* ಕರ್ನಾಟಕದಲ್ಲಿ ಹಿಜಾಬ್ ವಿವಾದದ ಕಿಚ್ಚು ತಾರಕಕ್ಕೆ* ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ* ಮಡಿಕೇರಿಯ ಕಾಲೇಜಿನ ಪ್ರಾಂಶುಪಾಲರಿಗೆ ಜೀವ ಬೆದರಿಕೆ ಕರೆ

ಮಡಿಕೇರಿ, (ಫೆ.20): ಉಡುಪಿಯಲ್ಲಿ (Udupi) ಶುರುವಾದ ಹಿಜಾಬ್ ವಿವಾದ (Hijab Row) ಕರ್ನಾಟಕದ ಮೂಲೆ-ಮೂಲೆಗೂ ವ್ಯಾಪಿಸಿದೆ. ಆದ್ರೆ, ಮುಂದಿನ ತೀರ್ಪಿನವರೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮದ ಗುರುತು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶಿದೆ.

Add Asianetnews Kannada as a Preferred SourcegooglePreferred

ಆದ್ರೆ, ವಿದ್ಯಾರ್ಥಿಗಳು ಹಿಜಾಬ್‌ Students Hijab ) ಧರಿಸಿಯೇ ಕಾಲೇಜಿಗೆ ಆಗಮಿಸುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Hijab Row ಸಮವಸ್ತ್ರ ಇಲ್ಲದೆ ಬಂದ್ರೆ 200 ರೂಪಾಯಿ ದಂಡ: ಕಾಲೇಜಿನಿಂದ ನೋಟಿಸ್

ಈ ನಡುವೆಯೇ, ಮಡಿಕೇರಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೈಕೋರ್ಟ್‌ ಆದೇಶ ಪಾಲಿಸಿ ಎಂದು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿಕೊಂಡದ್ದೇ ಇದೀಗ ಅವರ ಜೀವಕ್ಕೆ ಅಪಾಯ ಬಂದೊಡ್ಡಿದೆ. ಅವರಿಗೆ ಕೊಲೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ್ ಅವರಿಗೆ ಮಹಮ್ಮದ್ ತೌಸಿಫ್ ಎಂಬಾತ 'ನೀನು ಹೆಚ್ಚು ದಿನ ಬದುಕಲ್ಲ' ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ.

ಹಿಜಾಬ್‌ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿರಿಸಿ ತರಗತಿಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೆ ತರಗತಿಗೆ ಹೋಗಲು ಯತ್ನಿಸಿದ್ದರು. ಈ ವೇಳೆ ಪ್ರಾಂಶುಪಾಲ ವಿಜಯ್ ಅವರು ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿ, ಕೋರ್ಟ್‌ ಆದೇಶ ಪಾಲಿಸಿ ಎಂದು ಹೇಳಿದ್ದರು.

ಆದರೂ ವಿದ್ಯಾರ್ಥಿನಿಯರು ಅವರ ವಿರುದ್ಧವೇ ತಿರುಗಿ ಬಿದ್ದಾಗ, ಕಾಲೇಜು ಕೊಠಡಿ ಬಳಿಯೇ ಇದ್ದಾಗ ಪೊಲೀಸರನ್ನು ಕರೆದು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಇಲ್ಲ ಅರೆಸ್ಟ್ ಮಾಡಿ ಕೇಸು ಹಾಕಿ. ಇವರಿಂದಾಗಿ ಉಳಿದ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆ ಆಗುತ್ತಿದೆ ಎಂದು ರೇಗಿದ್ದರು. ಇದರಿಂದ ಈಗ ಜೀವ ಬೆದರಿಕೆ ಹಾಕಲಾಗಿದೆ. ಇದು ಪ್ರಾಂಶುಪಾಲ ವಿಜಯ್ ಅವರ ಗಮನಕ್ಕೆ ಬಂದಿದ್ದು ಮಡಿಕೇರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಶಾಸಕ ರಘುಪತಿ ಭಟ್ ಗೆ ಜೀವ ಬೆದರಿಕೆ
 ಹಿಜಾಬ್ ವಿವಾದ ಕರ್ನಾಟಕ ರಾಜ್ಯದಿಂದ, ದೇಶದ ಬೇರೆ ರಾಜ್ಯಗಳಿಗೆ ಹಬ್ಬಿದೆ. ಈ ಮಧ್ಯೆ ಹಿಜಾಬ್ ವಿವಾದ ಆರಂಭವಾದ ಉಡುಪಿಯ ಶಾಸಕ ರಘುಪತಿ ಭಟ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ವಿದೇಶಗಳಿಂದ ನಿರಂತರ ಫೋನ್ ಕರೆಗಳು ಬರುತ್ತಿದ್ದು, ಇಂಟರ್ನೆಟ್ ಕರೆ ಮಾಡಿ ಕಿಡಿಗೇಡಿಗಳು ಬೆದರಿಸುತ್ತಿದ್ದಾರೆ.

ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಅಂತ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆ ಬರುತ್ತಿವೆ. ದುಷ್ಕರ್ಮಿಗಳು ಕೊಲೆ ಮಾಡುವುದಾಗಿಯೂ ಶಾಸಕ ರಘುಪತಿ ಭಟ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸದ್ಯ ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ, ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳು ನಾನು ನೋಡಿದ್ದೇನೆ. ಉಡುಪಿಯ ಮುಸ್ಲಿಂ ಒಕ್ಕೂಟ, ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ. ಉಡುಪಿ ಶಾಸಕರ ನಿಲುವು ಸರಿ ಇದೆ ಎಂದು ಸಪೋರ್ಟ್ ಮಾಡಿದರೆ ಎಂದು ತಿಳಿಸಿದ್ದಾರೆ.

ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದ ಸರ್ಕಾರದ ಪರ ವಕೀಲ
ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹಿಜಾಬ್ ಪ್ರಕರಣದಲ್ಲಿ (Hijab Issue) ಶುಕ್ರವಾರ ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ (Advocate General Prabhu Navadgi) ವಾದ ಮಂಡಿಸಿದರು. ಹಿಜಾಬ್ ಎನ್ನುವುದು ಎಂದಿಗೂ ಇಸ್ಲಾಂ ನ ಅವಿಭಾಜ್ಯ ಅಂಗವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಏನೇ ತೊಂದರೆ ಆದರೂ ಶಿಕ್ಷಕರ ಸಮಿತಿಯ ಮುಂದೆ ಹೋಗಬಹುದು. ಶಿಕ್ಷಣ ಇಲಾಖೆಯ 12ನೇ ಕಲಂ ನ ಅಡಿ ರಚನೆ ಮಾಡಿರುವ ಸಮಿತಿ ಇದಾಗಿದೆ ಎಂದು ನಾವದಗಿ ವಾದ ಮಂಡನೆ ಮಾಡಿದ್ದಾರೆ.