Asianet Suvarna News Asianet Suvarna News

ಬೆಂಗಳೂರು: ಅಂತಾರಾಜ್ಯ ಮನೆಗಳ್ಳ ಸೇರಿ ನಾಲ್ವರ ಬಂಧನ

ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳ ಸೇರಿ ಮೂವರು ಆರೋಪಿಗಳು| ಬಂಧಿತರಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ| ಕಳ್ಳತನ ಮಾಡಿ ಚಿನ್ನಾಭರಣ ಮಾರಾಟದಿಂದ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ ಖದೀಮರು| 

Four Accused Arrested for Theft Case in Bengaluru grg
Author
Bengaluru, First Published Apr 10, 2021, 7:45 AM IST

ಬೆಂಗಳೂರು(ಏ.10):  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉತ್ತರ ವಿಭಾಗದ ಪೊಲೀಸರು ಅಂತಾರಾಜ್ಯ ಮೂಲದ ಆರೋಪಿ ಸೇರಿ ನಾಲ್ವರನ್ನು ಬಂಧಿಸಿ, 30 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ತಮಿಳುನಾಡಿನಿಂದ ಬಂದು ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳ ಸೇರಿ ಮೂವರು ಆರೋಪಿಗಳು ಸಂಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಮಿಳುನಾಡು ಮೂಲದ ಮಣಿ(42), ಆರುಮುಗಂ(43), ಶ್ರೀರಾಮಪುರದ ಪಾಂಡಿಯನ್‌ (53) ಬಂಧಿತರು. ಮತ್ತೊಬ್ಬ ಆರೋಪಿ ಪಾಂಡಿಯನ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ .15.92 ಲಕ್ಷ ಮೌಲ್ಯದ 316 ಗ್ರಾಂ ಚಿನ್ನಾಭರಣ, 200 ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಮಾ.3ರಂದು ಶ್ವೇತಾ ಸುಬ್ರಹ್ಮಣಿಯನ್‌ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾ.29ರಂದು ಬೆಳಗಿನ ಜಾವ 2.30ರ ಸುಮಾರಿಗೆ ಸಂಜಯನಗರದ ಎಚ್‌ಐಜಿ ಕಾಲೋನಿಯಲ್ಲಿ ಪೊಲೀಸರು ಗಸ್ತಿನಲ್ಲಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಆರೋಪಿಗಳು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದಾರೆ. ಅನುಮಾನಗೊಂಡು ಆರೋಪಿಗಳನ್ನು ಹಿಡಿದು ಪರಿಶೀಲನೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಫೋಲಿಸರು ತಿಳಿಸಿದ್ದಾರೆ.

ಡ್ರಗ್ಸ್‌ ಹೆಸರಲ್ಲಿ ಬೆದರಿಸಿ ಸುಲಿಗೆ ಮಾಡಿದ ನಕಲಿ ಸಿಸಿಬಿ..!

ಮತ್ತೊಂದು ಪ್ರಕರಣದಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್‌ ಮೂಲದ ಪ್ರೇಮ್‌ ಕುಮಾರ್‌ (32) ಬಂಧಿತ. ಆರೋಪಿಯಿಂದ . 14.5 ಲಕ್ಷ ಬೆಲೆ ಬಾಳುವ 320 ಗ್ರಾಂ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ರಾಡ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಣಿ ಚೆನ್ನೈನಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ. ಒಮ್ಮೆ ಕಳ್ಳತನ ಮಾಡಿ ಜೈಲು ಸೇರಿದ್ದ. ಬಳಿಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ಕಳ್ಳತನ ಕೃತ್ಯಕ್ಕೆ ಇಳಿದಿದ್ದ. ಮಣಿ ವಿರುದ್ಧ ತಮಿಳುನಾಡಿನಲ್ಲಿ 79ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ಐದು ತಿಂಗಳ ಹಿಂದೆಯಷ್ಟೇ ಆರೋಪಿ ತಮಿಳುನಾಡಿನ ಜೈಲಿನಿಂದ ಬಿಡುಗಡೆಯಾಗಿ ನಗರಕ್ಕೆ ಬಂದಿದ್ದ. ತಲೆಮರೆಸಿಕೊಂಡಿರುವ ಆರೋಪಿ ಪಾಂಡಿಯನ್‌ ಸೂಚನೆಯಂತೆ ಮಣಿ ನಗರಕ್ಕೆ ಬಂದಿದ್ದ. ಕಳ್ಳತನ ಮಾಡಿ ಚಿನ್ನಾಭರಣ ಮಾರಾಟದಿಂದ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದಾಗಿ ಸಂಜಯನಗರ 2, ವಿದ್ಯಾರಣ್ಯಪುರ, ಮಲ್ಲೇಶ್ವರಂ, ಕೊಡಿಗೇಹಳ್ಳಿ, ಸದಾಶಿವನಗರ, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ತಮಿಳುನಾಡಿನ ಮಾರಿಕುಪ್ಪಂ, ರಾಮಮೂರ್ತಿ ನಗರ, ವಿದ್ಯಾರಣ್ಯಪುರ ಠಾಣೆಗಳಲ್ಲಿ ಎಂಟು ಹಗಲು ಮತ್ತು ರಾತ್ರಿ ಕಳವು ಮಾಡುತ್ತಿದ್ದ. ರಾಮಮೂರ್ತಿ ನಗರ ಪೊಲೀಸರಿಂದ 2014ರಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. 2019ರ ಅಕ್ಟೋಬರ್‌ನಲ್ಲಿ ವಿದ್ಯಾರಣ್ಯಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಬಿಡುಗಡೆ ನಂತರವೂ ಕೂಡ ಕೃತ್ಯ ಮುಂದುವರೆಸಿದ್ದ. ಈತನ ಬಂಧನದಿಂದಾಗಿ ನಂದಿನಿ ಲೇಔಟ್‌ ಠಾಣೆಯ ಎರಡು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
 

Follow Us:
Download App:
  • android
  • ios