. 

ಲಕ್ನೋ: ಮೂರು ವರ್ಷದ ಕಂದನನ್ನು ಅಪಹರಿಸಿ ಬಲತ್ಕಾರವೆಸಗಿದ ಆರೋಪಿಯನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ದೀಪಕ್ ವರ್ಮಾ ಎಂದು ಗುರುತಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ನಂತರ ಮಗುವಿನ ಜೊತೆ ಇದ್ದ ಆಓಪಿ ಈತನೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.

Add Asianetnews Kannada as a Preferred SourcegooglePreferred

ಆರೋಪಿ ದೀಪಕ್ ವರ್ಮಾ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವರ್ಷದ ಮಗುವಿನ ಮೇಲೆ ಬಲಾತ್ಕಾರ ಪ್ರಕರಣ ವರದಿಯಾಗುತ್ತಿದ್ದಂತೆ ಪೊಲೀಸರು ಆರೋಪಿಯ ಪತ್ತೆಗಾಗಿ 5 ಪೊಲೀಸ್‌ ತಂಡಗಳನ್ನು ರಚಿಸಿದ್ದರು. ಜೊತೆಗೆ ಆತ ಪತ್ತೆ ಮಾಡಿದವರಿಗೆ 1 ಲಕ್ಷ ರೂ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ ವಲಯ) ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಮೊದಲಿಗೆ ತನಿಖೆಗಿಳಿದ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದರು. ಜೊತೆಗೆ ಆತನ ಸ್ಕೂಟರ್‌ನ ನೋಂದಣಿ ವಿವರಗಳನ್ನು ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯ ಸುಳಿವು ಸಿಕ್ಕ ಹಿನ್ನೆಲೆ ಇಂದು ಮುಂಜಾನೆ ಲಕ್ನೋದ ಕಂಟೋನ್ಮೆಂಟ್‌ನ ದೇವಿ ಖೇಡಾ ಬಳಿ ಪೊಲೀಸರು ಆರೋಪಿ ದೀಪಕ್‌ ವರ್ಮಾನನ್ನು ಬಂಧಿಸಲು ಹೋಗಿದ್ದಾರೆದ್ದಾರೆ. ಜೊತೆಗೆ ಶರಣಾಗುವಂತೆ ಕೇಳಿದ್ದಾರೆ. ಆದರೆ ಆತ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ, ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಅವನಿಗೆ ಗಾಯಗಳಾಗಿವೆ ಎಂದು ಆಯುಕ್ತ ಅಶಿಶ್‌ ಶ್ರೀವಾಸ್ತವ ಹೇಳಿದರು.

ಘಟನೆಯ ಹಿನ್ನೆಲೆ

ಜೂನ್ 5 ರ ಬೆಳಗ್ಗೆ ಮಗುವನ್ನು ಅಪಹರಿಸಿ, ಬಲತ್ಕಾರ ಮಾಡಿ, ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಮೆಟ್ರೋ ಸೇತುವೆಯ ಕೆಳಗೆ ಬಿಟ್ಟು ಹೋಗಲಾಗಿತ್ತು. ಲಕ್ನೋದ ಅಲಂಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ಸಂತ್ರಸ್ತ ಮಗು ತನ್ನ ಪೋಷಕರೊಂದಿಗೆ ಚಂದಾನಗರ ಮೆಟ್ರೋ ನಿಲ್ದಾಣದ ಬಳಿ ವಾಸಿಸುತ್ತಿದ್ದಳು. ಆದರೆ ಮುಂಜಾನೆ ಬಾಲಕಿ ಮನೆ ಸಮೀಪ ಎಲ್ಲೂ ಕಾಣಿಸದ ಕಾರಣ ಆಕೆಗಾಗಿ ಪೋಷಕರು ಹುಡುಕಾಟ ಆರಂಭಿಸಿದರು. ಸ್ವಲ್ಪ ಸಮಯದ ನಂತರ, ಮಗು ಮೆಟ್ರೋ ಸೇತುವೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂತು. ಕೂಡಲೇ ಪೋಷಕರು ಬಾಲಕಿಯನ್ನು ಲೋಕಬಂಧು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರು. ಜೊತೆಗೆ ಅಲಂಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜೂನ್ 5 ರ ಬೆಳಗ್ಗೆ 10 ಗಂಟೆಗೆ ಮೂರು ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ನಡೆದಿದೆ ಎಂದು ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಐದು ತಂಡಗಳನ್ನು ರಚಿಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ದೀಪಕ್ ವರ್ಮಾ ಎಂಬುದು ಖಚಿತವಾಗಿತ್ತು. ಅಲ್ಲದೇ ಆತನ ಪತ್ತೆಗೆ 1 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು. ಇದಾದ ನಂತರ ಘಟನೆ ನಡೆದ 20 ಗಂಟೆ ಒಳಗೆ ಪೊಲೀಸರು ಹಾಗೂ ಆರೋಪಿ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಎನ್‌ಕೌಂಟರ್‌ನಲ್ಲಿ ತೀವ್ರವಾಗಿ ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಗಾಯಗಳಿಂದಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.