*  ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಕ್ಕಳ ಕದ್ದು ತಂದು ಮಾರಾಟ*  ಮಕ್ಕಳಿಲ್ಲದವರಿಂದ ಹಣ ಪಡೆದು ವಕೀಲೆಯಿಂದ ಮೋಸ*  ಬಂಧಿತರು ನೀಡಿದ ಸುಳಿವಿನಿಂದ ಮಾಸ್ಟರ್‌ ಮೈಂಡ್‌ ಸೆರೆ 

ಬೆಂಗಳೂರು(ಏ.24): ಬಾಡಿಗೆ ತಾಯ್ತನ ಪ್ರಕರಣದಲ್ಲಿ ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ವಕೀಲೆಯನ್ನು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕುರಬರಹಳ್ಳಿ ನಿವಾಸಿ ಕೆ.ಪಿ.ಭಾನುಮತಿ (41) ಬಂಧಿತ ವಕೀಲೆ(Advocate). ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಮುಖಾಂತರ ಮಕ್ಕಳನ್ನು ಕೊಡುವುದಾಗಿ ನಂಬಿಸಿ ಹಣ ಪಡೆದು ಬಳಿಕ ಬಾಂಬೆಯಿಂದ ಮಕ್ಕಳನ್ನು ಕಳ್ಳ ಸಾಗಣೆ ಮಾಡಿ ಬಾಡಿಗೆ ತಾಯಿಗೆ ಹುಟ್ಟಿದ ಮಗುವೆಂದು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ 2021ರಲ್ಲಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಹೊಂಗಸಂದ್ರದ ರಂಜನಾ ದೇವಿದಾಸ್‌, ವಿಲ್ಸನ್‌ ಗಾರ್ಡನ್‌ನ ದೇವಿ ಷಣ್ಮುಗಂ, ಧನಲಕ್ಷ್ಮಿ, ಮಹೇಶ್‌, ಜನಾರ್ಧನನ್‌ ಎಂಬುವವರನ್ನು ಬಂಧಿಸಿದ್ದರು. ಈ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಇದೀಗ ಪ್ರಕರಣ ಪ್ರಮುಖ ಆರೋಪಿ(Accused) ಭಾನುಮತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Bengaluru Crime: ಫಾರಿನ್‌ಗೆ ಹೋಗಲು ಬೆಂಗ್ಳೂರಲ್ಲಿ 22 ಮನೆಗೆ ಕನ್ನ..!

ಭಾನುಮತಿ ವೃತ್ತಿಯಲ್ಲಿ ವಕೀಲೆಯಾಗಿದ್ದು, ವಿಚ್ಛೇದನ ಹಾಗೂ ಆಸ್ತಿ ತಕರಾರು ಅರ್ಜಿಗಳನ್ನು ನ್ಯಾಯಾಲಯದಲ್ಲಿ(Court) ಇತ್ಯರ್ಥಪಡಿಸುತ್ತಿದ್ದಳು. ಮಕ್ಕಳಿಲ್ಲದ ದಂಪತಿ ಬಳಿ ಬಾಡಿಗೆ ತಾಯ್ತನದ ಬಗ್ಗೆ ವಿವರಿಸುತ್ತಿದ್ದಳು. ನಂತರ ತಾನೇ ಜವಾಬ್ದಾರಿ ವಹಿಸಿಕೊಂಡು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದಂತೆ ದಂಪತಿಯನ್ನು ನಂಬಿಸುತ್ತಿದ್ದಳು. ಬಳಿಕ ಈ ಹಿಂದೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಮುಖಾಂತರ ಮಗುವನ್ನು ಕಳ್ಳಸಾಗಣೆ ಮಾಡಿಕೊಂಡು ಬಳಿಕ ಆ ಮಗುವನ್ನು ಬಾಡಿಗೆ ತಾಯಿಗೆ ಹುಟ್ಟಿದ ಮಗು ಎಂದು ಆ ದಂಪತಿಗೆ ನೀಡುತ್ತಿದ್ದಳು. ಬಾಡಿಗೆ ತಾಯಿಂದ ಮಗು ಪಡೆಯಲು .3 ಲಕ್ಷದಿಂದ .3.50 ಲಕ್ಷ ಪಡೆಯುತ್ತಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್, ಅಪಾರ್ಟ್‌ಮೆಂಟ್ ಟಾರ್ಗೆಟ್..!

ಆಪ್ತ ಸಮಾಲೋಚನೆ ನೆಪದಲ್ಲಿ ಡೀಲ್‌:

ಭಾನುಮತಿ ನಗರದ ಕೆಲವು ಐವಿಎಫ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ ಐಸಿಎಂಆರ್‌ ಗೈಡ್‌ಲೈನ್ಸ್‌ ಆರ್ಟಿಕಲ…ಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಆಗ್ರೀಮೆಂಟ್‌ಗಳನ್ನು ಮಾಡಿಕೊಡುವುದಾಗಿ ಆಸ್ಪತ್ರೆಯ ವೈದ್ಯರನ್ನು ಪರಿಚಯಿಸಿಕೊಂಡು ಮೊಬೈಲ್‌ ನಂಬರ್‌ ಕೊಡುತ್ತಿದ್ದಳು. ಮಕ್ಕಳಾಗದೆ ಐವಿಎಫ್‌ ಆಸ್ಪತ್ರೆಗೆ ಬರುವ ದಂಪತಿ ಬಗ್ಗೆ ವೈದ್ಯರು ಭಾನುಮತಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ದಂಪತಿಗೆ ಆಪ್ತ ಸಮಾಲೋಚನೆ(Counseling) ಮಾಡುವ ಸೋಗಿನಲ್ಲಿ ಭಾನುಮತಿ ಬಾಡಿಗೆ ತಾಯ್ತನದ ಮೂಲಕ ಕಡಿಮೆ ಬೆಲೆಗೆ ಮಗುವನ್ನು ಕೊಡಿಸುವುದಾಗಿ ದಂಪತಿ ಜತೆಗೆ ಒಪ್ಪಂದ ಮಾಡಿಕೊಂಡು ಹಣ ಪಡೆಯುತ್ತಿದ್ದಳು.

ಬಳಿಕ ಮಕ್ಕಳ ಕಳ್ಳ ಸಾಗಣೆ ಗ್ಯಾಂಗ್‌ ಮುಖಾಂತರ ಮಗುವನ್ನು ತರಿಸಿ ಬಾಡಿಗೆ ತಾಯ್ತನಕ್ಕೆ ಹುಟ್ಟಿದ ಮಗುವೆಂದು ನಂಬಿಸಿ ದಂಪತಿಗೆ ಒಪ್ಪಿಸುತ್ತಿದ್ದಳು. ಬೆಂಗಳೂರಿನಲ್ಲಿ ಕದ್ದ ಮಕ್ಕಳನ್ನು ಮುಂಬೈನಲ್ಲಿ ಹಾಗೂ ಮುಂಬೈನಲ್ಲಿ ಕದ್ದ ಮಕ್ಕಳನ್ನು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡುತ್ತಿದ್ದಳು. ಈ ಬಾಂಬೆ ತಂಡ ಬಡ ಕುಟುಂಬ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣದಾಸೆ ತೋರಿಸಿ ಮಕ್ಕಳನ್ನು ಪಡೆದು ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.