ಕೊಪ್ಪಳ ಜಿಲ್ಲೆಯ ಶಿಕ್ಷಕರೊಬ್ಬರು ಧರ್ಮಸ್ಥಳದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಶಾಲೆಯಿಂದ ಕಾಣೆಯಾಗಿದ್ದ ಶಿಕ್ಷಕರ ಸಾವಿನ ಸುತ್ತ ಅನುಮಾನಗಳು ಕಾಡುತ್ತಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಪ್ಪಳ (ಜುಲೈ.22):ಸಾಲು ಸಾಲು ಕೊಲೆ ಪ್ರಕರಣಗಳಿಂದ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಬಸವರಾಜ್ ಪೊಲೀಸ್ ಪಾಟೀಲ್ (35) ಅವರು ಧರ್ಮಸ್ಥಳದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ.
ಬಸವರಾಜ್ ಅವರು ಮಂಗಳವಾರದಿಂದ ಶಾಲೆಯಿಂದ ಕಾಣೆಯಾಗಿದ್ದರು. ಶಾಲೆಯ ಅಡುಗೆ ಕೋಣೆಯ ಕೀ ಸಮೇತ ಅವರು ನಾಪತ್ತೆಯಾಗಿದ್ದರು. ಈ ಘಟನೆ ಶಾಲೆಯ ಆಡಳಿತ ಮಂಡಳಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಊರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು.
ಕಳೆದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು, ಅದರ ಮರುದಿನವೇ ಬಸವರಾಜ್ ಕಾಣೆಯಾಗಿದ್ದರು. ಜುಲೈ 20ರಂದು ಧರ್ಮಸ್ಥಳದ ನೇತ್ರಾವತಿ ಸೇತುವೆಯ ಕೆಳಭಾಗದ ಹಳೆಯ ರಸ್ತೆಯಲ್ಲಿ ಬಸವರಾಜ್ ಅವರ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಿಂದ ಆತ್ಮ ತ್ಯೆಯ ಶಂಕೆ ವ್ಯಕ್ತವಾಗಿದ್ದು, ಬಸವರಾಜ್ ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
