ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸುಮಾರು 4 ಕೋಟಿ ಮೌಲ್ಯದ 6.5 ಕೆ.ಜಿ. ತೂಕದ ಏಳು ಚಿನ್ನದ ಬಿಸ್ಕತ್‌ಗಳನ್ನು ಕಳ್ಳ ಸಾಗಣೆ ಮಾಡಲು ಯತ್ನಿಸಿದ ಚೆನ್ನೈ ಮೂಲದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು (ಜು.19): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸುಮಾರು 4 ಕೋಟಿ ಮೌಲ್ಯದ 6.5 ಕೆ.ಜಿ. ತೂಕದ ಏಳು ಚಿನ್ನದ ಬಿಸ್ಕತ್‌ಗಳನ್ನು ಕಳ್ಳ ಸಾಗಣೆ ಮಾಡಲು ಯತ್ನಿಸಿದ ಚೆನ್ನೈ ಮೂಲದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.

ಇದು ಇತ್ತೀಚೆಗೆ ಕೆಐಎ ವಿಮಾನ ನಿಲ್ದಾಣದಲ್ಲಿ ನಡೆದ ಅತಿದೊಡ್ಡ ಚಿನ್ನದ ಕಳ್ಳಸಾಗಣೆ ಯತ್ನದ ಪ್ರಕರಣ ಎನ್ನಲಾಗಿದೆ. ದೇಶಿ ವಿಮಾನ ಮಾರ್ಗ ಬಳಸಿಕೊಂಡು ಭಾರೀ ಪ್ರಮಾಣದ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಬೆಂಗಳೂರು ಘಟಕದ ಅಧಿಕಾರಿಗಳು ಶುಕ್ರವಾರ ಈ ಕಾರ್ಯಾಚರಣೆ ನಡೆಸಿ ಮಾಲು ಸಹಿತ 35 ವರ್ಷದ ಚೆನ್ನೈ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕೆಆರ್‌ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ಆರೋಪಿ ಶುಕ್ರವಾರ ಇಂದೋರ್‌ನಿಂದ ಇಂಡಿಗೋ ವಿಮಾನದಲ್ಲಿ ಕೆಐಎ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ವಿಮಾನ ಇಳಿದು ಹೊರಗೆ ಬರುವಾಗ ಡಿಆರ್‌ಐ ಅಧಿಕಾರಿಗಳು ಆರೋಪಿಯನ್ನು ತಡೆದು ಬ್ಯಾಗ್‌ ಪರಿಶೀಲಿಸಿದಾಗ, 6.5 ಕೆ.ಜಿ. ತೂಕದ ಏಳು ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಚಿನ್ನ ಕಳ್ಳ ಸಾಗಣೆ ಗ್ಯಾಂಗ್‌ನ ಸದಸ್ಯರ ಸೂಚನೆ ಮೇರೆಗೆ ಕೆಲ ದಿನಗಳ ಹಿಂದೆ ಚೆನ್ನೈನಿಂದ ಇಂದೋರ್‌ಗೆ ತೆರಳಿದ್ದೆ. 

ಬಳಿಕ ಇಂದೋರ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ನಿರ್ದಿಷ್ಟಆಸನ ಬುಕ್‌ ಮಾಡಿದ್ದೆ. ಆ ಆಸನದ ಕೆಳಗೆ ಚಿನ್ನದ ಬಿಸ್ಕತ್‌ಗಳನ್ನು ಅಂಟಿಸಲಾಗಿತ್ತು. ಗ್ಯಾಂಗ್‌ನ ಸೂಚನೆ ಮೇರೆಗೆ ಆ ಬಿಸ್ಕತ್‌ಗಳನ್ನು ತೆಗೆದುಕೊಂಡು ಬ್ಯಾಗಿಗೆ ಹಾಕಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾಗಿ ಆರೋಪಿ ಚಿನ್ನ ಕಳ್ಳಸಾಗಣೆ ಬಗ್ಗೆ ಬಾಯ್ಬಿಟ್ಟಿದ್ದಾನೆ.

35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

ದುಬೈ-ಇಂದೋರ್‌ ಟು ಬೆಂಗಳೂರು!: ಚಿನ್ನ ಕಳ್ಳ ಸಾಗಣೆಯ ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಇಂಡಿಗೋ ವಿಮಾನದಲ್ಲಿ ದುಬೈನಿಂದ ಇಂದೋರ್‌ಗೆ ಬಂದಿದ್ದ. ಈ ವೇಳೆ ಚಿನ್ನದ ಬಿಸ್ಕತ್‌ಗಳನ್ನು ಆಸನದ ಕೆಳಗೆ ಅಂಟಿಸಿದ್ದ. ಈ ಬಗ್ಗೆ ಆರೋಪಿಗೆ ಸೂಚನೆ ನೀಡಿದ್ದ. ಅದರಂತೆ ಈತ ಇಂದೋರ್‌ನಲ್ಲಿ ವಿಮಾನ ಟೇಕಾಫ್‌ ಆದ ಬಳಿಕ ಆಸನದ ಕೆಳಗೆ ಇದ್ದ ಚಿನ್ನದ ಬಿಸ್ಕತ್‌ಗಳನ್ನು ತೆಗೆದುಕೊಂಡು ಬ್ಯಾಗ್‌ಗೆ ಹಾಕಿಕೊಂಡಿದ್ದ. ದೇಶಿಯ ಪ್ರಯಾಣಿಕರನ್ನು ಕಸ್ಟಮ್ಸ್‌ ಅಥವಾ ಡಿಆರ್‌ಐ ಅಧಿಕಾರಿಗಳು ತಪಾಸಣೆ ಮಾಡುವುದಿಲ್ಲ ಎಂದು ಕೆಐಎ ವಿಮಾನ ನಿಲ್ದಾಣಕ್ಕೆ ಬಂದಿದ್ದ.