ಬೆಂಗಳೂರಿನ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ, ಡಿಸ್ಚಾರ್ಜ್‌ ವೇಳೆ ಡ್ರಿಪ್ಸ್ ತೆಗೆಯುವಾಗ ನರ್ಸ್‌ವೊಬ್ಬರು ಆರು ತಿಂಗಳ ಮಗುವಿನ ಬೆರಳನ್ನು ಕತ್ತರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ದೂರು ನೀಡಿದ್ದು, ನಿರ್ಲಕ್ಷ್ಯ ತೋರಿದ ನರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಡಿಸ್ಚಾರ್ಜ್‌ ಮಾಡುವ ಸಂದರ್ಭದಲ್ಲಿ ಡ್ರಿಪ್ಸ್ ತೆಗೆಯುವಾಗ ನರ್ಸ್‌ವೊಬ್ಬರು 6 ತಿಂಗಳ ಮಗುವಿನ ಎಡಗೈನ ಬೆರಳು ಕತ್ತರಿಸಿರುವ ಘಟನೆ ಇಂದಿರಾನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಂದಿರಾನಗರದ ಆಸ್ಪತ್ರೆಯ ನರ್ಸ್‌ ಅನಿತಾ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದಯನಗರ ನಿವಾಸಿ ವಿಜಯ್ ಕುಮಾರ್‌ ಎಂಬುವರ ಪುತ್ರ ಬಾಲಕುಮಾರ್‌ ಎಂಬ 6 ತಿಂಗಳ ಮಗುವಿನ ಎಡಗೈನ ಕೊನೆ ಬೆರಳು ತುಂಡಾಗಿದೆ. ಈ ಸಂಬಂಧ ವಿಜಯ್‌ ಕುಮಾರ್ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ನರ್ಸ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಮಗುವಿಗೆ ತೀವ್ರ ನೋವು

ವಿಜಯಕುಮಾರ್ ಪುತ್ರ ಬಾಲಕುಮಾರ್‌ಗೆ ಶೀತ ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆ.19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ತಜ್ಞೆಯೊಬ್ಬರು ಚಿಕಿತ್ಸೆ ನೀಡುತ್ತಿದ್ದರು. ಫೆ.24ರಂದು ಮಗುವನ್ನು ಡಿಸ್ಚಾರ್ಜ್ ಮಾಡಲು ವೈದ್ಯೆ ಹೇಳಿದ್ದರು. ಅದರಂತೆ ನರ್ಸ್‌ ಅನಿತಾ, ಮಗುವಿಗೆ ಹಾಕಿದ್ದ ಡ್ರಿಪ್ಸ್‌ ಅನ್ನು ತೆಗೆದು ಹಾಕುವಾಗ ಬಾಲಕುಮಾರ್‌ನ ಎಡಗೈನ ಕೊನೆ ಬೆರಳನ್ನು ಕತ್ತರಿಸಿದ್ದಾರೆ. ಅದರಿಂದ ಮಗುವಿಗೆ ತೀವ್ರ ನೋವು ಹಾಗೂ ಗಾಯವಾಗಿದೆ.

ಮಗು ಚಿಕ್ಕದಿರುವ ಕಾರಣ ಗಾಯ ಬೇಗ ವಾಸಿ ಆಗುತ್ತೆ: ವೈದ್ಯರ ಭರವಸೆ

ತಕ್ಷಣ ಆಸ್ಪತ್ರೆಯ ವೈದ್ಯರು ಡ್ರೆಸ್ಸಿಂಗ್‌ ಮಾಡಿ, ಪ್ಲಾಸ್ಟರ್ ಮಾಡಿದ್ದಾರೆ. ಯಾವುದೇ ದೊಡ್ಡ ಗಾಯವಾಗಿಲ್ಲ. ಮಗು ಚಿಕ್ಕ ವಯಸ್ಸಿನವನಾಗಿರುವುದರಿಂದ ಗಾಯ ಸ್ವತಃ ಗುಣಮುಖವಾಗುತ್ತದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ, ನಿರ್ಲಕ್ಷ್ಯ ವಹಿಸಿದ ನರ್ಸ್‌ ಅನಿತಾ, ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿಜಯ್ ಕುಮಾರ್ ದೂರು ನೀಡಿದ್ದರು. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.