ಕೊಚ್ಚಿಯಲ್ಲಿನ ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್‌. 2020ರ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದ ಸ್ವಪ್ನಾ ಸುರೇಶ್‌. 

ಬೆಂಗಳೂರು(ಮಾ.17): ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
ಹೂಡಿಯ ಹೋಮ್ಸ್‌ ಅನೂಪ್‌ ಲೇಔಟ್‌ ನಿವಾಸಿ ಸ್ವಪ್ನಾ ಸುರೇಶ್‌(42) ನೀಡಿದ ದೂರಿನ ಮೇರೆಗೆ ವಿಜೇಶ್‌ ಪಿಳ್ಳೈ ಎಂಬಾತನ ವಿರುದ್ಧ ಭಾರತೀಯ ದಂಡ ಸಂಹಿತೆ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಪ್ನಾ ಸುರೇಶ್‌ ನೀಡಿದ ದೂರಿನಲ್ಲಿ ‘ಮಾ.3ರಂದು ವಿಜೇಶ್‌ ಪಿಳೈ ಎಂಬುವವರು ನನಗೆ ಕರೆ ಮಾಡಿ ವೈಟ್‌ಫೀಲ್ಡ್‌ ಮುಖ್ಯರಸ್ತೆಯ ದಿ ಜ್ಯೂರಿ ಹೋಟೆಲ್‌ಗೆ ಬರುವಂತೆ ಸೂಚಿಸಿದ್ದರು. ಅದರಂತೆ ಅಂದು ನಾನು ಹೋಟೆಲ್‌ಗೆ ಹೋಗಿದ್ದೆ. ಈ ವೇಳೆ ಆತ, ‘ಕೇರಳ ಸಿಪಿಎಂ ಪಕ್ಷದ ಕಾರ್ಯದರ್ಶಿ ಗೋವಿಂದನ್‌ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಮಧ್ಯೆ ಇರುವ ವಿಚಾರ ಸಂಬಂಧ ನೀನು ಸೆಟ್ಲ್‌ ಮಾಡಿಕೊಂಡು .30 ಕೋಟಿ ತೆಗೆದುಕೊಂಡು ಒಂದು ವಾರದೊಳಗೆ ಬೆಂಗಳೂರಿನಿಂದ ನಾಪತ್ತೆಯಾಗಬೇಕು. ಒಂದು ವೇಳೆ ನೀನು ಹೋಗದಿದ್ದಲ್ಲಿ ನೀನು ಟ್ರಾವೆಲ್‌ ಮಾಡುವಾಗ ಬ್ಯಾಗ್‌ನಲ್ಲಿ ಬಾಂಬ್‌ ಇರಿಸಿ ಸುಳ್ಳು ಕೇಸ್‌ ಹಾಕುತ್ತೇವೆ. ನಿನ್ನನ್ನು ಸಾಯಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉನ್ನತ ಉದ್ಯೋಗಕ್ಕಾಗಿ ಕೇರಳ ಸಿಎಂ ಭೇಟಿಯಾಗಿದ್ದ ಸ್ವಪ್ನಾ ಸುರೇಶ್‌: ಸ್ಫೋಟಕ ವಾಟ್ಸಾಪ್ ಚಾಟ್‌ ಬಹಿರಂಗ

ಸ್ವಪ್ನಾ ಸುರೇಶ್‌ ಯಾರು?

ಕೊಚ್ಚಿಯಲ್ಲಿನ ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್‌. 2020ರ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಳು. ಪಿಣರಾಯಿ ವಿಜಯನ್‌ ಹಾಗೂ ಅವರ ಕುಟುಂಬದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಳು.