Asianet Suvarna News Asianet Suvarna News

Belagavi: ಐದು ಜನ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜೈಲು ಶಿಕ್ಷೆ

ಭೂಸ್ವಾಧೀನ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ನೀರಾವರಿ ಇಲಾಖೆಯ ಐದು ಜನ ಅಧಿಕಾರಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಿ ಇಲ್ಲಿನ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

five engineers of karnataka irrigation department sent to jail for corruption gvd
Author
Bangalore, First Published Aug 13, 2022, 10:28 PM IST

ಬೆಳಗಾವಿ (ಆ.13): ಭೂಸ್ವಾಧೀನ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ನೀರಾವರಿ ಇಲಾಖೆಯ ಐದು ಜನ ಅಧಿಕಾರಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಿ ಇಲ್ಲಿನ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

ನವಿಲುತೀರ್ಥ ವೃತ್ತ ಕಚೇರಿಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣದ ಅಂದಿನ ಅಧೀಕ್ಷಕ ಅಭಿಯಂತರ ಬಿ. ಪದ್ಮನಾಭ, ಗದಗ ಜಿಲ್ಲೆಯ ನರಗುಂದ ಎಂಆರ್‌ಬಿಸಿ ವಿಭಾಗ ನಂ.1ರ ಅಂದಿನ ಕಾರ್ಯನಿರ್ವಾಹಕ ಅಭಿಯಂತರ ಎಂ.ಬಿ.ಕವದಿ, ನವಿಲುತೀರ್ಥ ವೃತ್ತ ಕಚೇರಿಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವೃತ್ತ ಕಚೇರಿಯ ಅಂದಿನ ತಾಂತ್ರಿಕ ಸಹಾಯಕ (ಎಇಇ) ಆನಂದ ಕೇಶವರಾವ್‌ ಮಿರ್ಜಿ, ಕಿರಿಯ ಅಭಿಯಂತರೆ ಶೋಭಾ ಟಿ. ಹಾಗೂ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಉಪವಿಭಾಗ ನಂ. 5 ಶಿರಸಂಗಿ ಕಿರಿಯ ಅಭಿಯಂತರ ಪ್ರಕಾಶ ಫಕ್ಕೀರಪ್ಪಾ ಹೊಸಮನಿ ಶಿಕ್ಷೆಗೆ ಗುರಿಯಾದವರು.

ಡ್ಯಾಂಗಳಿಂದ ಭಾರೀ ನೀರು ಬಿಡುಗಡೆ: ಉತ್ತರ ಕರ್ನಾಟಕದಲ್ಲಿ ಇನ್ನೂ ಪ್ರವಾಹ ಭೀತಿ

ಪ್ರಕರಣದ ಹಿನ್ನೆಲೆ: ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿರುವ ಎಲ್ಲ ಮನೆಗಳು ನೀರಿನಿಂದ ಜವಳು (ಜೌಗು) ಉಂಟಾಗಿತ್ತು. ಹೀಗಾಗಿ ಜನರಿಗೆ ವಾಸ ಮಾಡಲು ಯೋಗ್ಯವಿರಲಿಲ್ಲ. ಇದರಿಂದ ಸರ್ಕಾರ ಭೂಸ್ವಾಧೀನ ಕಾಯ್ದೆ ಪ್ರಕಾರ ಅವುಗಳನ್ನು ಸ್ವಾಧೀನಪಡಿಸಿ ಪುನರ್ವಸತಿ ಕ್ರಮಕೈಗೊಳ್ಳುವ ಪ್ರಕ್ರಿಯೆಯಲ್ಲಿ ಶಿಕ್ಷೆಗೊಳಗಾದ ಅಧಿಕಾರಿಗಳು ಲಂಚಕೊಟ್ಟವರಿಗೆ ಭೂಸ್ವಾಧೀನ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರಧನ ಮಂಜೂರು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. 

ಅಲ್ಲದೆ ಒಳಒಪ್ಪಂದ ಮಾಡಿಕೊಂಡು ಭ್ರಷ್ಟತನದಿಂದ ತಮಗೆ ಬೇಕಾದವರಿಗೆ ಹೆಚ್ಚಿನ ಪರಿಹಾರ ಮೊತ್ತ ನಿಗದಿಪಡಿಸಿ ಅವಾರ್ಡ್‌ ಮಾಡಿಸಿ ತಮ್ಮ ಕಾರ್ಯವೈಖರಿಯಲ್ಲಿ ಸರ್ಕಾರಕ್ಕೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕಗದಾಳ ಗ್ರಾಮದ ಹಣಮಪ್ಪ ಗದಿಗೆಪ್ಪ ಮಾದರ ಎಂಬುವರು 2012 ಜೂನ್‌ 13ರಂದು ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಅಂದಿನ ಲೋಕಾಯುಕ್ತ ಪೊಲೀಸ್‌ ಉಪಾಧೀಕ್ಷಕ ಎಚ್‌.ಜಿ. ಪಾಟೀಲ ಹಾಗೂ ಜಿ.ಆರ್‌.ಪಾಟೀಲ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಕೆ ಮಾಡಿದ್ದರು. 

ಚಿರತೆ ಭೀತಿಯಿಂದ 12 ಶಾಲೆಗಳಿಗೆ ರಜೆ: ಗ್ರಾಮಸ್ಥರಲ್ಲಿ ಭಯ

ಈ ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ನ್ಯಾಯಾಧೀಶ ಮೋಹನ ಪ್ರಭು ಅವರು, ಐದು ಜನರ ಅಪರಾಧಿಗಳಿಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 70 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಕಾಲತ್ತುವಹಿಸಿದ್ದರು. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುವಲ್ಲಿ ಶ್ರಮಿಸಿದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕಿ ಯಶೋಧಾ ವಂಟಗೋಡಿ ಅಭಿನಂದಿಸಿದ್ದಾರೆ.

Follow Us:
Download App:
  • android
  • ios