- Home
- Karnataka Districts
- ಚಿಕ್ಕಮಗಳೂರು: ನನ್ ಹೆಂಡ್ತಿಗೆ ಕಂಡ್ ಕಂಡೋನು ಮೆಸೇಜ್ ಮಾಡ್ತಾನೆಂದು ಆತ್ಮ*ಹತ್ಯೆ ಮಾಡಿಕೊಂಡ ಗಂಡ!
ಚಿಕ್ಕಮಗಳೂರು: ನನ್ ಹೆಂಡ್ತಿಗೆ ಕಂಡ್ ಕಂಡೋನು ಮೆಸೇಜ್ ಮಾಡ್ತಾನೆಂದು ಆತ್ಮ*ಹತ್ಯೆ ಮಾಡಿಕೊಂಡ ಗಂಡ!
ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿ ಗ್ರಾಮದಲ್ಲಿ, ಪತ್ನಿಯ ಅಕ್ರಮ ಸಂಬಂಧ ಹಾಗೂ ಆಕೆಗೆ ಬರುತ್ತಿದ್ದ ಸಂದೇಶಗಳಿಂದ ಮನನೊಂದು ಮನು ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಪತ್ನಿ ಹಾಗೂ ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಿ ಮೃತನ ಪೋಷಕರು ದೂರು ನೀಡಿದ್ದಾರೆ.

ಚಿಕ್ಕಮಗಳೂರು ಮನು
ಚಿಕ್ಕಮಗಳೂರು (ಫೆ.21): ಸಂಸಾರದಲ್ಲಿ ಅನುಮಾನ ಎಂಬ ಹೆಮ್ಮಾರಿ ಹೊಕ್ಕರೆ ಎಂತಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಈ ದಾರುಣ ಘಟನೆಯೇ ಸಾಕ್ಷಿ. ಪತ್ನಿಯ ಅಕ್ರಮ ಸಂಬಂಧ ಹಾಗೂ ಆಕೆಗೆ ಪರಪುರುಷನಿಂದ ಬರುತ್ತಿದ್ದ ಸಂದೇಶಗಳಿಂದ (Messages) ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬ್ಯಾಗದಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ:
ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿ ಗ್ರಾಮದ ನಿವಾಸಿ ಮನು (26) ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಮನು ಅವರಿಗೆ ವಿವಾಹವಾಗಿದ್ದು, ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಪತ್ನಿಯ ಅಕ್ರಮ ಸಂಬಂಧದ ವಿಚಾರವಾಗಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿಯ ಮೊಬೈಲ್ಗೆ ಪರಪುರುಷನೊಬ್ಬ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರ ಮನು ಅವರಿಗೆ ತಿಳಿದಿತ್ತು. ಇದು ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು.
ನಿನ್ನೆ ರಾತ್ರಿ ನಡೆದಿದ್ದ ಹೈಡ್ರಾಮಾ
ಶುಕ್ರವಾರ ರಾತ್ರಿ ಇದೇ ವಿಚಾರವಾಗಿ ಮನು ಮತ್ತು ಅವರ ಪತ್ನಿ ನಡುವೆ ದೊಡ್ಡ ಮಟ್ಟದ ಜಗಳ ನಡೆದಿತ್ತು. ಈ ವೇಳೆ ಪತ್ನಿಯ ಆಪ್ತ ಸ್ನೇಹಿತ ಎನ್ನಲಾದ ವ್ಯಕ್ತಿಯೂ ಸ್ಥಳದಲ್ಲಿದ್ದು, ಮನು ಅವರೊಂದಿಗೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಸ್ಥಳೀಯರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ, ಸಮಾಧಾನಪಡಿಸಿ ಅಲ್ಲಿಂದ ತೆರಳಿದ್ದರು.
ಮನನೊಂದು ಪ್ರಾಣ ಬಿಟ್ಟ ಮನು:
ಪೊಲೀಸರು ಬಂದು ಹೋದ ನಂತರವೂ ಮನು ತೀವ್ರ ಮಾನಸಿಕ ವೇದನೆಗೆ ಒಳಗಾಗಿದ್ದರು ಎನ್ನಲಾಗಿದೆ. ಪತ್ನಿಯ ನಡವಳಿಕೆ ಮತ್ತು ಸಾರ್ವಜನಿಕವಾಗಿ ಉಂಟಾದ ಅವಮಾನದಿಂದ ನೊಂದ ಮನು, ಇಂದು ತನ್ನ ಮನೆಯಲ್ಲೇ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಪೋಷಕರ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹ
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮನು ಪೋಷಕರು ಮತ್ತು ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿದೆ. 'ನಮ್ಮ ಮಗನ ಸಾವಿಗೆ ಆತನ ಪತ್ನಿಯ ಅಕ್ರಮ ಸಂಬಂಧವೇ ಕಾರಣ. ಆಕೆ ಮತ್ತು ಆಕೆಯ ಪ್ರಿಯಕರ ಮಗನಿಗೆ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕು' ಎಂದು ಮನು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ
ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪತ್ನಿಯ ಅಕ್ರಮ ಸಂಬಂಧದ ಆಯಾಮದಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

