Asianet Suvarna News Asianet Suvarna News

ರಾಮನಗರ: ವರದಕ್ಷಿಣೆ ಆಸೆಗಾಗಿ ಮಹಿಳೆಗೆ ವಿಷ ಕುಡಿಸಿದ ಪತಿ ಮನೆಯವರು!

ತುಮಕೂರು ಜಿಲ್ಲೆ ಕುಣಿಗಲ್ ಟೌನಿನ ಬಿಎಲ್ ಆರ್‌ಎಸ್ ಲೇಔಟ್ ವಾಸಿ ವೀರಣ್ಣ ಮತ್ತು ಗೌರಮ್ಮ ದಂಪತಿ ಪುತ್ರಿ ವಿದ್ಯಾಶ್ರೀ ಮತ್ತು ಮಾಗಡಿ ತಾಲೂಕು ಕೂಡೂರು ಗ್ರಾಮದ ರೇಣುಕಪ್ಪ ಪುತ್ರ ಕರುಣೇಶ್ ಅವರೊಂದಿಗೆ 3 ವರ್ಷಗಳ ಹಿಂದೆ ಮದುವೆ ಆಗಿತ್ತು. ಆ ಸಂದರ್ಭದಲ್ಲಿ ವರನಿಗೆ 250 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ, 5 ಲಕ್ಷ ಹಣ ನೀಡಿ ಸುಮಾರು 15 ಲಕ್ಷ ರು.ಖರ್ಚು ಮಾಡಿ ವಿವಾಹ ಮಾಡಿಕೊಡಲಾಗಿತ್ತು. 

Husband family attempt to Kill Woman For Dowry in Ramanagara grg
Author
First Published Oct 16, 2024, 8:51 PM IST | Last Updated Oct 16, 2024, 8:51 PM IST

ಕುದೂರು(ಅ.16): ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಗೆ ಆಕೆಯ ಪತಿ ಮನೆಯವರು ವಿಷ ಕುಡಿಸಿ ಸಾಯಿಸಲು ಯತ್ನಿಸಿರುವ ಘಟನೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಕೂಡೂರು ಗ್ರಾಮದಲ್ಲಿ ನಡೆದಿದೆ. ವಿಷ ಕುಡಿಸಿದ್ದರಿಂದ ಅಸ್ವಸ್ಥಗೊಂಡಿರುವ ವಿದ್ಯಾಶ್ರೀ (22) ಅವರನ್ನು ನೆಲಮಂಗಲದ ವಿ.ಪಿ.ಮ್ಯಾಗ್ನಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 

ತುಮಕೂರು ಜಿಲ್ಲೆ ಕುಣಿಗಲ್ ಟೌನಿನ ಬಿಎಲ್ ಆರ್‌ಎಸ್ ಲೇಔಟ್ ವಾಸಿ ವೀರಣ್ಣ ಮತ್ತು ಗೌರಮ್ಮ ದಂಪತಿ ಪುತ್ರಿ ವಿದ್ಯಾಶ್ರೀ ಮತ್ತು ಮಾಗಡಿ ತಾಲೂಕು ಕೂಡೂರು ಗ್ರಾಮದ ರೇಣುಕಪ್ಪ ಪುತ್ರ ಕರುಣೇಶ್ ಅವರೊಂದಿಗೆ 3 ವರ್ಷಗಳ ಹಿಂದೆ ಮದುವೆ ಆಗಿತ್ತು. ಆ ಸಂದರ್ಭದಲ್ಲಿ ವರನಿಗೆ 250 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ, 5 ಲಕ್ಷ ಹಣ ನೀಡಿ ಸುಮಾರು 15 ಲಕ್ಷ ರು.ಖರ್ಚು ಮಾಡಿ ವಿವಾಹ ಮಾಡಿಕೊಡಲಾಗಿತ್ತು. 

ಈಗ ಕರುಣೇಶ್ ಮತ್ತು ವಿದ್ಯಾಶ್ರೀ ದಂಪತಿಗೆ 2 ವರ್ಷದ ಗಂಡು ಮಗು ಇದೆ. ಪತಿ ಕರುಣೇಶ್ ಮನೆಯವರು ವರದಕ್ಷಿಣೆ ನೀಡಬೇಕೆಂದು ಪದೆ ಪದೇ ಕಿರುಕುಳ ನೀಡುತ್ತಿರುವ ವಿಚಾರವನ್ನು ವಿದ್ಯಾಶ್ರೀ ತನ್ನ ಪೋಷಕರಿಗೆ ಹೇಳುತ್ತಿದ್ದರು. ಕಳೆದ ಮಾರ್ಚ್ 14ರಂದು ಪತಿ ಕರುಣೇಶ್, ಅತ್ತೆ ಸರ್ವಮ್ಮ, ಮಾವ ರೇಣುಕಪ್ಪ, ನಾದಿನಿ ಚೈತ್ರಾ, ಆಕೆಯ ಗಂಡ ವಿನೋದ್ ಕುಮಾರ್‌ಸೇರಿಕೊಂಡು ವಿದ್ಯಾಶ್ರೀ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಗ್ರಾಮದ ಮುಖಂಡರು ಮಧ್ಯಸ್ಥಿಕೆ ವಹಿಸಿ ರಾಜೀ ಸಂಧಾನ ಮಾಡಿ ವಿದ್ಯಾಶ್ರೀಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಿ ಕೊಟ್ಟಿದ್ದರು. 

ಅ.14ರ ಬೆಳಗ್ಗೆ 6 ಗಂಟೆ ಸಮಯದಲ್ಲಿ ವಿದ್ಯಾಶ್ರೀ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡು ಪಕ್ಕದ ಮನೆಯವರಾದ ದೀಪು ಮತ್ತು ಸ್ನೇಹಿತರು ಮನೆಯ ಬಾಗಿಲು ಒಡೆದು ಆಕೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಪೋಷಕರು ವೈದ್ಯರನ್ನು ವಿಚಾರಿಸಿದಾಗ ವಿದ್ಯಾಶ್ರೀಗೆ ವಿಷ ಕುಡಿಸಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 

ಕಳೆದ 8 ದಿನಗಳಿಂದ ಪತಿ ಮನೆಯವರು ವಿದ್ಯಾಶ್ರೀಗೆ ಹಿಂಸೆ ನೀಡುತ್ತಿದ್ದರು. ಹಬ್ಬ ಮುಗಿಸಿಕೊಂಡು ಮಾತನಾಡುವುದಾಗಿ ತಿಳಿಸಿದ್ದೇವು. ಈಗ ಆಕೆಗೆ ವಿಷ ಕುಡಿಸಿ ಸಾಯಿಸಲು ಯತ್ನಿಸಿದ್ದಾರೆ. ಇದಕ್ಕೆ ಕಾರಣರಾದ ಮಗಳ ಪತಿ ಕರುಣೇಶ್, ಅತ್ತೆ ಸರ್ವಮ್ಮ, ಮಾವ ರೇಣುಕಪ್ಪ, ನಾದಿನ ಚೈತ್ರ ಹಾಗೂ ಆಕೆಯ ಗಂಡ ವಿನೋದ್ ಕುಮಾರ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿದ್ಯಾಶ್ರೀ ತಾಯಿ ಗೌರಮ್ಮ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios