ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅನಿಷ್ಕಾರ್ ಚವ್ಹಾಣ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆನ್ಲೈನ್ ಗೇಮ್ನಲ್ಲಿ ಸುಮಾರು 80 ಸಾವಿರ ರೂ. ಸಾಲ ಮಾಡಿಕೊಂಡು, ಅದನ್ನು ತೀರಿಸಲಾಗದೆ ವಸತಿ ನಿಲಯದಲ್ಲಿ ನೇಣಿಗೆ ಶರಣಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಜನರು ಆನ್ಲೈನ್ ಗೇಮ್ಗೆ ಅಡಿಕ್ಟ್ ಆಗಿ ಹಣ ಕಳೆದುಕೊಳ್ಳುವುದು ಹೆಚ್ಚಾಗಿದೆ. ಜೊತೆಗೆ, ಕೆಲವರು ಆನ್ಲೈನ್ ಗೇಮಿಂಗ್ ದಾಸರಾಗಿ ಪ್ರಾಣವನ್ನೂ ಕಳೆದುಕೊಂಡ ಉದಾಹರಣೆಗಳಿವೆ. ಇದೀಗ ಬೀದರ್ನಲ್ಲಿ ಆನ್ಲೈನ್ ಗೇಮ್ಗೆ ಎಂಬಿಬಿಎಸ್ (MBBS) ವಿದ್ಯಾರ್ಥಿ ಬಲಿಯಾಗಿದ್ದಾರೆ. ಅದೂ ಕೂಡ ತನ್ನ ಹಣಕಾಸಿನ ವ್ಯವಹಾರವನ್ನೂ ಮೀರಿದಂತೆ ಸಾಲ ಮಾಡಿಕೊಂಡು ಇದೀಗ ಜೀವ ಬಿಟ್ಟಿದ್ದಾನೆ.
ಹಣ ತೀರಿಸಲಾಗದೇ ಪರದಾಟ
ಅನಿಷ್ಕಾರ್ ಚವ್ಹಾಣ್(21) ಆನ್ಲೈನ್ ಗೇಮ್ನಿಂದ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾರೆ. ಈ ಘಟನೆ ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ. ಯುವಕ ಅನಿಷ್ಕಾರ್ MBBS ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆನ್ಲೈನ್ ಗೇಮ್ನಲ್ಲಿ ಸುಮಾರು 80 ಸಾವಿರ ರೂ. ಕಳೆದುಕೊಂಡು, ಅದನ್ನು ತೀರಿಸಲಾಗದೇ ತುಂಬಾ ಪರದಾಡುತ್ತಿದ್ದನು. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ ಪ್ಯಾನ್ಗೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಅಂತಿಮ ವರ್ಷದಲ್ಲಿ ಸಂಭವಿಸಿದ ದುರಂತ
ಇನ್ನು ಮೃತ ಅನಿಷ್ಕಾರ್ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾದ ನಿವಾಸಿ ಆಗಿದ್ದನು. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಬ್ರಿಮ್ಸ್ ಮೆಡಿಕಲ್ ಕಾಲೇಜಿಗೆ ಸೇರಿಕೊಂಡಿದ್ದು, ಇನ್ನೇ ಅಂತಿಮ ವರ್ಷವನ್ನು ಪೂರ್ಣಗೊಳಿಸಬೇಕು ಎನ್ನುವಷ್ಟರಲ್ಲಿ ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.
ಎಸ್ಪಿ ಪ್ರದೀಪ್ ಗಂಟಿ ಮಾಹಿತಿ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ಅವರು, ಆನ್ಲೈನ್ ಗೇಮಿನಲ್ಲಿ ಹಣ ಕಳೆದುಕೊಂಡಿದಕ್ಕೆ ವಿದ್ಯಾರ್ಥಿ ಅನಿಷ್ಕಾರ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇನ್ನು ವಿದ್ಯಾರ್ಥಿ ಅನಿಷ್ಕಾರ್ ವಾಟ್ಸಾಪ್ನಲ್ಲಿ ಗೇಮ್ ಆಡಿದ ಬಗ್ಗೆ ಚಾಟ್ಗಳು ಸಿಕ್ಕಿವೆ. ಹೀಗಾಗಿ ಮನನೊಂದು ಇಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಬ್ರಿಮ್ಸ್ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಈಗಾಗಲೇ ನಮ್ಮ ಪೊಲೀಸರ ಟೀಂ ತನಿಖೆ ಮಾಡಿದೆ. ಈ ಬಗ್ಗೆ ಪೋಷಕರು ದೂರು ಸಲ್ಲಿಸಲಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಯುವಜನತೆಗೆ ಎಚ್ಚರಿಕೆ:
ಆನ್ಲೈನ್ ಜೂಜು ಮತ್ತು ಗೇಮ್ಗಳು ಯುವಜನತೆಯನ್ನು ದಾರಿತಪ್ಪಿಸುತ್ತಿವೆ. ಕೇವಲ ಹಣ ಗಳಿಕೆಯ ಆಸೆಯಿಂದ ಇಂತಹ ಮಾಯಾಜಾಲಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಪೊಲೀಸರು ಮತ್ತು ಮನಃಶಾಸ್ತ್ರಜ್ಞರು ಮನವಿ ಮಾಡುತ್ತಿದ್ದಾರೆ. ಅನಿಷ್ಕಾರ್ ಸಾವು ಇಡೀ ವೈದ್ಯಕೀಯ ವಲಯಕ್ಕೆ ಮತ್ತು ಅವನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.


