ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ.

ಕಾರವಾರ (ಮೇ.02): ಮದ್ಯಪಾನದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದ ನಡುವೆಯೂ ಪತ್ನಿ ಮದ್ಯ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಕದ್ರಾದಲ್ಲಿ ಸಂಭವಿಸಿದೆ. ಕದ್ರಾದ ಚರ್ಚ್‌ವಾಡ ನಿವಾಸಿ, ಆಟೋ ರಿಕ್ಷಾ ಚಾಲಕ ಡುಮಿಂಗ್ ಮನ್ವೇಲ್ ರೊಡ್ರಿಗಿಸ್ (49) ಮೃತಪಟ್ಟ ದುರ್ದೈವಿ.

ಮೃತ ಡುಮಿಂಗ್ ಅವರು ಕಳೆದ ದೀರ್ಘಕಾಲದಿಂದ ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಅತಿಯಾದ ಮದ್ಯಪಾನದಿಂದಾಗಿ ಅವರ ಲಿವರ್‌ಗೆ ಸೋಂಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕುರ್ನಿಪೇಟೆಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ಪರೀಕ್ಷಿಸಿ, ಮದ್ಯಪಾನ ಮುಂದುವರಿಸಿದರೆ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿ, ಕುಡಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಮನನೊಂದು ಜೀವತ್ಯಾಗ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಡುಮಿಂಗ್ ಅವರಿಗೆ ಮದ್ಯದ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಅವರು ತಮ್ಮ ಪತ್ನಿ ಅನಿತಾ ನಜರೇತ್ ಅವರಿಗೆ ತನಗೆ ಮದ್ಯ ತಂದುಕೊಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಪತಿಯ ಆರೋಗ್ಯ ಹದಗೆಡಬಾರದೆಂಬ ಕಳಕಳಿಯಿಂದ ಪತ್ನಿ ಮದ್ಯ ತಂದುಕೊಡಲು ನಿರಾಕರಿಸಿದ್ದರು. ಇದೇ ವಿಚಾರವಾಗಿ ಬೇಸರಗೊಂಡಿದ್ದ ಡುಮಿಂಗ್, ಶುಕ್ರವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಯಾರಿಗೂ ತಿಳಿಸದೆ ಕದ್ರಾದಲ್ಲಿದ್ದ ತಮ್ಮ ಮನೆಗೆ ಬಂದಿದ್ದಾರೆ.

ಶುಕ್ರವಾರ ಬೆಳಗಿನ ಜಾವ 2ರಿಂದ 6.45ರ ಅವಧಿಯಲ್ಲಿ ಮನೆಗೆ ಬಂದ ಡುಮಿಂಗ್, ಮನೆಯ ಎದುರಿನ ಅಂಗಳದಲ್ಲಿ ಹಾಕಲಾಗಿದ್ದ ಶೆಡ್‌ನ ಜಂತಿಗೆ ಕೇಬಲ್ ವೈರ್‌ನಿಂದ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.