ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಘಟನೆ ನಡೆದ 9 ತಿಂಗಳೊಳಗೆ ತನಿಖೆ ಪೂರ್ಣಗೊಂಡಿದ್ದು, ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಕೊಪ್ಪಳ (ಫೆ.6): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದ ತನಿಖೆ ಈಗ ಮಹತ್ವದ ಹಂತಕ್ಕೆ ಬಂದು ತಲುಪಿದೆ. ಗಂಗಾವತಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಪ್ರಕರಣದ ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿದ್ದು, ಘಟನೆ ನಡೆದ ಕೇವಲ 9 ತಿಂಗಳಲ್ಲಿ ಕಾನೂನು ಹೋರಾಟ ತಾರ್ಕಿಕ ಅಂತ್ಯದತ್ತ ಸಾಗಿದೆ.

ಸಾಣಾಪೂರ ಬಳಿ ನಡೆದಿದ್ದ ಘೋರ ಕೃತ್ಯ

ಕಳೆದ ಮಾರ್ಚ್ ತಿಂಗಳಲ್ಲಿ ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಈ ಪೈಶಾಚಿಕ ಕೃತ್ಯ ನಡೆದಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಅಮಾನವೀಯವಾಗಿ ಅತ್ಯಾ೧ಚಾರವೆಸಗಿದ್ದರು. ಈ ಘಟನೆಯಲ್ಲಿ ಯುವಕನೋರ್ವನ ಕೊಲೆಯಾಗಿತ್ತು.ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿದ್ದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾ*ಚಾರ ಮತ್ತು ಕೊಲೆ 'ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ, ಭುಗಿಲೆದ್ದ ವಿವಾದ!

ಕಟಕಟೆಯಲ್ಲಿ ಕಾಮುಕರು; ಮೂವರ ವಿರುದ್ಧ ಆರೋಪ ಸಾಬೀತು

ಈ ಪ್ರಕರಣದಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮೂವರೂ ದೋಷಿಗಳು ಎಂದು ಆದೇಶಿಸಿದೆ.

ಫೆಬ್ರವರಿ 16ಕ್ಕೆ ಅಂತಿಮ ತೀರ್ಪು: ಜೀವಾವಧಿ ಶಿಕ್ಷೆಯ ಸಾಧ್ಯತೆ?

ದೋಷಿಗಳೆಂದು ಘೋಷಿಸಲ್ಪಟ್ಟಿರುವ ಈ ಮೂವರಿಗೂ ಅತಿ ಕಠಿಣ ಶಿಕ್ಷೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಮೂವರಿಗೂ ಜೀವಾವಧಿ ಶಿಕ್ಷೆಯಾಗುವ ಸಂಭವ ಹೆಚ್ಚಿದೆ. ಇದೇ ಫೆಬ್ರವರಿ 16 ರಂದು ನ್ಯಾಯಾಲಯವು ತನ್ನ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದು, ನೊಂದ ಕುಟುಂಬಕ್ಕೆ ಅಂದು ಸಂಪೂರ್ಣ ನ್ಯಾಯ ಸಿಗಲಿದೆ ಎಂಬ ನಿರೀಕ್ಷೆಯಿದೆ.