ಹುಬ್ಬಳ್ಳಿ: ಪ್ರಿಯಕರ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ
ದಾನಿಷ್ ಎಂಬಾತನನ್ನು ಪ್ರೀತಿಸುತ್ತಿದ್ದ ಯುವತಿ| ಯುವಕ ಬೈದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ| ಬೆಂಕಿ ತಗುಲಿ ವೃದ್ಧೆ ಸಾವು| ವಾಹನವೊಂದಕ್ಕೆ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸಾವು|
ಹುಬ್ಬಳ್ಳಿ(ಡಿ.14): ಪ್ರಿಯಕರ ಬೈದ ಎಂಬ ಕಾರಣಕ್ಕೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನೇಹಾ ಆತ್ಮಹತ್ಯೆ ಮಾಡಿಕೊಂಡವಳು. ಈಕೆ ದಾನಿಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಬೈದ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ; ಇಬ್ಬರ ಸಾವು
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಸರ್ಕಾರಿ ಕಾಲೇಜು ಬಳಿ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಬಸವರಾಜ ತಳವಾರ ಮತ್ತು ಹನುಮಂತ ಚಿಕ್ಕನರ್ತಿ ಮೃತಪಟ್ಟಿದ್ದಾರೆ. ಬೈಕ್ ಮೇಲೆ ತೆರಳುತ್ತಿದ್ದ ಇವರಿಗೆ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!
ಬೆಂಕಿ ತಗುಲಿ ವೃದ್ಧೆ ಸಾವು
ಸ್ನಾನ ಮಾಡುವ ವೇಳೆ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಉಂಟಾಗಿ ಬೆಂಕಿ ತಗಲಿದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಕಸಬಾ ಪೇಟೆ ನಿವಾಸಿ ಮುಮ್ತಾಜ್ ಮೆಹಬೂಬಸಾಬ್ ಮಿಠಾಯಿಗರ (65) ಮೃತಪಟ್ಟವರು. ಗೀಜರ್ನಿಂದ ಅನಿಲ ಸೋರಿಕೆ ಆಗುತ್ತಿದ್ದುದನ್ನು ಗಮನಿಸದೆ ಮುಮ್ತಾಜ್ ಸ್ನಾನಕ್ಕೆ ಹೋಗಿದ್ದರು. ಬೆಂಕಿ ತಗುಲುತ್ತಿದ್ದಂತೆ ಕಾಪಾಡುವಂತೆ ಮೊರೆ ಇಟ್ಟಿದ್ದಾರೆ. ಅವರನ್ನು ರಕ್ಷಿಸಿ ಕಿಮ್ಸ್ಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.